ಗುರುವಾರ ಚೆನ್ನೈನಲ್ಲಿ ನಡೆದ ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮತ್ತು ಮೀನಾಕ್ಷಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ನಟ-ರಾಜಕಾರಣಿ ವಿಜಯ್ ಹಾಜರಾಗಿದ್ದು, ಇದೀಗ ಅವರ ವೈಯಕ್ತಿಕ ಜೀವನದ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಅವರ ಸಂಬಂಧದ ಬಗ್ಗೆ ಭಾರಿ ಊಹಾಪೋಹಗಳಿಗೆ ಕಾರಣವಾಗಿದೆ.
ವಿಜಯ್ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ 2025ರ ಡಿಸೆಂಬರ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅದು ಫೆಬ್ರುವರಿ 27 ರಂದು ಸಾರ್ವಜನಿಕವಾಯಿತು. ಅದಾದ ಬಳಿಕ ನಟ ವಿಜಯ್ ಸಾರ್ವಜನಿಕವಾಗಿಯೇ ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ತ್ರಿಶಾ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಗಂಟೆಗಳ ಮೊದಲು ನಟ ವಿಜಯ್ ಅವರ ಅಂಗರಕ್ಷಕ ರಹಸ್ಯ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು ಮತ್ತಷ್ಟು ಚರ್ಚೆಗಳಿಗೆ ಕಾರಣವಾಗಿದೆ.
ತ್ರಿಶಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೊದಲು ವಿಜಯ್ ಅವರ ಅಂಗರಕ್ಷಕ ಅರೂನ್ ಸುರೇಶ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ, 'ಎಲ್ಲ ವದಂತಿಗಳನ್ನು ಮೀರಿ ಮೇಲೇರುವ ಸಮಯ' ಎಂದು ಬೆಂಕಿಯ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದರು.
ಬಳಿಕ ಅವರು ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ನಂತರ ಅವರು ನಟ ವಿಜಯ್ ಅವರ ಚಿತ್ರವನ್ನು ಒಳಗೊಂಡ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ, ಅವರು 2004ರ ಅವರ ಚಿತ್ರ ಗಿಲ್ಲಿಯಿಂದ 'ಕೊಕ್ಕರಕ್ಕೊ' ಹಾಡನ್ನು ಸೇರಿಸಿದ್ದಾರೆ.
ಈ ಪೋಸ್ಟ್ ವೈರಲ್ ಆದ ತಕ್ಷಣ, X ಮತ್ತು Reddit ನಲ್ಲಿ ಬಳಕೆದಾರರು ಅರೂನ್ ಸುರೇಶ್ ಅವರು ನಟನ ಸಂಬಂಧವನ್ನು ದೃಢೀಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತ್ರಿಶಾ ಕೃಷ್ಣನ್ ಅಥವಾ ವಿಜಯ್ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಮಿಳು ನಟ ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅವರ ಪಕ್ಷ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಕುರಿತು ಪ್ರತಿಕ್ರಿಯಿಸುವಾಗ ಬಿಜೆಪಿಯ ನಾಗೇಂದ್ರನ್ ಅವರು, ವಿಜಯ್ ತುಂಬಾ ಸರಳ ವ್ಯಕ್ತಿ, ಅವರಿಗೆ ರಾಜಕೀಯ ಅರ್ಥವಾಗುವುದಿಲ್ಲ. ಮೊದಲು ಅವರು ತಮ್ಮ ಗೂಡಿನಿಂದ ಹೊರಬರಬೇಕು. ತಮ್ಮ ಕುಟುಂಬ ಜೊತೆ ಉತ್ತಮ ಸಂಬಂಧ ಹೊಂದಬೇಕು, ಜೊತೆಗೆ ತಮಿಳುನಾಡಿನ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಅವರು ತ್ರಿಶಾ ಅವರ ಮನೆಯಿಂದಲೂ ಹೊರಬರಬೇಕು ಎಂದು ಹೇಳಿದ್ದರು.
ಇವರ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು ಮತ್ತು ನಟನ ವೈಯಕ್ತಿಕ ಜೀವನದ ಉಲ್ಲೇಖ ಮಾಡಿದ ನಂತರ ವಿವಾದ ಭುಗಿಲೆದ್ದಿತು. ಅಂದಿನಿಂದ ನಟ ವಿಜಯ್ ಮತ್ತು ತ್ರಿಶಾ ಕೃಷ್ಣನ್ ನಡುವಿನ ಸಂಬಂಧದ ಕುರಿತು ಸಾಕಷ್ಟು ಊಹಾಪೋಹಗಳು ಹರಡಿವೆ.