H3N2 ಇನ್‌ಫ್ಲುಯೆಂಜಾ (ಸಾಂಕೇತಿಕ ಚಿತ್ರ) 
ಅಂಕಣಗಳು

H3N2 ಇನ್‌ಫ್ಲುಯೆಂಜಾ: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ಕೊರೊನಾ ವೈರಸ್ಸಿನ ಕಾಟ ಮುಗಿಯಿತು ಎಂದು ನಿಟ್ಟುಸಿರುಬಿಡುವ ಹೊತ್ತಿಗೆ ಇತ್ತೀಚೆಗೆ ಎಚ್3ಎನ್2 ಇನ್‌ಫ್ಲುಯೆಂಜಾ ಹಾವಳಿ ಶುರುವಾಗಿದೆ.

ಕೊರೊನಾ ವೈರಸ್ಸಿನ ಕಾಟ ಮುಗಿಯಿತು ಎಂದು ನಿಟ್ಟುಸಿರುಬಿಡುವ ಹೊತ್ತಿಗೆ ಇತ್ತೀಚೆಗೆ ಎಚ್3ಎನ್2 ಇನ್‌ಫ್ಲುಯೆಂಜಾ ಹಾವಳಿ ಶುರುವಾಗಿದೆ. ದೇಶಾದ್ಯಂತ ಕಳೆದ ಒಂದು ತಿಂಗಳಿನಿಂದ ನೂರಾರು ಎಚ್3ಎನ್2 ಇನ್‌ಫ್ಲುಯೆಂಜಾ ಪ್ರಕರಣಗಳು ದಾಖಲಾಗಿವೆ. ನಮ್ಮ ರಾಜ್ಯದಲ್ಲಿ 26 ಎಚ್3ಎನ್2 ಇನ್‌ಫ್ಲುಯೆಂಜಾ ಪ್ರಕರಣಗಳು ದಾಖಲಾಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. 

ಎಚ್3ಎನ್2 ವೈರಾಣು

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ ಎಚ್3ಎನ್2 ಜ್ವರಕ್ಕೆ ಕಾರಣವಾಗಬಲ್ಲ ಒಂದು ವೈರಾಣು. ಇದರ ಒಂದು ಉಪ ರೂಪಾಂತರಿ ಅಪಾಯಕಾರಿಯಾಗಿದ್ದು ರೋಗಿಯು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬುದು ಕಾಳಜಿಗೆ ಕಾರಣವಾದ ವಿಷಯವಾಗಿದೆ.

ಪ್ರತಿ ವರ್ಷ ಇಂತಹ ವೈರಸ್ಸಿನ ಕಾಟದಿಂದ ಜನರು ಸಮಸ್ಯೆ ಎದುರಿಸುತ್ತಾರೆ. ಆದರೆ ಈ ಬಾರಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾಸ್ಕನ್ನು ಧರಿಸುವುದು, ಜನಸಂದಣಿಯನ್ನು ತಡೆಗಟ್ಟುವುದು ಮತ್ತು ನೈರ್ಮಲ್ಯ ಪಾಲನೆಯಂತಹ ಕ್ರಮಗಳ ಮೂಲಕ ಇದರ ಹರಡುವಿಕೆಯನ್ನು ತಡೆಯಬಹುದು ಎಂಬುದು ವೈರಾಣು ತಜ್ಞರ ಅಭಿಮತವಾಗಿದೆ.

ಕೋವಿಡ್-19 ಮತ್ತು ಎಚ್3ಎನ್2 ಬೇರೆಯೇ?

ಕೋವಿಡ್-19 ಮತ್ತು ಎಚ್3ಎನ್2 ಇನ್‌ಫ್ಲುಯೆಂಜಾ ಸೋಂಕುಗಳು ಎರಡೂ ಬೇರೆ ಬೇರೆ ಕುಟುಂಬದ ಸಾಂಕ್ರಾಮಿಕ ವೈರಸ್‌ಗಳಿಂದ ಉಂಟಾಗುತ್ತವೆ. ಈ ಎರಡೂ ಉಸಿರಾಟದ ಕಾಯಿಲೆಗಳು ಜನರಲ್ಲಿ ಹೆಚ್ಚು ಹೆಚ್ಚು ಹರಡುತ್ತವೆ. ಕೋವಿಡ್-19 ಸಾರ್ಸ್-ಕೋವ್-2 ವೈರಸ್‌ನಿಂದ ಉಂಟಾಗುತ್ತದೆ. ಎಚ್3ಎನ್2 ಇನ್‌ಫ್ಲುಯೆಂಜಾ ಸೋಂಕು ಆಸ್ಪತ್ರೆಗೆ ದಾಖಲಾಗುವ ಹೆಚ್ಚಿನ ಪ್ರಕರಣಗಳಿಗೆ ಕಾರಣವಾಗಬಹುದು. ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನಿನಿಂದ ಹೊರ ಹೊಮ್ಮುವ ಡ್ರಾಪ್ಲೆಟ್ಸ್ಗಳಿಂದ (ಹನಿ), ಸೋಂಕಿತ ವ್ಯಕ್ತಿಗಳ ಕೈ ಸ್ಪರ್ಶ ಹಾಗೂ ಸೋಂಕಿತ ಸ್ಥಳದಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಎಚ್3ಎನ್2 ವೈರಸ್ನಿಂದ ಹರಡಿರುವ ಸೋಂಕು ಕನಿಷ್ಠ 5 ರಿಂದ 7 ದಿನಗಳ ವರೆಗೆ ಇರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಇದು ಎರಡು-ಮೂರು ವಾರಗಳವರೆಗೆ ಕಾಡಬಹುದು. 

ಎಚ್3ಎನ್2 ಸೋಂಕಿನ ಲಕ್ಷಣಗಳು

ಎಚ್3ಎನ್2 ಸೋಂಕಿನ ಮುಖ್ಯ ಲಕ್ಷಣಗಳೆಂದರೆ ಜ್ವರ, ಚಳಿ, ಕೆಮ್ಮು, ಕಫ, ವಾಂತಿ, ಭೇದಿ, ಗಂಟಲು ಕೆರೆತ, ಮೈ ಕೈ ನೋವು, ಮಾಂಸ ಖಂಡಗಳಲ್ಲಿ ನೋವು, ವಾಕರಿಕೆ, ವಿಪರೀತ ನೆಗಡಿ ಮತ್ತು ನೆಗಡಿ. ತೀವ್ರವಾದ ಮೈ ಕೈ ನೋವು, ಮತ್ತು 102-103 ಡಿಗ್ರಿಯಷ್ಟು ಜ್ವರ ಕೂಡ ಕಾಣಿಸಿಕೊಳ್ಳಬಹುದು. ಬೆಳಗ್ಗೆ ಹಾಸಿಗೆಯಿಂದ ಮೇಲೇಳಲಾರದಷ್ಟು ಮೈಕೈ ನೋವಿನ ತೀವ್ರತೆ ಇರುತ್ತದೆ. ತಾಪಮಾನ ಬದಲಾವಣೆ ಮತ್ತು ಹೆಚ್ಚು ಧೂಳು ಈ ವೈರಸ್ಸಿನ ಪ್ರಸರಣವನ್ನು ತೀವ್ರಗೊಳಿಸುತ್ತಿವೆ. ಆದ್ದರಿಂದ ಈ ಬಗ್ಗೆ ಜಾಗೃತರಾಗಿರುವುದು ಅತ್ಯಗತ್ಯ. 

ಎಚ್3ಎನ್2 ಸೋಂಕನ್ನು ತಡೆಗಟ್ಟುವುದು ಹೇಗೆ?
ಈ ಸೋಂಕನ್ನು ತಡೆಗಟ್ಟಲು ಆಗಾಗ ನಿಯಮಿತವಾಗಿ ಕೈಗಳನ್ನು ಸೋಪು ಹಾಗೂ ನೀರು ಬಳಸಿ ಚೆನ್ನಾಗಿ ತೊಳೆದುಕೊಳ್ಳಬೇಕು. ಹೆಚ್ಚು ಜನಜಂಗುಳಿ ಇರುವ ಪ್ರದೇಶಗಳಲ್ಲಿ ಸಂಚಾರ ಮಾಡಬಾರದು. ದೈಹಿಕ ಅಂತರವನ್ನು ಪಾಲಿಸಬೇಕು. ಸುರಕ್ಷತಾ ದೃಷ್ಟಿಯಿಂದ ಆದಷ್ಟು ಮಾಸ್ಕನ್ನು ಬಳಸಬೇಕು. ಕೈಗಳಿಂದ ಮುಖ ಹಾಗೂ ಮೂಗನ್ನು ಪದೇಪದೇ ಮುಟ್ಟಿಕೊಳ್ಳಬಾರದು. ಸೀನುವಾಗ ಹಾಗೂ ಕೆಮ್ಮುವಾಗ ಬಾಯಿ ಹಾಗೂ ಮೂಗನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ನೀರು ಹಾಗೂ ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಶುಭಾಶಯ ಕೋರುವ ವೇಳೆ ಕೈ ಕುಲುಕುವುದು ಹಾಗೂ ಇನ್ನಿತರ ದೈಹಿಕ ಸಂಪರ್ಕದಿಂದ ದೂರ ಇರಬೇಕು. ಸಾರ್ವಜನಿಕವಾಗಿ ಉಗುಳಬಾರದು. ಜ್ವರ ಹಾಗೂ ಮೈ ಕೈ ನೋವಿದ್ದಾಗ ವೈದ್ಯರನ್ನು ತಪ್ಪದೇ ಕಾಣಬೇಕು. 

ಜಾಗ್ರತೆ ವಹಿಸುವುದು ಹೇಗೆ?

ಎಚ್3ಎನ್2 ವೈರಾಣುವಿನಿಂದ 15 ವರ್ಷಕ್ಕಿಂತ ಚಿಕ್ಕವರು ಹಾಗೂ 50 ವರ್ಷ ಮೇಲ್ಪಟ್ಟವರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ವಾಯು ಮಾಲಿನ್ಯದಿಂದ ಈ ಸೋಂಕು ಹೆಚ್ಚಾಗಿ ಉಂಟಾಗುತ್ತದೆ. ಆದ್ದರಿಂದ ಉಸಿರಾಟ ಮತ್ತು ಇತರ ಆರೋಗ್ಯ ಸಮಸ್ಯೆಗಳು ಇರುವವರು ಈಗ ಹೆಚ್ಚಿನ ಕಾಳಜಿ ವಹಿಸಬೇಕು. ಜೊತೆಗೆ ಮಧುಮೇಹ, ಬಿಪಿ, ಹೃದ್ರೋಗ, ಕಿಡ್ನಿ, ಲಿವರ್ ಇನ್ನಿತರ ಆರೋಗ್ಯ ಸಮಸ್ಯೆ ಇರುವವರು ಹೆಚ್ಚಿನ ಜಾಗ್ರತೆಯಿಂದ ಇರಬೇಕು. ಬಿಸಿಲಿನಲ್ಲಿ ಅದರಲ್ಲಿಯೂ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4-5 ಗಂಟೆಯವರೆಗೆ ಹೆಚ್ಚು ಸುತ್ತಾಡುವುದು ಬೇಡ. ಬೇಸಿಗೆ ಕಾಲವಾಗಿರುವುದರಿಂದ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಮತ್ತು ಕೊಡೆ ಬಳಸುವುದು ಒಳ್ಳೆಯದು. ನೀರಿಗೆ ತುಳಸಿ ಅಥವಾ ಶುಂಠಿಯನ್ನು ಬೆರೆಸಿ ಕುಡಿಯುವುದು ಒಳ್ಳೆಯದು. ಎಳನೀರು, ಮಜ್ಜಿಗೆ ಮತ್ತು ತಾಜಾ ಹಣ್ಣಿನ ರಸಗಳನ್ನು ಸೇವಿಸುವುದು ಹಿತಕಾರಿ. ಜ್ವರವಿದ್ದರೆ ಆಗಾಗ ಬಟ್ಟೆಯನ್ನು ಶುದ್ಧನೀರಿನಿಂದ ಅದ್ದಿ ಹಣೆಗೆ ಇಟ್ಟುಕೊಂಡು ತಾಪಮಾನವನ್ನು ನಿಯಂತ್ರಿಸಬಹುದು. 

ಪೌಷ್ಟಿಕ ಆಹಾರ ಸೇವನೆಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ದೇಹಕ್ಕೆ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು, ಕಾಲಕಾಲಕ್ಕೆ ಫ್ಲೂಗೆ ಸಂಬಂಧಿಸಿದ ಇಂಜೆಕ್ಷನ್ ಹಾಕಿಸಿಕೊಳ್ಳುವುದು ಹಾಗೂ ಕೋವಿಡ್ ಲಸಿಕೆಗಳನ್ನು ತಪ್ಪದೇ ಹಾಕಿಸಿಕೊಳ್ಳುವ ಮೂಲಕ ಈ ರೋಗ ಬರದಂತೆ ತಡೆಯುವ ಸಾಧ್ಯತೆ ಇದೆ. ಒಟ್ಟಾರೆ ಹೇಳುವುದಾದರೆ ಎಚ್3ಎನ್2 ವೈರಸ್ ಸೋಂಕಿಗೆ ಚಿಕಿತ್ಸೆಯು ತುಂಬಾ ಜಟಿಲವಾಗಿಲ್ಲ. ಆದಷ್ಟು ನೀರು, ದ್ರವ ರೂಪದ ಆಹಾರ ಸೇವಿಸಬೇಕು. ರೋಗಲಕ್ಷಣಗಳನ್ನು ನಿವಾರಿಸಲು ಜ್ವರ, ಕೆಮ್ಮು ಅಥವಾ ತಲೆನೋವಿಗೆ ನಿಯಮಿತವಾಗಿ ಔಷಧಿಗಳನ್ನು ಸೇವಿಸಬಹುದು. ರೋಗಲಕ್ಷಣಗಳು ತೀವ್ರವಾಗಿದ್ದರೆ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT