ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀಗಂಧದ ಗುಡಿ ಧಾರಾವಾಹಿಯಿಂದ ನಟಿ ಸಂಜನಾ ಬುರ್ಲಿ ಹೊರ ನಡೆದಿದ್ದಾರೆ. ಧಾರಾವಾಹಿಯಲ್ಲಿ ಚಂದನಾ ಪಾತ್ರಕ್ಕೆ ನಟಿ ಸಂಜನಾ ಬುರ್ಲಿ ಬಣ್ಣ ಹಚ್ಚಿದ್ದರು. ಹರಿಶ್ಚಂದ್ರ ಮತ್ತು ಚಂದನಾ ಜೋಡಿ ವೀಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಆದರೆ ದಿಢೀರ್ ಎಂಬಂತೆ ನಟಿ ಸಂಜನಾ ಬುರ್ಲಿ ಧಾರಾವಾಹಿಯಿಂದ ಹೊರಬಂದು ಅಚ್ಚರಿ ಮೂಡಿಸಿದ್ದಾರೆ.
ಅಕ್ಟೋಬರ್ 6 ರಿಂದ ಪ್ರತಿ ದಿನ ರಾತ್ರಿ 8 ಗಂಟೆಗೆ 'ಶ್ರೀಗಂಧದ ಗುಡಿ' ಧಾರಾವಾಹಿ ಶುರುವಾಯ್ತು. ನಾಲ್ವರು ಅಣ್ಣಾತಮ್ಮಂದಿರು ಮುತ್ತುರಾಜ ಪಾತ್ರದಲ್ಲಿ ಶಿಶಿರ್ ಶಾಸ್ತ್ರಿ, ಹರಿಶ್ಚಂದ್ರ ಪಾತ್ರ ಭವಿಷ್, ಕಂಠಿ ಪಾತ್ರದಲ್ಲಿ ಜಯಂತ್, ಮಯೂರ ಪಾತ್ರದಲ್ಲಿ ಗಗನ್ ಅಭಿನಯಿಸುತ್ತಿದ್ದಾರೆ. ನಾಯಕಿ ಚಂದನಾ ಪಾತ್ರಕ್ಕೆ ನಟಿ ಸಂಜನಾ ಬುರ್ಲಿ ಅವರು ಜೀವ ತುಂಬಿದ್ದರು.
ನಟಿ ಸಂಜನಾ ಅವರು 'ಲಗ್ನ ಪತ್ರಿಕೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಅಲ್ಲಿಂದ ಅವರ ಪ್ರತಿಭೆ ಮೆಚ್ಚಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಲಭಿಸಿತು. ಸ್ನೇಹಾ ಪಾತ್ರಕ್ಕೆ ಜೀವ ತುಂಬಿದ ನಟಿ ವಿದ್ಯಾಭ್ಯಾಸದ ಕಾರಣದಿಂದ ಪಾತ್ರದಿಂದ ಹೊರ ಬಂದರು. ಇದಾದ ಬಳಿಕ ಶ್ರೀಗಂಧದ ಗುಡಿ ಧಾರಾವಾಹಿ ಸಂಜನಾ ಅವರನ್ನ ಅರಸಿ ಬಂದಿತ್ತು.
ಚಂದನಾ ಪಾತ್ರವನ್ನ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿ ಬೇಷ್ ಎನಿಸಿಕೊಂಡಿದ್ದಾರೆ. ಸದ್ಯ ಈ ಪಾತ್ರದಿಂದ ಸಂಜನಾ ಅವರು ಹೊರ ಬಂದಿದ್ದಾರೆ. ಜನವರಿ 25 ರಂದು ಸಂಜನಾ ಅವರು ಸಮರ್ಥ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದಾವಣಗೆರೆ ಮೂಲದವರಾದ ಸಮರ್ಥ್ ಅವರು ಉದ್ಯೋಗದಲ್ಲಿ ಡಾಕ್ಟರ್ ಆಗಿದ್ದಾರೆ. ಜೋಡಿ ಅದ್ದೂರಿ ನಿಶ್ಚಿತಾರ್ಥ ಬಹಳ ವಿಜೃಂಭಣೆಯಿಂದ ನಡೆದಿತ್ತು. ಇನ್ನೇನು ಮದುವೆ ಕೂಡ ಆಗಲಿದ್ದಾರೆ ಜೋಡಿ ಎನ್ನಲಾಗುತ್ತಿದೆ.
ಚಂದನಾ ಪಾತ್ರಕ್ಕೆ ಈಗಾಗಲೇ ಹೊಸ ನಟಿ ಕೂಡ ಆಯ್ಕೆ ಆಗಿದ್ದಾರೆ. ಅವರೇ ಸ್ನೇಹಾ ಮಂಜುನಾಥ್. ಹೌದು, ಸ್ನೇಹಾ ಅವರು ಈ ಹಿಂದೆ ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶುಭಸ್ಯ ಶೀಘ್ರಂ’ ಧಾರಾವಾಹಿಯಲ್ಲಿ ನಾಯಕಿ ಪಾತ್ರಕ್ಕೆ ಸ್ನೇಹಾ ಅವರು ಬಣ್ಣ ಹಚ್ಚಿದ್ದರು. ಅಮೃತಧಾರೆ ಖ್ಯಾತಿಯ ಜೆಡಿ ಜೈದೇವ್ ಪಾತ್ರಧಾರಿ ರಾಣವ್ ಅವರು ಈ ಧಾರಾವಾಹಿಗೆ ನಾಯಕನಾಗಿದ್ದರು. ಸದ್ಯ ಧಾರಾವಾಹಿ ಮುಕ್ತಾಯವಾಗಿದೆ. ಅಲ್ಲಿಂದ ಸೀದಾ ‘ಶ್ರೀಗಂಧದ ಗುಡಿ’ ಚಂದನಾ ಪಾತ್ರಕ್ಕೆ ನಟಿ ಸ್ನೇಹಾ ಮಂಜುನಾಥ್ ಎಂಟ್ರಿ ಕೊಡುತ್ತಿದ್ದಾರೆ.
ಈ ಬಗ್ಗೆ ಖುದ್ದು ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೊ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ನಟಿ ಸಂಜನಾ ಬುರ್ಲಿ ತಮ್ಮ ಮದುವೆಯ ಕಾರಣದಿಂದ ಪಾತ್ರದಿಂದ ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ.