ನಾರದ ಮಹರ್ಷಿ- ವಾಲ್ಮೀಕಿಗಳ ಸಂಭಾಷಣೆ( ಸಾಂಕೇತಿಕ ಚಿತ್ರ)
ಭುವನಮೋಹನ ಕಾವ್ಯ ; ನರ ಸುರನಾಗಬಲ್ಲ ಸಾಧನಾಕಾವ್ಯ ; ಕರ್ತವ್ಯಪಠಣವಷ್ಟೇ ಅಲ್ಲದೇ ಚಾಚೂ ತಪ್ಪದೆ ನಡೆದ ವೀರಕಾವ್ಯ ; ಆದರ್ಶ ಪಾರಾಯಣತೆಯನ್ನು ಸಾಕ್ಷಾತ್ಕರಿಸಿದ ಕಾವ್ಯ ; ದೈತ್ಯ ದರ್ಪಿಷ್ಠ ದುಷ್ಟ ದಂಡಧಾರಿಯನ್ನು ದಂಡಿಸಿದ ನ್ಯಾಯಕಾವ್ಯ ; "ಧರ್ಮವೆ ಜಯ"ವೆಂಬ ದಿವ್ಯಮಂತ್ರವನ್ನು ಧರಿಸಿದ ಧರ್ಮಕಾವ್ಯ ; ಈ ರಾಮಕಾವ್ಯ . ಇಂತಹುದೊಂದು ಅಸಾಮಾನ್ಯ ಕಾವ್ಯ ಹುಟ್ಟಬೇಕಿದ್ದರೆ ಸಾಧಾರಣ ಸನ್ನಿವೇಶ ಸಾಕೆ ? ರಾಮಾಯಣದ ಆರಂಭವೇ ಎಂತಹ ಸುಂದರ ಸಂದರ್ಭಕ್ಕೆ ನಾಂದಿಹಾಡುತ್ತದೆ ನೋಡಿ.
ಸಾತ್ವಿಕತೆಯೇ ಮೈವೆತ್ತ ತಪೋಭೂಮಿ . ಕುಲಪತಿಗಳ ಅಡಿಯಲ್ಲಿ ಅಧ್ಯಯನ ಮಾಡುವ ಅನೇಕ ವಿದ್ಯಾರ್ಥಿಗಳು , ಸಾಧಕರು , ಋಷಿಗಳು . ಆಶ್ರಮದ ಅಂಚಿನಲ್ಲಿ ತಮಸಾ ನದಿ , ಪ್ರಕೃತಿಯ ಮಧ್ಯದ ಮಂದಾಕಿನಿ , ಮೂದಲಿಕೆ , ಈರ್ಷ್ಯೆ , ದ್ವೇಷಗಳಿರದ ಶಾಂತ ಕಾನನ . ಮಧ್ಯದಲ್ಲೊಂದು ಎಲೆಮನೆ . ಅಸಾಧಾರಣ ತೇಜಸ್ವಿ ; ಸತತ ತಪಸ್ವಿ ; ಕವಿಹೃದಯದ ಮುನಿ . ವೃದ್ಧರಾದರೂ , ಬದುಕು ಹಣ್ಣು ಮಾಡಿದ್ದರೂ ಬಾಗದ ಬಗ್ಗದ ಕಾಯ . ಅವರೇ , ಅವರೇ ವಾಲ್ಮೀಕಿ !
ಆವರಿಗೆ ಅಂದು ಶುಭ ದಿನ. ಅವರ ಬದುಕಿನ ಮಂಗಳ ಮುಹೂರ್ತ. ಮುಖದಲ್ಲಿ ಮರೆ ಮಾಡಲಾಗದ ರೋಮಾಂಚಿತ ಮುಗುಳ್ನಗೆ . ಸಂಭ್ರಮ , ಸಡಗರ . ತುಸು ನಡುಗುವ ನುಡಿ . ಕಾರಣ ಮುಂದಿರುವ ಮಹಾಮುನಿ . ಬ್ರಮ್ಹಚರ್ಯವೇ ಮೂರ್ತಿವೆತ್ತ ಋಷಿ ; ದೇವರ್ಷಿ . ಯಾರು ಈ ಅತಿಥಿ ? ಯಾರು ಈ ಪ್ರಕಾಶ ಪುತ್ಥಳಿ ? ಯಾರು ಈ ಹಸನ್ಮುಖಿ ? ಯಾರು ಈ ಜಾರದ ಜವ್ವನಿಗ ? ಅದೇನು ಸುಂದರ ವದನ ! ಅದೆಂತಹ ಕಾಂತಿಕಾಯ ! ಬಾಡದ ಹೂಹಾರ ಎದೆಯ ಮೇಲೆ . ಕೊರಳಿಂದ ಕೆಳಗಿಳಿದ ತುಳಸೀಮಾಲೆ , ಪಕ್ಕದಲ್ಲಿ ತೆಗೆದಿಟ್ಟಿರುವ ದಿವ್ಯ ವೀಣೆ . ಎಲ್ಲ ಕಾಲಗಳಲ್ಲೂ ; ಎಲ್ಲ ಸಂದಿಗ್ಧ ಸಮಯಗಳಲ್ಲೂ ಸಂದರ್ಶನವಿತ್ತು , ಸಮಸ್ಯೆಯನ್ನು ಪರಿಹರಿಸುವ ದೇವರ್ಷಿ ಬ್ರಮ್ಹಪುತ್ರ . ತಾಯಿಯಂತೆ ಸದಾ ವೀಣಾವಾದನ ಚತುರ . ದೇವ - ದಾನವ , ಮುನಿ - ಮಾನವರಿಂದ ನಮಸ್ಕೃತ . ಈ ಎಲ್ಲ ಅಂಶಗಳಿಗಿನ್ನ ಭವ್ಯವೆಂದರೆ ಅವರ ಹೆಸರೇ . ಅದೇ ಒಂದು ಸಂದೇಶ , ಅದೇ ಒಂದು ಸಂಕೇತ , ಅದೇ ಒಂದು ಮಾರ್ಗದರ್ಶಕ ! "ನಾರಂ ದದಾತಿ" ಎಂಬುದರಿಂದ ಬಂದದ್ದು ಆತನ ಹೆಸರು . ಎಂದರೆ ಮೋಕ್ಷ ಪ್ರದಾತ ! ಅದೇ ನಾರದ . ಅವರೇ ದೇವರ್ಷಿ ನಾರದ .
ಕುಶಲೋಪರಿಯಾಗಿ ಉಪಚಾರ ಮುಗಿದ ಮೇಲೆ ವಾಲ್ಮೀಕಿಗಳ ತಲೆ ತಿನ್ನುತ್ತಿದ್ದ ; ಬುದ್ಧಿ ಹುಡುಕುತ್ತಿದ್ದ ; ಬಹುಕಾಲದಿಂದ ಯಾರನ್ನಾದರೂ ಕೇಳಬೇಕೆಂದಿದ್ದ ಪ್ರಶ್ನೆಯನ್ನು ನಾರದರ ಮುಂದಿಟ್ಟರು . " ಸ್ವಾಮಿನ್ , ಮಾನವರಿಗೆ ಆದರ್ಶವಾಗುವ , ಮಾನವನಲ್ಲಿರಬೇಕಾದ ಗುಣಗಳನ್ನು ಹೊಂದಿರುವ ಪೂರ್ಣ ಪುರುಷನನ್ನೊಬ್ಬನನ್ನು ಕಾಣುವ , ಆತನ ಕೀರ್ತಿಯನ್ನು ಕೇಳುವ ಕುತೂಹಲ ಕೆಲ ಕಾಲದಿಂದ ನನ್ನ ಮನದಲ್ಲಿ ಮೂಡಿದೆ . ಈ ಪ್ರಶ್ನೆಗೆ ಉತ್ತರ ಕೊಡುವ ಧೀಮಂತ , ಸರ್ವಶ್ರುತ ಯಾರೆಂದು ಕಾಯುತ್ತಿದ್ದೆ , ಹುಡುಕುತ್ತಿದ್ದೆ . ತಾವೀಗ ಆಗಮಿಸಿದ್ದೀರಿ . ಸದಾ ಸುತ್ತುತ್ತಿರುವ , ಸರ್ವ ವರ್ತಮಾನಗಳಿಗೂ ಸಾಕ್ಷಿಯಾಗಿರುವ , ಸರ್ವ ಲೋಕಗಳಲ್ಲೂ ಸಂಚರಿಸುವ ತಾವೇ ಈ ಪ್ರಶ್ನೆಗೆ ಉತ್ತರಿಸಲು ಸಮರ್ಥರು ."
(ಮಹರ್ಷೇ ತ್ವಂ ಸಮರ್ಥೋಸಿ ಙ್ಞಾತುಮೇವಂ ಇದಂ ನರಂ)
ಗುಣಗಣಿ , ವೀರ , ಧಾರ್ಮಿಕ , ಕೃತಙ್ಞ , ಸತ್ಯವ್ರತ , ದೃಢ , ಚಾರಿತ್ರಶುದ್ಧ , ಸರ್ವಹಿತಾಸಕ್ತ , ವಿದ್ವಾನ್ , ಸಮರ್ಥ , ಸರ್ವಸುಂದರ , ಆತ್ಮಙ್ಞಾನಿ , ಅಕೋಪಿಷ್ಠ , ಕಾಂತಿಯುಕ್ತ , ಅಸೂಯಾರಹಿತ , ಹಾಗೂ ಯುದ್ಧದಲ್ಲಿ ದೇವತೆಗಳನ್ನು ಮಣಿಸಬಲ್ಲ ಮನುಷ್ಯರಾರಾದರೂ ಒಬ್ಬರಿದ್ದಾರೆಯೇ ? ಇದ್ದರೆ ಅವರಾರು ? ಅವರೆಲ್ಲಿದ್ದಾರೆ ? ಅವರ ಚರಿತ್ರೆ ಏನು ? ದಯವಿಟ್ಟು ಆ ಮಹಾತ್ಮನ ಬಗ್ಗೆ ತಿಳಿಸಿಕೊಡುವಿರಾ ?
(ಕೋನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್
ಧಮರ್ಙ್ಜಶ್ಚ ಕೃತಙ್ಞಶ್ಚ ಸತ್ಯ ವಾಕ್ಯೋ ದೃಢವ್ರತಃ
ಚಾರಿತ್ರೇಣ ಚ ಕೋಯುಕ್ತಃ ಸರ್ವ ಭೂತೇಷು ಕೋ ಹಿತಃ
ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಚೈಕಪ್ರಿಯದರ್ಶನಃs
ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋ ಅನಸೂಯಕಃ
ಕಸ್ಯ ಬಿಭ್ಯತಿ ದೇವಾಶ್ಚ ಜಾತ ರೋಷಸ್ಯ ಸಂಯುಗೇ )
ದೀರ್ಘ ಪ್ರಶ್ನೆ ಕೇಳಿದ್ದು ವಾಲ್ಮೀಕಿ . ಸುಸ್ತಾದದ್ದು ನಾರದರು . ಎಲ್ಲಿಂದ ತರೋಣ ಈ ಹದಿನಾರು ಗುಣಗಳ ಗಣಿಯನ್ನು ? ತಲೆಯಲ್ಲಿ ನೆನಪುಗಳು ಒಂದರ ಹಿಂದೆ ಒಂದರಂತೆ ಯಾವು ಯಾವುದೋ ಹೆಸರುಗಳನ್ನು , ಆಕೃತಿಗಳನ್ನು , ಸಂದರ್ಭಗಳನ್ನು ಚಿತ್ರಿಸುತ್ತಿವೆ , ಸರಿಸುತ್ತಿವೆ . " ವಾಲ್ಮೀಕಿ ಬಹಳ ಕಷ್ಟ ಕಣಪ್ಪ ನಿನ್ನ ಪ್ರಶ್ನೆಗೆ ಉತ್ತರಿಸುವುದು . ಯಾವುದಾದರೂ ಒಂದು ಗುಣವೆಂದರೆ ನೂರು ಮಂದಿ ಹೆಸರು ಹೇಳೇನು . ಆದರೆ ಹದಿನಾರೂ ಒಬ್ಬನಲ್ಲಿರಬೇಕೆಂದರೆ ಯಾವ ಮನುಷ್ಯನನ್ನು ಹೆಸರಿಸಲಿ ? "
(ಬಹವೋ ದುರ್ಲಭಾಶ್ಚೈವ ಏ ತ್ವಯಾ ಕೀರ್ತಿತಾ ಗುಣಾಃ )
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos