ಪೃಥುವಿನ ಆದೇಶವೇ ಇಂದಿಗೂ ಸರ್ವೋಚ್ಛ ನ್ಯಾಯ: ಮಗನನ್ನೇ ಗಡೀಪಾರು ಮಾಡಿದ್ದ ಇಕ್ಷ್ವಾಕು ವಂಶದ ರಾಜ! 
ಅಂಕಣಗಳು

ಪೃಥುವಿನ ಆದೇಶವೇ ಇಂದಿಗೂ ಸರ್ವೋಚ್ಛ ನ್ಯಾಯ: ಮಗನನ್ನೇ ಗಡೀಪಾರು ಮಾಡಿದ್ದ ಇಕ್ಷ್ವಾಕು ವಂಶದ ರಾಜ!

ಅಯೋಧ್ಯೆಯ ಹೊರಗೆ ಬುಟ್ಟಿ- ಹಾರೆಗಳನ್ನು ಅವನ ಬಳಿ ಇಟ್ಟು ರಾಜಭಟರು ಹಿಂದಿರುಗಿ ಊರ ಬಾಗಿಲ ಹಾಕಿದರು ! ದಿಗ್ಭ್ರಮಿತ ರಾಜಕುಮಾರ ಉಟ್ಟ ಬಟ್ಟೆಯಲ್ಲಿ ಅರಮನೆಯಿಂದ ನೇರವಾಗಿ ದೇಶಭ್ರಷ್ಟನಾಗಿದ್ದ.

ತೀರ್ಪು ಕೇಳಿ ಹುಡುಗಿಯ ಅಪ್ಪ ಕುಸಿದು ಬಿದ್ದ. ತಾಯಿ ಜೋರಾಗಿ ಅಳತೊಡಗಿದಳು. ಬಂಧುಗಳೆಲ್ಲ ವಿಹ್ವಲ. ಗಂಡಿನ ಕಡೆಯವರು ಕನ್ಯಾ ಪಿತೃವನ್ನು ನಿಂದಿಸತೊಡಗಿದರು. ಸತ್ಯವ್ರತನ ಪ್ರೇಯಸಿ ಓಡಿಬಂದಳು. ತಂದೆಯ ಕಾಲ ಬುಡದಲ್ಲಿ ಬಿದ್ದಳು. ಒಂದೇ ಸಮನೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ದೀನನಾಗಿ ತಂದೆ ಕೇಳಿದ, " ಏಕಮ್ಮ ನನಗೆ ಎಲ್ಲರ ಮುಂದೆ ಹೀಗೆ ಅವಮಾನ ಮಾಡಿದೆ? "
"ಸದ್ದು !" ಭಟರು ಗದರಿಸಿದರು. ಇದೆಲ್ಲ ನೋಡುತ್ತಿದ್ದ ಮಹಾರಾಜ ಹೇಳಿದ; " ನ್ಯಾಯಾಲಯದ ತೀರ್ಪು ಇನ್ನೂ ಅಪೂರ್ಣ. ಸಪ್ತಪದಿಯಾಗದೇ ವಿವಾಹ ಸಂಪನ್ನವಾಗಿಲ್ಲ ಎಂಬುದನ್ನು ಮಾತ್ರ ನ್ಯಾಯಾಲಯ ಹೇಳಿದೆ ಅಷ್ಟೇ. ಆದರೆ ಆರೋಪಿ ಕನ್ಯೆಯನ್ನು ಎಳೆದೊಯ್ದದ್ದು ಸರಿ ಎಂದು ಹೇಳಲಿಲ್ಲ . ಆರೋಪಿ ತಪ್ಪಿತಸ್ಥನಲ್ಲ ಎಂದು ನ್ಯಾಯಾಲಯ ಭಾವಿಸಬೇಕಾದರೆ ಕನ್ಯೆ ಈಗ ಸಾಕ್ಷ್ಯ ನುಡಿಯಬೇಕು. " . ಎಲ್ಲರ ಕಣ್ಣೂ ಈಗ ಕನ್ಯೆಯ ಕಡೆಗೆ. ಸ್ತ್ರೀ ರಕ್ಷಕರು ಬಂದು ಆಕೆಯನ್ನೆಬ್ಬಿಸಿ ರಾಜನ ಮುಂದೆ ನಿಲ್ಲಿಸಿದರು . ಮೊದಲೇ ಭೀರು , ಈಗ ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ . ತಾನೇನು ಮಾಡಬೇಕೋ ಗೊತ್ತಾಗುತ್ತಿಲ್ಲ. ಮಹಾರಾಜ ಹೇಳಿದ, " ನೋಡಮ್ಮ, ನಿನ್ನ ಹೇಳಿಕೆಯ ಮೇಲೆ ಈಗ ಎಲ್ಲವೂ ನಿಂತಿದೆ. ನೀನು ಸ್ವ ಇಚ್ಛೆಯಿಂದ ಆರೋಪಿಯ ಒಡನೆ ಬಂದಿದ್ದರೆ ಅವನಿಗೆ ಶಿಕ್ಷೆಯಿಲ್ಲ. ಅಥವ ಅವನು ನಿನ್ನನ್ನು ಬಲಾತ್ಕರಿಸಿದ್ದರೆ ನಿನಗೆ ನಿನ್ನ ತಂದೆ ತಾಯಿಗಳಲ್ಲಿ ಹೋಗಲು ಅನುಮತಿಸಲಾಗುತ್ತದೆ. "ಅಳುತ್ತ ನಿಂತಿದ್ದ ತಂದೆ ತಾಯಿಗಳೀಗ ಅವಳೆಡೆ ಕಾತುರರಾಗಿ ನೋಡುತ್ತಿದ್ದಾರೆ. ಅವಳಿಗೆ ಏನು ಮಾಡಲೂ ತೋಚುತ್ತಿಲ್ಲ, ಪಾಪ ಮುದಿ ತಂದೆ ತಾಯಿಗಳು ತನ್ನಿಂದಾಗಿ ಎಲ್ಲರ ಕಣ್ಣಿಗೂ ಗುರಿಯಾದರು. ಅಪ್ಪ ಬೇರೆ ಗದ್ಗದಿಸಿ ಕೇಳಿದ್ದರು, " ಏಕಮ್ಮ, ನನಗೆ ಎಲ್ಲರ ಮುಂದೆ ಹೀಗೆ ಅವಮಾನ ಮಾಡಿದೆ?". ತಾಯಿಯನ್ನು ನೋಡಿದರೆ ಆಕೆ ಎರಡೂ ಕೈ ಎತ್ತಿ ತನಗೆ ನಮಸ್ಕಾರ ಮಾಡುತ್ತಿದ್ದಾಳೆ. ಛೇ ಛೇ ಏನಿದರ ಅರ್ಥ ? ಮರಗಟ್ಟಿ ಹೋದಳು. ತನ್ನಿಂದ ಎಷ್ಟು ಮಂದಿಗೆ ನೋವು. ಶಕ್ತಿಯನ್ನೆಲ್ಲ ಬಾಯಿಗೆ ತಂದು ಹೇಳಿದಳು, " ಸ್ವಾಮಿ, ನನಗೆ ನನ್ನ ಅಪ್ಪ-ಅಮ್ಮ ಬೇಕು. "
    ************
ಅಯೋಧ್ಯೆಯ ಹೊರಗೆ ಬುಟ್ಟಿ- ಹಾರೆಗಳನ್ನು ಅವನ ಬಳಿ ಇಟ್ಟು ರಾಜಭಟರು ಹಿಂದಿರುಗಿ ಊರ ಬಾಗಿಲ ಹಾಕಿದರು ! ದಿಗ್ಭ್ರಮಿತ ರಾಜಕುಮಾರ ಉಟ್ಟ ಬಟ್ಟೆಯಲ್ಲಿ ಅರಮನೆಯಿಂದ ನೇರವಾಗಿ ದೇಶಭ್ರಷ್ಟನಾಗಿದ್ದ. ಮಹಾರಾಜ ಪೃಥುವಿನ ತೀರ್ಪು ಇನ್ನೂ ಕಿವಿಯನ್ನು ಕೊರೆಯುತ್ತಿದೆ. " ಈರ್ವರೂ ಪ್ರೇಮಿಗಳೇ. ಅದು ನಿರ್ವಿವಾದ. ಆಕೆಗೆ ವಿವಾಹ ಪೂರ್ಣವಾಗದ್ದರಿಂದ ಯಾರೂ ಆಕೆಯ ಕೈ ಹಿಡಿಯಬಹುದು. ಈ ದೃಷ್ಟಿಯಲ್ಲಿ ಆರೋಪಿಯದು ತಪ್ಪಲ್ಲ. ಆದರೆ ಹೆಣ್ಣು ಸ್ವ ಇಚ್ಛೆಯಿಂದ ಹೋದಂತೆ ಕಾಣುತ್ತಿಲ್ಲ. ಅದನ್ನು ಆಕೆ ಬಾಯಿ ಬಿಟ್ಟು ಹೇಳದಿದ್ದರೂ ಆಯ್ಕೆಯ ಸಂದರ್ಭ ಬಂದಾಗ ಆಕೆ ತಂದೆ - ತಾಯಿಗಳೇ ಬೇಕೆಂದಳು. ಇದಕ್ಕೂ ಹೆಚ್ಚಾಗಿ ಹೆಣ್ಣೊಬ್ಬಳಿಂದ ತುಂಬಿದ ಸಭೆಯಲ್ಲಿ ಹೆಚ್ಚು ನಿರೀಕ್ಷಿಸುವಂತಿಲ್ಲ! ಈ ಸಾಂದರ್ಭಿಕ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಂಡು, ವಿವಾಹದ ಎಲ್ಲ ಕ್ರಿಯೆಗಳಲ್ಲೂ ಆಕೆ ಇಷ್ಟಪಟ್ಟು ಭಾಗವಹಿಸಿರುವುದನ್ನು ನೋಡಿದರೆ, ಮೇಲ್ನೋಟಕ್ಕೇ ಆರೋಪಿಯದು ಬಲಾತ್ಕಾರ ಎಂದು ಕಾಣುತ್ತದೆ. ಅದು ಕಾರಣ ಸ್ತ್ರೀಯನ್ನು ಮದುವೆಯ ಮನೆಯಿಂದ ಎಳೆದೊಯ್ದಿದ್ದಕ್ಕೆ, ಈ ನೆಲದ ಶಾಸನ ಮರಣದಂಡನೆ. ಆದರೆ ಮೂರು ಕಾರಣಗಳಿಂದಾಗಿ ಈ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ. ಒಂದು , ಆರೋಪಿ ನ್ಯಾಯಾಲಯದಲ್ಲಿ ತನ್ನ ಸದ್ - ವರ್ತನೆಯನ್ನು ನಿರೂಪಿಸಿದ್ದಾನೆ; ಸತ್ಯವನ್ನೇ ನುಡಿದಿದ್ದಾನೆ. ಎರಡು, ಕೇವಲ ಅಪಹರಿಸಿದನೇ ವಿನಹ ಬಲವಂತದಿಂದ ಅನುಭವಿಸಿಲ್ಲ. ಮೂರು, ಆರೋಪಿಯ ಹಿನ್ನೆಲೆಯನ್ನು ಗಮನಿಸಿದರೆ ಮುಂದೆ ಈ ರಾಜ್ಯಕ್ಕೆ ಆತನ ಸೇವೆಯ ನಿರೀಕ್ಷೆ ಇದೆ. ಹೀಗಾಗಿ ಈ ನ್ಯಾಯಾಲಯ ಪಂಚಾಗ್ನಿಗಳ ಸಮಕ್ಷಮದಲ್ಲಿ ಧರ್ಮಶಾಸ್ತ್ರಕ್ಕೆ ಅನುಗುಣವಾಗಿ ನೀಡುತ್ತಿರುವ ನ್ಯಾಯದಾನವೆಂದರೆ ಒಂದು, ಹೆಣ್ಣು ಸ್ವತಂತ್ರಳು; ಆಕೆಯ ವಿವಾಹ ಮುಂದುವರಿಯಬಹುದು. ಎರಡು, ಆರೋಪಿಗೆ ಐದು ವರುಷಗಳ ಗಡೀಪಾರು. "
*************
‘ತನಗೇನೂ ಕಾಡು ಹೊಸದಲ್ಲ. ದೇಹವೂ ದುರ್ಬಲವಲ್ಲ. ಐದು ವರ್ಷಗಳು ಹಾಹೂ ಎನ್ನುವುದರಲ್ಲಿ ಬಂದುಬಿಡುತ್ತದೆ. ಅದೂ ದೊಡ್ಡ ವಿಷಯವಲ್ಲ. ಅಯೋಧ್ಯೆ ಒಳಗೆ ಎಷ್ಟೋ, ಹೊರಗೂ ಅಷ್ಟೇ ಸಂಮೃದ್ಧ. ಹೇಳ ಕೇಳುವವರು ಇಲ್ಲದೇ ಹಣ್ಣಿನ ಗೊಂಚಲುಗಳು ತೂಗಾಡುತ್ತಿವೆ. ಎಲ್ಲೆಲ್ಲೂ ಇದ್ದಾಗ ಅರಕೆ ಎಲ್ಲಿ ? ಮೃಗಸಂಖ್ಯೆಯೂ ಜಾಸ್ತಿಯೇ. ತನಗೆ ಊಟ, ವಸತಿಗಳಾವುದಕ್ಕೂ ಕೊರತೆಯಾಗದು. ಇನ್ನು ನನ್ನ ಮಟ್ಟಿಗೆ ಹೇಳಬೇಕಿದ್ದರೆ, ನಾನು ಸತ್ಯದಿಂದ ಜಾರಿಲ್ಲ. ನನ್ನ ಸಿದ್ಧಾಂತದಲ್ಲಿ ನಾನು ರಾಜಿ ಮಾಡಕೊಳ್ಳಲಿಲ್ಲ. ಒಟ್ಟಿಗೇ ಊರು ಬಿಟ್ಟು ಹೊರಟಾಗ ತನ್ನ ಪರವಾಗಿ ಕಂಬನಿದುಂಬಿದವರೆಷ್ಟು ? ಸಾಂತ್ವನ ಮಾಡಿದವರೆಷ್ಟು ? ತನ್ನ ನಿರೀಕ್ಷೆಯಲ್ಲಿಯೇ ಇರುತ್ತೇವೆಂದು ನೊಂದವರೆಷ್ಟು? ಜನಪ್ರೀತಿಯೂ ತನಗೆ ಕಡಿಮೆಯಾಗಿಲ್ಲ. ಇದಾವುದೂ ಸಮಸ್ಯೆಯೇ ಅಲ್ಲ. ಆದರೆ ಎರಡೇ ಎರಡು ವಿಷಯಗಳು ಮನಸ್ಸನ್ನು ಹಿಂಡುತ್ತಿವೆ. ತಂದೆ ಕೇವಲ ಧರ್ಮಶಾಸ್ತ್ರ ನೋಡಿದರಾಗಲಿ ತನ್ನ ಭಾವನೆಗಳಿಗೆ ಬೆಲೆಯೇ ಕೊಡಲಿಲ್ಲ ! ತನ್ನನ್ನು ಕ್ಷಮಿಸಿ ಊರ ಕಾರಾಗೃಹದಲ್ಲಿಯೇ ಒಂದೆರಡು ವರ್ಷ  ಇಡಬಹುದಿತ್ತು. ಅದನ್ನೂ ಮಾಡಲಿಲ್ಲ. ಒಂದೇ ಒಂದು ಮಾತು ಅಪ್ಪನಾಗಿ ಏನಾದರೂ ಹೇಳಬಹುದಿತ್ತು. ಇಲ್ಲ ! ಇನ್ನು ಅವಳು..... ಗೊತ್ತು, ಅವಳು ಮಹಾ ಅಂಜುಬುರುಕಿ, ಆದರೂ ತನ್ನೊಡನಿದ್ದಾಗ ಏನೆಲ್ಲಾ ಪರವಶಳಾಗಿದ್ದಳು ? ಹೇಗೆಲ್ಲಾ ಬದುಕೋಣವೆಂದು ಬಣ್ಣಿಸುತ್ತಿದ್ದಳು ? ಹಾಳಾಗಿ ಹೋಗಲಿ; ಅಪ್ಪನ ಹತ್ತಿರವೇ ಹೋಗಲಿ, ಆದರೆ ಒಂದೇ ಒಂದು ಮಾತು ಈ ಶಿಕ್ಷೆಯನ್ನು ತಪ್ಪಿಸಬಹುದಿತ್ತು ! " ನನ್ನನ್ನು ಬಲಾತ್ಕರಿಸಲಿಲ್ಲ" ಎಂದು ಹೇಳಿ "ಈಗ ಮನಸ್ಸು ಬದಲಿಸಿದ್ದೇನೆ" ಎಂದೂ ಹೇಳಿಬಿಡಬಹುದಾಗಿತ್ತು!! ಇದೇನೂ ಹೇಳದೆ ಅಪ್ಪನೊಡನೆ ಹೋಗಿಬಿಟ್ಟಳು. ಹೆಂಗಸರೇ ಹೀಗೆ. ಏನೂ ಅಡಚಣೆಗಳಿಲ್ಲದಿದ್ದಾಗ ಧೀರರು, ಶೂರರು, ನಂಬಿಕೆಯ ಸಾಕಾರ. ಕೊಂಚ ಅಡ್ಡಿಯಾಯಿತೋ, ತದ್ವಿರುದ್ಧ. ವರ್ಷ - ವರ್ಷಗಳು ಜೊತೆಯಿದ್ದ ಇನಿಯನನ್ನು "ಇನ್ನು ಮುಂದೆ ನೀನು ನನ್ನ ಸಹೋದರನಂತೆ" ಎಂದು ಕೈ ಕುಲುಕಿ ನಡೆದೇ ಬಿಡುತ್ತಾಳೆ. ಛೆ ! ಹೆಣ್ಣನ್ನು ನಂಬುವ ಗಂಡಿಗೆ ಧಿಕ್ಕಾರ. ಹೆಣ್ಣೆಂದರೆ ಮಾಯೆ; ಚಂಚಲೆ; ಅಸ್ಥಿರೆ; ದುರ್ಬಲೆ. ಅವಳನ್ನು ಎಂದೂ ನಂಬಬಾರದು. ( ಮುಗಿದಿಲ್ಲ ) 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

New Year 2026: ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು; ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ

ಚಿತ್ರದುರ್ಗ ಬಸ್ ದುರಂತ: DNA ವರದಿ ಆಧರಿಸಿ ಕುಟುಂಬಗಳಿಗೆ ಮೃತದೇಹ ಹಸ್ತಾಂತರ

'ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿದ್ದಾರೆ: ಮುಕ್ಕಾಲು ಪ್ರಪಂಚ ಗೆದ್ದ ಅಲೆಕ್ಸಾಂಡರ್ ಶಾಶ್ವತ ಇರಲಿಲ್ಲ, ಸದ್ದಾಂ ಹುಸೇನ್ ಅವಿತುಕೊಂಡ'

ಕರಾವಳಿ,‌ ಮಲೆನಾಡು ಭಾಗಕ್ಕೆ ‌ಹೊಸ ಪ್ರವಾಸೋದ್ಯಮ ನೀತಿ: ಕಾರವಾರ Airport ನಿರ್ಮಾಣಕ್ಕೆ ಆದ್ಯತೆ; ಡಿಕೆ ಶಿವಕುಮಾರ್

ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ, ಮರಾಠಾ ಸಮಾಜವನ್ನು ಬಲಿಷ್ಠವಾಗಿ ಕಟ್ಟುವ ಹಂಬಲವಿದೆ: ಸಚಿವ ಸಂತೋಷ ಲಾಡ್

SCROLL FOR NEXT