ದಕ್ಷಿಣ ಭಾರತದ ಮೋಸ್ಟ್ ಕ್ಯೂಟ್ ಕಪಲ್ ಎಂದೇ ಕರೆಯಲ್ಪಡುವ ನಟ ವಿಜಯ್ ದೇವರಕೊಂಡ ಮತ್ತು ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಾಕಷ್ಟು ಸುದ್ದಿಯಾಗಿದ್ದಾರೆ. ಸೋಷಿಯಲ ಮೀಡಿಯಾ ತುಂಬೆಲ್ಲ ಈ ಜೋಡಿಯದ್ದೇ ಸುದ್ದಿ.
ಮದುವೆಯಾದ ಬಳಿಕ ಮೊದಲ ಬಾರಿಗೆ ಪತ್ನಿ ರಶ್ಮಿಕಾ ಜೊತೆ ತಮ್ಮ ಹುಟ್ಟೂರಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ, ಅಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ವಿದ್ಯಾರ್ಥಿವೇತನ ಘೋಷಿಸುವ ಮೂಲಕ ಮದುವೆಯ ಸಂಭ್ರಮವನ್ನು ಸಾರ್ಥಕಗೊಳಿಸಿದ್ದಾರೆ.
ನಾಗರ್ಕರ್ನೂಲ್ ಜಿಲ್ಲೆಯ ಬಲ್ಮೂರು ಮಂಡಲದಲ್ಲಿರುವ 'ತುಮ್ಮನ್ಪೇಟೆ' ವಿಜಯ್ ದೇವರಕೊಂಡ ಅವರ ಹುಟ್ಟೂರು. ಮದುವೆಯ ಸಂಭ್ರಮದ ಬಳಿಕ ವಿಜಯ್ ತಮ್ಮ ಪತ್ನಿ ರಶ್ಮಿಕಾ ಮಂದಣ್ಣ ಮತ್ತು ಕುಟುಂಬಸ್ಥರೊಂದಿಗೆ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದರು. ತಮ್ಮ ಗ್ರಾಮದ ಹುಡುಗ ಸ್ಟಾರ್ ನಟನಾಗಿ, ಮಲೆನಾಡಿನ ಸುಂದರಿಯನ್ನು ಕೈಹಿಡಿದು ಊರಿಗೆ ಬಂದಿದ್ದನ್ನು ಕಂಡು ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಹೂಮಳೆಗರೆದು, ವಾದ್ಯಘೋಷಗಳೊಂದಿಗೆ ನವಜೋಡಿಯನ್ನು ಬರಮಾಡಿಕೊಳ್ಳಲಾಯಿತು.
ಸಾಂಪ್ರದಾಯಿಕ ಆಚರಣೆ ಮತ್ತು ಔತಣಕೂಟ
ಮನೆಯಲ್ಲಿ ಹೊಸ ಸೊಸೆ ರಶ್ಮಿಕಾ ಮಂದಣ್ಣ ಅವರ ಗೃಹಪ್ರವೇಶದ ಅಂಗವಾಗಿ ಸತ್ಯನಾರಾಯಣ ಸ್ವಾಮಿ ವ್ರತವನ್ನು ನೆರವೇರಿಸಲಾಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಿದ್ದ ಈ ಜೋಡಿಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಪೂಜಾ ಕಾರ್ಯಕ್ರಮದ ನಂತರ, ವಿಜಯ್ ದೇವರಕೊಂಡ ಇಡೀ ಗ್ರಾಮದ ಜನರಿಗಾಗಿ ಭರ್ಜರಿ ಮದುವೆಯ ಔತಣಕೂಟವನ್ನು ಏರ್ಪಡಿಸಿದ್ದರು. ಸಾವಿರಾರು ಜನರು ಈ ಸಂಭ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಹರಸಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಸರೆ
ಈ ಸಂಭ್ರಮದ ನಡುವೆಯೇ ವಿಜಯ್ ದೇವರಕೊಂಡ ಒಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು. ತಮ್ಮ ಹುಟ್ಟೂರಿನ ಋಣ ತೀರಿಸುವ ಉದ್ದೇಶದಿಂದ, ಅಚ್ಚಂಪೇಟೆ ವಿಭಾಗದ ವ್ಯಾಪ್ತಿಗೆ ಬರುವ 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ 'ವಿಜಯ್ ದೇವರಕೊಂಡ ಚಾರಿಟಬಲ್ ಟ್ರಸ್ಟ್' ವತಿಯಿಂದ ಉಚಿತವಾಗಿ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿದರು.
ನಮ್ಮ ಊರಿಗೆ ಬಂದಿರುವುದು ಮತ್ತು ನಿಮ್ಮೆಲ್ಲರ ಪ್ರೀತಿ ಕಂಡು ತುಂಬಾ ಖುಷಿಯಾಗಿದೆ. ಈ ಮಣ್ಣಿನ ಋಣ ನನ್ನ ಮೇಲಿದೆ. ಇಲ್ಲಿನ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಹಂಬಲ ನನಗಿದೆ. ಹಾಗಾಗಿ, ಮುಂದಿನ ಶೈಕ್ಷಣಿಕ ಸಾಲಿನಿಂದಲೇ 44 ಸರ್ಕಾರಿ ಶಾಲೆಗಳ ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲಾಗುವುದು. ಇದು ಕೇವಲ ಆರಂಭವಷ್ಟೇ, ಮುಂದಿನ ದಿನಗಳಲ್ಲಿ ಊರಿಗಾಗಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುತ್ತೇವೆ ಎಂದರು.
ಸಂಗೀತ ಸಂಭ್ರಮದ ಫೋಟೋ ಹಂಚಿಕೊಂಡ ದೇವರಕೊಂಡ
ರಾಜಸ್ಥಾನದ ಉದಯಪುರದಲ್ಲಿ ಮದುವೆಯಾದ ಈ ಜೋಡಿ ಅದಕ್ಕೂ ಮುನ್ನ ಸಂಗೀತ್ ಕಾರ್ಯಕ್ರಮದಲ್ಲಿ ಮಿಂಚಿದ್ದರು. ಅದರ ಫೋಟೋಗಳನ್ನು ವಿಜಯ್ ಹಂಚಿಕೊಂಡಿದ್ದಾರೆ.
ನಮ್ಮ ಸಂಗೀತ್ ರಾತ್ರಿ
ನಗುತ್ತಾ ಕಣ್ಣೀರು ಬರುವವರೆಗೂ, ಕಾಲಿನ ತಳಗಳು ನೋವಾಗುವವರೆಗೂ ಕುಣಿದು, ಎಲ್ಲರ ಭಾಷಣಗಳು ಮತ್ತು ಅಚ್ಚರಿಗಳಿಂದ ಭಾವನೆಗಳನ್ನು ತಡೆದುಕೊಳ್ಳುತ್ತಾ ಕಣ್ಣುಗಳು ತೇವವಾಗುವವರೆಗೂ ಅದ್ಭುತ ಸಂಜೆ ಕಳೆದೆವು.
ಅದು ಸುಂದರ ಜನರಿಂದ ತುಂಬಿದ್ದ ಒಂದು ದೊಡ್ಡ ಸಂತೋಷದ ಸಂಭ್ರಮವಾಗಿತ್ತು, ನಸುಕಿನ ಜಾವ 4 ಗಂಟೆಯವರೆಗೂ ಮುಂದುವರಿದಿತ್ತು ಎಂದು ಬರೆದುಕೊಂಡಿದ್ದಾರೆ.