ಕನ್ನಡದ ಹಿರಿಯ ಪತ್ರಕರ್ತ ಕೆ.ಜೆ. ಕುಮಾರ್ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಹಿರಿಯ ನಟ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಜನಿಕಾಂತ್ ಕನ್ನಡದಲ್ಲೇ ಸಂತಾಪ ಸೂಚಿಸಿದ್ದಾರೆ.
"ದಿವಂಗತ ಕೆ.ಜೆ. ಕುಮಾರ್ ನನ್ನ ಆತ್ಮೀಯ ಗೆಳೆಯ. ಅವರು ಮೊದಲಿನಿಂದಲೂ ನನ್ನ ನಟನೆಯನ್ನು ಮೆಚ್ಚುತ್ತಿದ್ದರು ಮತ್ತು ಪ್ರೋತ್ಸಾಹಿಸುತ್ತಿದ್ದರು. ಅವರು ತುಂಬಾ ಸರಳರಾಗಿದ್ದರು ಮತ್ತು ಯಾವಾಗಲೂ ಎಲ್ಲರೊಂದಿಗೆ ನಗುತ್ತಿದ್ದರು. ಅವರ ಅಗಲಿಕೆ ನನ್ನ ಮನಸ್ಸಿನಲ್ಲಿ ಬಹಳಷ್ಟು ನೋವನ್ನುಂಟುಮಾಡಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು'' ಎಂದು ಬರೆದುಕೊಂಡಿದ್ದಾರೆ.
ಮೈಸೂರಿನ ಯಾದವಗಿರಿಯ ನಿವಾಸಿ, ಪತ್ರಕರ್ತ ಕೆ.ಜೆ. ಕುಮಾರ್ (74) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ. ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಸರಸ್ವತಿಪುರಂನ ಕಾಮಾಕ್ಷಿ ಆಸ್ಪತ್ರೆಗೆ ಕರೆತರಲಾಗಿತ್ತು. ಪಾರ್ಥಿವ ಶರೀರವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಗುರುವಾರ (ಮಾರ್ಚ್ 12) ಬೆಳಿಗ್ಗೆ 8ಕ್ಕೆ ಯಾದವಗಿರಿಯ ಎ.ರಾಮಣ್ಣ ವೃತ್ತದಲ್ಲಿರುವ ಅವರ ನಿವಾಸದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ನಂತರ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಸಿನಿಮಾ ಪತ್ರಕರ್ತರಾಗಿ ‘ಸುಧಾ’ ವಾರಪತ್ರಿಕೆ, ‘ವಿಜಯ ಚಿತ್ರ’ ಸಿನಿಮಾ ಮಾಸಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. 1978ರಿಂದ ‘ರೂಪಾತಾರ’ ಮಾಸಪತ್ರಿಕೆಗೆ ಮೂರು ದಶಕ ಕೆಲಸ ಮಾಡಿದ್ದರು. 1993ರಿಂದ ‘ಉದಯವಾಣಿ’ ಮೈಸೂರು ಪ್ರತಿನಿಧಿಯಾಗಿ ಒಂದೂವರೆ ದಶಕದವರೆಗೆ ಕಾರ್ಯನಿರ್ವಹಿಸಿದ್ದರು. ನಂತರ, ‘ಹೊಸದಿಗಂತ’ದ ಸಿನಿಮಾ ವಿಭಾಗ ನೋಡಿಕೊಳ್ಳುತ್ತಿದ್ದರು.