John Jani Janardhan Kannada Movie Review
ಮೂವರು ನಾಯಕನಟರು. ಮಲಯಾಳಂ ಸಿನೆಮಾವೊಂದರ ರಿಮೇಕ್. ಹಿರಿಯ ನಟಿ ಮಾಲಾಶ್ರೀ, ಉದಯೋನ್ಮುಖ ನಟ ಗುರುನಂದನ್, ಮತ್ತು ನಟಿ ಐಂದ್ರಿತಾ ರೇ ಅತಿಥಿ ಪಾತ್ರಗಳಲ್ಲಿ ನಟನೆ ಎಂಬಿತ್ಯಾದಿ ವಿಷಯಗಳು ಇಂದು ಬಿಡುಗಡೆಯಾದ ಗುರು ದೇಶಪಾಂಡೆ ನಿರ್ದೇಶನದ ಜಾನ್ ಜಾನಿ ಜನಾರ್ಧನ್ ಕನ್ನಡ ಚಿತ್ರರಸಿಕರನ್ನು ಸೆಳೆದಿರಬಹುದು. ಆದರೆ ಈ ಸೆಳೆತವನ್ನು ಸಮರ್ಥಿಸಿಕೊಂಡಿದೆಯೇ ಈ ಚಿತ್ರ?
ಬ್ಯಾಂಗ್ಕಾಕ್ ನ ಪಟ್ಟಾಯ ಬೀಚಿನಲ್ಲಿ ಮೋಜು ಮಸ್ತಿ ಮಾಡುವ ಕನಸಿನೊಂದಿಗೆ ಮೂವರು ಮಧ್ಯಮವರ್ಗದ ಗೆಳೆಯರು, ಜಾನ್ (ಮದರಂಗಿ ಕೃಷ್ಣ), ಜಾನಿ (ಯೋಗೇಶ್) ಮತ್ತು ಜನಾರ್ಧನ್ (ಅಜಯ್ ಕೃಷ್ಣ ರಾವ್) ಹಣ ಕೂಡಿಡುತ್ತಿರುತ್ತಾರೆ. ಅದಕ್ಕಾಗಿ ಹತ್ತು ಹಲವು ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ಇದು ಅಷ್ಟು ಸುಲಭವಾಗಿ ಕೂಡಿಬರುವಿದಿಲ್ಲ. ಈ ಸಂದರ್ಭದಲ್ಲೇ ತಾವು ವಾಸಿಸುತ್ತಿರುವ ಪ್ರದೇಶದ ಪುಟ್ಟ ಬಾಲಕಿಯರು ಕಾಣೆಯಾಗುತ್ತಿರುತ್ತಾರೆ. ಮುಂದೇನಾಗುತ್ತದೆ?
ಸಿನಿಮಾದ ಬಹುತೇಕ ಭಾಗ ಹಾಸ್ಯದಿಂದ ಕೂಡಿದೆ. ಆದರೆ ಯುವಕರು ವಾಸಿಸುತ್ತಿರುವ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಯಾರೂ ಸಹ ಗಮನ ಹರಿಸುವುದಿಲ್ಲ. ಚಿತ್ರದ ಕೊನೆಯ ಅರ್ಧಗಂಟೆಯ ಅವಧಿಯಲ್ಲಿ ಶಾಲು ಎಂಬ ಬಾಲಕಿ ನಾಪತ್ತೆಯಾಗಿ ಆಕೆಯ ಶವ ಚರಂಡಿಯಲ್ಲಿ ಪತ್ತೆಯಾದಾಗ ಚಿತ್ರಕ್ಕೆ ಒಂದು ಮಟ್ಟದ ಹಿಡಿತ ಸಿಗುತ್ತದೆ. ಇನ್ಸ್ ಪೆಕ್ಟರ್ ಪಾತ್ರದಲ್ಲಿ ನಟಿಸಿರುವ ಮಾಲಾಶ್ರೀ "ಬಾಲಕಿ ಶಾಲು ಸಾಯುವುದಕ್ಕೂ ಮುನ್ನ ಆಕೆಯನ್ನು ಅತ್ಯಾಚಾರ ಮಾಡಾಲಾಗಿತ್ತು ಎಂದು ಮೂವರು ಯುವಕರಿಗೆ (ಮದರಂಗಿ ಕೃಷ್ಣ, ಯೋಗೇಶ್, ಅಜಯ್ ಕೃಷ್ಣ ರಾವ್) ತಿಳಿಸಿದಾಗ ಚಿತ್ರ ಮತ್ತಷ್ಟು ಗಂಭೀರ ತಿರುವು ಪಡೆದುಕೊಳ್ಳುತ್ತದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಯುವಕರು ಬಾಲಕಿಯ ಸಾವಿಗೆ ಕಾರಣರಾದವರನ್ನು ಹುಡುಕುತ್ತಾರೆ. ಅಘಾತಕಾರಿ ರೀತಿಯಲ್ಲಿ ಎದುರು ನಿಲ್ಲುವ ಅಪರಾಧಿ ಹಾಗೂ ಕಾಲೋನಿಯ ಜನರು ನಂತರದ ಸನ್ನಿವೇಶವನ್ನು ನಿಭಾಯಿಸುವುದು ಚಿತ್ರಕಥೆಯ ಕ್ಲೈಮ್ಯಾಕ್ಸ್ ಭಾಗ. ಒಂದಷ್ಟು ಘಟನೆಗಳನ್ನು ಯಾವುದೇ ಕ್ರಮವಿಲ್ಲದೆ ಪೋಣಿಸಿರುವುದು ಪ್ರೇಕ್ಷಕನಿಗೆ ಕಿರಿಕಿರಿಯನ್ನುಂಟು ಮಾಡಿದರೂ, ಮೂರು ಧರ್ಮಗಳಿಗೆ ಸೇರಿದ ಗೆಳೆಯರು ಒಟ್ಟಿಗೆ ಸಹಬಾಳ್ವೆ ನಡೆಸಿ ಆತ್ಮೀಯರಾಗಿರುತ್ತಾರೆ ಹಾಗು ಹಿಂದೂ ಧರ್ಮಿಯ ಕುಟುಂಬವೊಂದರ ಮನೆಯಲ್ಲಿ ಅನಾಥ ಮುಸ್ಲಿಂ ಯುವತಿಯನ್ನು ಪೋಷಿಸಿ ಬೆಳೆಸಿರುತ್ತಾರೆ ಎಂಬ ಸಾಮಾಜಿಕ ಸೌಹಾರ್ದದ ಒಂದೆರಡು ಅಂಶಗಳನ್ನು ಮೇಲು ಸ್ಥರದಲ್ಲಿ ಕಟ್ಟಿಕೊಟ್ಟಿದೆ. ಹಾಗೂ ಮಕ್ಕಳ ಕಳವು ಮತ್ತು ಅವರ ಮೇಲೆ ಅತ್ಯಾಚಾರ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ) ಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕಾದ ಒಂದಷ್ಟು ಅಂಶಗಳನ್ನು ಹೊಂದಿದೆ.
ಅನುಭವಿ ನಿರ್ದೇಶಕ ಗುರು ದೇಶಪಾಂಡೆ ಚಿತ್ರವನ್ನು ನಿರ್ದೇಶಿಸಿದ್ದು, ಮಲಯಾಳಂ ಸಿನೆಮಾವೊಂದನ್ನು ಫ್ರೇಂ ಟು ಫ್ರೇಂ ಭಟ್ಟಿ ಇಳಿಸಿದ್ದು (ರಿಮೇಕ್ ಮಾಡಿದ್ದು) ಕನ್ನಡದ ಸೊಗಡಿಗೆ ಹೊಂದಿಸುವಲ್ಲಿ ಸುಧಾರಣೆ ಕಂಡುಬಂದಿಲ್ಲ. ನಿರ್ದೇಶಕರು ಮಲಯಾಳಂನಲ್ಲಿ ಸೂಪರ್ ಹಿಟ್ ಆದ ಸಿನಿಮಾದ ಅಂಶಗಳನ್ನು ಕದಲಿಸದೇ ಇರುವುದೇ ಉತ್ತಮ ಎಂದುಕೊಂಡರೇ? ಅದಕ್ಕೆ ಅವರೇ ಉತ್ತರಿಸಬೇಕು. ಆದರೆ ನಿಯತ ಅಂತರಗಳಲ್ಲಿ ಪ್ರಸಂಗಗಳ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಒಟ್ಟಾರೆ ಗಂಭೀರ ವಿಷಯಾಧಾರಿತ ಸಿನಿಮಾದಲ್ಲಿ ಸಾಂದರ್ಭಿಕವಾಗಿ ಹಾಸ್ಯ ಪ್ರಸಂಗಗಳಿದೆ. ಹಿನ್ನಲೆ ಸಂಗೀತ ಮತ್ತು ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳಿಗೆ ಸಂತೋಷ್ ರೈ ಪತಾಜೆ ಛಾಯಾಗ್ರಹಣ ಪೂರಕವಾಗಿದೆ. ಅಜಯ್ ರಾವ್, ಮದರಂಗಿ ಕೃಷ್ಣ ಮತ್ತು ಯೋಗಿ ಬಹಳ ಸಾಧಾರಣ ನಟನೆ ನೀಡಿದ್ದಾರೆ. ಶ್ರೀನಿವಾಸ ಮೂರ್ತಿ, ಗಿರಿಜಾ ಲೋಕೇಶ್ ಸೇರಿದಂತೆ ಪೋಷಕ ವರ್ಗದ ನಟನೆ ಸಾಧಾರಣವಾಗಿದೆ. ನಾಯಕನಟಿ ಕಾಮ್ನ ರಣಾವತ್ ಅವರ ಪಾತ್ರವಂತೂ ಅತ್ಯಂತ ಸೀಮಿತವಾಗಿದ್ದು, ಕೇವಲ ಮುಗುಳ್ನಗೆ ಹಾಗೂ ತೂಗಾಡುವ ಕೂದಲಿನೊಂದಿಗೆ ಮುಕ್ತಾಯವಾಗುತ್ತದೆ. ವಿಪರೀತ ಅನಗತ್ಯ ಸಂಭಾಷಣೆಯಿಂದ ಕೂಡಿದ, ಓತಪ್ರೇತದ ನಿರೂಪಣೆಯಿಂದ ಕನ್ನಡ ಸಿನಿರಸಿಕರಿಗೆ, ನೋಡಿ ತಾಳಿಕೊಳ್ಳಿ ಎಂಬ ಸವಾಲೆಸೆದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos