ಪುಣೆ ಪೋರ್ಷೆ ಅಪಘಾತವು ದೇಶದ ಅತ್ಯಂತ ಆಘಾತಕಾರಿ ಘಟನೆಗಳಲ್ಲಿ ಒಂದಾಗಿದೆ. ಎರಡು ವರ್ಷಗಳ ಹಿಂದೆ ನಡೆದ ಈ ದುರಂತ ಘಟನೆಯಲ್ಲಿ ಇಬ್ಬರು ಯುವ ಐಟಿ ಎಂಜಿನಿಯರ್ಗಳು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ವೈರಲ್ ಆಗಿರುವ ವೀಡಿಯೊ ಮತ್ತೊಮ್ಮೆ ಪ್ರಕರಣವನ್ನು ಬೆಳಕಿಗೆ ತಂದಿದೆ. ಆರೋಪಿಯ ಕುಟುಂಬದ ಕೆಲವು ಸದಸ್ಯರು ಪಾರ್ಟಿಯಲ್ಲಿ ನೃತ್ಯ ಮತ್ತು ಹಾಡುತ್ತಿರುವುದನ್ನು ವೀಡಿಯೊ ತೋರಿಸಿದೆ ಎಂದು ಹೇಳಲಾಗಿದ್ದು, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈಗ, ದಕ್ಷಿಣ ಭಾರತದ ಖ್ಯಾತ ನಟ ವಿಶಾಲ್ ಕೂಡ ಈ ಬಗ್ಗೆ ಕಿಡಿಕಾರಿದ್ದಾರೆ. ಇಂತಹ ದೊಡ್ಡ ಅಪಘಾತದ ಆರೋಪಿಗಳು ಸಂಭ್ರಮಾಚರಣೆ ಬದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು. ವಿಶಾಲ್ ಹೇಳಿಕೆ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಬೇಷ್ ಅನ್ನುತ್ತಿದ್ದಾರೆ. ಮೇ 2024ರಲ್ಲಿ ಪುಣೆಯ ರಸ್ತೆಗಳಲ್ಲಿ ನಡೆದ ಭೀಕರ ಅಪಘಾತವು ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿತು. ಪ್ರಮುಖ ಆರೋಪಿ ಅಪ್ರಾಪ್ತ ವೇದಾಂತ್ ಅಗರ್ವಾಲ್ ಅತಿ ವೇಗದಲ್ಲಿ ಐಷಾರಾಮಿ ಕಾರನ್ನು ಚಲಾಯಿಸುತ್ತಿದ್ದ ಎಂಬ ಆರೋಪವೂ ಇದೆ. ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಐಷಾರಾಮಿ ಪೋರ್ಷೆ ಕಾರು ಡಿಕ್ಕಿ ಹೊಡೆದಿತ್ತು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದರು.
ಜಾಮೀನು ಸಿಕ್ಕಿದ್ದಕ್ಕೆ ಕೆಲವರು ಪಾರ್ಟಿ ಮಾಡುತ್ತಾ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ಆರೋಪಿಗೆ ಜಾಮೀನು ಸಿಕ್ಕಿದ್ದರಿಂದ ಈ ಆಚರಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದ್ದು ವೀಡಿಯೊ ಕಾಣಿಸಿಕೊಂಡ ತಕ್ಷಣ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಕುಟುಂಬಗಳು ಸಾರ್ವಜನಿಕವಾಗಿ ಈ ರೀತಿ ಸಂಭ್ರಮಾಚರಣೆ ಮಾಡಬೇಕೆ ಎಂದು ಅನೇಕ ಬಳಕೆದಾರರು ಪ್ರಶ್ನಿಸಿದ್ದಾರೆ.
ನಟ ವಿಶಾಲ್ ಆಕ್ರೋಶ!
ತಮಿಳು ಚಲನಚಿತ್ರೋದ್ಯಮದ ಪ್ರಸಿದ್ಧ ನಟ ವಿಶಾಲ್ ವೀಡಿಯೊಗೆ ತೀವ್ರವಾಗಿ ಪ್ರತಿಕ್ರಿಯಿಸಿದರು. ಯಾವುದೇ ಸಾಧನೆ ಅಥವಾ ಗೌರವವಿಲ್ಲದೆ ಈ ರೀತಿ ಆಚರಿಸುವುದು ತಮ್ಮ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳ ಗಾಯಗಳಿಗೆ ಉಪ್ಪು ಸವರಿದಂತೆ ಎಂದು ಹೇಳಿದರು. ವಿಶಾಲ್ ತಮ್ಮ ವಿಡಿಯೋದಲ್ಲಿ ಕರ್ಮ ಮತ್ತು ನೈತಿಕ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಾ, ಕಾನೂನು ಪ್ರಕ್ರಿಯೆಗೆ ತನ್ನದೇ ಆದ ಸ್ಥಾನವಿದ್ದರೂ, ಸಾಮಾಜಿಕ ಸಂವೇದನೆಯೂ ಅಷ್ಟೇ ಮುಖ್ಯ ಎಂದು ಹೇಳಿದರು. ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.