ಅಂಕಣಗಳು

ಭವಿಷ್ಯದ ಭಾರತದ ಅಣು ವಿದ್ಯುತ್ ಕನಸು (ಜಾಗತಿಕ ಜಗಲಿ)

ಸದ್ಯದ ಮಟ್ಟಿಗೆ ಭಾರತದ ಬಳಿ 23 ಪರಮಾಣು ರಿಯಾಕ್ಟರ್‌ಗಳಿವೆ. ಅವು ಜೊತೆಯಾಗಿ 8,180 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಅಂದರೆ, ಇದು 8.2 ಗಿಗಾವ್ಯಾಟ್ (GW) ವಿದ್ಯುತ್ ಶಕ್ತಿ.

ಭಾರತ ಒಂದು ದಿನ ಸಂಪೂರ್ಣವಾಗಿ ಶುದ್ಧ ಮತ್ತು ನಂಬಿಕಾರ್ಹ ವಿದ್ಯುತ್ ಶಕ್ತಿಯನ್ನು ಬಳಸುವುದನ್ನು ಊಹಿಸಿಕೊಳ್ಳಿ. ಮನೆಗಳಿಗೆ ವಿದ್ಯುತ್ ಕಡಿತ ಎದುರಾಗುವುದಿಲ್ಲ, ಶಾಲೆಗಳಲ್ಲಿ ಸದಾ ದೀಪ ಉರಿಯುತ್ತದೆ, ಮತ್ತು ಕಾರ್ಖಾನೆಗಳು ವಿದ್ಯುತ್ ಕೊರತೆ ಅನುಭವಿಸದೆ, ಹಗಲು ಮತ್ತು ರಾತ್ರಿಯೂ ಕಾರ್ಯಾಚರಿಸುತ್ತವೆ. ಭಾರತ ಪರಮಾಣು ವಿದ್ಯುತ್ ಶಕ್ತಿಯ ಮೂಲಕ ಈ ಕನಸನ್ನು ನನಸಾಗಿಸಲು ನಿರಂತರವಾಗಿ ಪ್ರಯತ್ನ ನಡೆಸುತ್ತಿದೆ. ಆದರೆ, ಎಲ್ಲ ದೊಡ್ಡ ಕನಸುಗಳ ರೀತಿಯಲ್ಲೇ, ಈ ಕನಸಿಗೂ ಸಾಕಷ್ಟು ಕಠಿಣ ಸವಾಲುಗಳಿವೆ. ಅವೇನು ಎನ್ನುವುದನ್ನು ನಾವು ಸರಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಸದ್ಯದ ಮಟ್ಟಿಗೆ ಭಾರತದ ಬಳಿ 23 ಪರಮಾಣು ರಿಯಾಕ್ಟರ್‌ಗಳಿವೆ. ಅವು ಜೊತೆಯಾಗಿ 8,180 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಅಂದರೆ, ಇದು 8.2 ಗಿಗಾವ್ಯಾಟ್ (GW) ವಿದ್ಯುತ್ ಶಕ್ತಿ. ಈ ರಿಯಾಕ್ಟರ್‌ಗಳು ಒಂದಕ್ಕಿಂತ ಒಂದು ವಿಭಿನ್ನವಾದ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದರಿಂದ, ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ಸ್ (ಪಿಎಚ್‌ಡಬ್ಲ್ಯುಆರ್), ಲೈಟ್ ವಾಟರ್ ರಿಯಾಕ್ಟರ್ಸ್ (ಎಲ್‌ಡಬ್ಲ್ಯುಆರ್), ಮತ್ತು ಬಾಯ್ಲಿಂಗ್ ವಾಟರ್ ರಿಯಾಕ್ಟರ್ಸ್ (ಬಿಡಬ್ಲ್ಯುಆರ್) ಎನ್ನುವಂತಹ ಕಷ್ಟಕರ ಹೆಸರುಗಳನ್ನು ಹೊಂದಿವೆ! ಇವುಗಳನ್ನು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಸಲುವಾಗಿಯೇ ಕಾರ್ಯಾಚರಿಸುವ ವಿಭಿನ್ನ ಇಂಜಿನ್‌ಗಳು ಎಂದು ಭಾವಿಸಿಕೊಳ್ಳಿ. ಭಾರತ ಈಗ ತನ್ನ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2047ರ ವೇಳೆಗೆ ಈಗಿನ 8.2 ಗಿಗಾವ್ಯಾಟ್‌ನಿಂದ 100 ಗಿಗಾವ್ಯಾಟ್‌ಗಳ ಬೃಹತ್ ಪ್ರಮಾಣಕ್ಕೆ ಹೆಚ್ಚಿಸಲು ಯೋಜಿಸಿದೆ. ಇದು ಇಂದಿನ ಅಣು ವಿದ್ಯುತ್ ಉತ್ಪಾದನೆಗೆ ಹೋಲಿಸಿದರೆ 12 ಪಟ್ಟಿಗೂ ಹೆಚ್ಚಿನ ಬೃಹತ್ ಹೆಚ್ಚಳವಾಗಿದೆ.

ಎಸ್ಒಐಸಿ ರಿಸರ್ಚ್ (ಸ್ಟಾಕ್ ಆಫ್ ಇಂಡಿಯನ್ ಕಂಪನೀಸ್ ರಿಸರ್ಚ್) ಸಂಸ್ಥೆಯ ಸಂಶೋಧನಾ ವರದಿಯೊಂದರ ಪ್ರಕಾರ, ಭಾರತ ಈ ಗುರಿಯನ್ನು ಸಾಧಿಸುವುದು ಸುಲಭವಲ್ಲ. ಪರಮಾಣು ಸ್ಥಾವರಗಳನ್ನು ನಿರ್ಮಿಸಲು ಅಪಾರ ಪ್ರಮಾಣದ ಹಣ ಬೇಕಾಗುತ್ತದೆ. ಪೂರೈಕೆದಾರರು ಅನುಮೋದನೆ ಪಡೆಯಲು ಅಪಾರ ಸಮಯ ಬೇಕಾಗುತ್ತದೆ. ಇದರೊಡನೆ, ಕೇವಲ ಕೆಲವು ಕಂಪನಿಗಳು ಮಾತ್ರವೇ ಪ್ರಮುಖ ಬಿಡಿಭಾಗಗಳನ್ನು ನಿರ್ಮಿಸುತ್ತವೆ. ಇವೆಲ್ಲ ವಾಸ್ತವ ಸಮಸ್ಯೆಗಳು ಭಾರತದ ಯೋಜನೆಯ ವೇಗವನ್ನು ನಿಧಾನಗೊಳಿಸಬಹುದು.

ನಾವು ಮೊದಲು ಭಾರತದ ಯೋಜನೆಯನ್ನು ಅರ್ಥ ಮಾಡಿಕೊಳ್ಳೋಣ. ಭಾರತ ಈಗಾಗಲೇ 14 ದೇಶೀಯ ನಿರ್ಮಾಣದ 700 ಮೆಗಾವ್ಯಾಟ್ ಪಿಎಚ್‌ಡಬ್ಲ್ಯುಆರ್ ರಿಯಾಕ್ಟರ್‌ಗಳ ಮೂಲಕ 9,800 ಮೆಗಾವ್ಯಾಟ್ ಸಾಮರ್ಥ್ಯ ಅಭಿವೃದ್ಧಿ ಪಡಿಸುತ್ತಿದೆ. ಈಗಾಗಲೇ ಇರುವ ಪರಮಾಣು ಘಟಕಗಳಲ್ಲಿ 5,600 ಮೆಗಾವ್ಯಾಟ್ ಹೆಚ್ಚುವರಿ ಸಾಮರ್ಥ್ಯ ಯೋಜಿಸಲಾಗುತ್ತಿದೆ. ಮಧ್ಯಪ್ರದೇಶದ ಭಿಮಾಪುರದಲ್ಲಿ 2,800 ಮೆಗಾವ್ಯಾಟ್ ನೂತನ ಯೋಜನೆಗೆ ಆರಂಭಿಕ ಅನುಮೋದನೆ ನೀಡಲಾಗಿದ್ದು, ಇನ್ನೊಂದು 7,000 ಮೆಗಾವ್ಯಾಟ್ ಪಿಎಚ್‌ಡಬ್ಲ್ಯುಆರ್‌ ಅನ್ನು ಮುಂದೆ ನಿರ್ಮಿಸಲಾಗುತ್ತದೆ. ಇನ್ನು ಆಮದಿನತ್ತ ಗಮನಿಸಿದರೆ, ಭಾರತ ನಾಲ್ಕು ದೊಡ್ಡ ರಿಯಾಕ್ಟರ್‌ಗಳ ಮೂಲಕ 4,000 ಮೆಗಾವ್ಯಾಟ್ ಸಾಮರ್ಥ್ಯ ವೃದ್ಧಿಸುತ್ತಿದೆ. ಭಾರತ ಆರು ಬೃಹತ್ ರಿಯಾಕ್ಟರ್‌ಗಳ ಮೂಲಕ 10,380 ಮೆಗಾವ್ಯಾಟ್ ಹಾಗೂ ಇನ್ನೂ ಆರು ರಿಯಾಕ್ಟರ್‌ಗಳ ಮೂಲಕ ಹೆಚ್ಚುವರಿ 7,248 ಮೆಗಾವ್ಯಾಟ್ ಸಾಮರ್ಥ್ಯ ಗಳಿಸಲಿದೆ. ಇದೆಲ್ಲದರೊಡನೆ, ಸಣ್ಣ ರಿಯಾಕ್ಟರ್‌ಗಳು ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವಗಳ ಮೂಲಕ ಅಂದಾಜು 39,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇವೆಲ್ಲವನ್ನೂ ಜೊತೆಗೂಡಿಸಿದರೆ, ಭಾರತ 2047ರ ವೇಳೆಗೆ 1,01,008 ಮೆಗಾವ್ಯಾಟ್, ಅಂದರೆ, 101 ಗಿಗಾವ್ಯಾಟ್ ಸಾಮರ್ಥ್ಯ ಗಳಿಸುವ ನಿರೀಕ್ಷೆಗಳಿವೆ.

ಆದರೆ, ಇದರೊಡನೆ ಒಂದಷ್ಟು ಅಡೆತಡೆಗಳೂ ಎದುರಾಗಲಿವೆ. ಕೇವಲ ಒಂದು ಪೂರೈಕೆದಾರನಿಗೆ ಅನುಮೋದನೆ ಪಡೆಯಲೂ 5ರಿಂದ 7 ವರ್ಷಗಳ ಅವಧಿ ಬೇಕಾಗುತ್ತದೆ. ಅಂದರೆ, ಈ ಕ್ಷೇತ್ರದಲ್ಲಿ ಕಾರ್ಯಾಚರಿಸಲು ಬಯಸುವ ಕಂಪನಿಗಳು ವಾಸ್ತವವಾಗಿ ಕೆಲಸ ಮಾಡಲು ಆರಂಭಿಸುವ ಮುನ್ನ ಸಾಕಷ್ಟು ಸಮಯ ಕಾಯಬೇಕಾಗುತ್ತದೆ. ಇನ್ನು ಹಣ ಇನ್ನೊಂದು ದೊಡ್ಡ ವಿಚಾರ. 700 ಮೆಗಾವ್ಯಾಟ್ ಸಾಮರ್ಥ್ಯದ ಒಂದು ರಿಯಾಕ್ಟರ್ ನಿರ್ಮಾಣಕ್ಕೇ ಅಂದಾಜು 20,000ದಿಂದ 28,000 ಕೋಟಿ ರೂಪಾಯಿ ತಗಲುತ್ತದೆ. ಅಂದರೆ, ಪ್ರತಿ ಮೆಗಾವ್ಯಾಟ್ ಸಾಮರ್ಥ್ಯಕ್ಕೆ 15ರಿಂದ 18 ಕೋಟಿ ರೂಪಾಯಿ ಬೇಕಾಗುತ್ತದೆ. ಇದರಿಂದ ಭಾರತದಲ್ಲಿ ಅಣು ವಿದ್ಯುತ್ ಅತ್ಯಂತ ದುಬಾರಿ ವಿದ್ಯುತ್ ಶಕ್ತಿ ಉತ್ಪಾದನಾ ವಿಧಾನ ಎನಿಸುತ್ತದೆ. ಸಣ್ಣ ಅವಧಿಯಲ್ಲಿ, ಅಂದರೆ, 2032ರ ವೇಳೆಗೆ ಭಾರತ 22.5 ಗಿಗಾವ್ಯಾಟ್ ಸಾಮರ್ಥ್ಯ ಸಾಧಿಸಲು ಬಯಸುತ್ತಿದೆ. ಆದರೆ, ಇದಕ್ಕಾಗಿ ಅಣು ವಿದ್ಯುತ್ ಯೋಜನೆಗಳು ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಪೂರ್ಣಗೊಳಿಸಬೇಕು.

ಭಾರತ ಹೇಗೆ ಈ ಅಡೆತಡೆಗಳನ್ನು ನಿವಾರಿಸಲು ಯೋಜಿಸಿದೆ? ಇದಕ್ಕೆ ಉತ್ತರ ಹೊಸ ಕಾನೂನಿನಲ್ಲಿದೆ. ಭಾರತ ಸರ್ಕಾರ 2025 ಶಾಂತಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಇದು ಒಂದು ರೀತಿಯಲ್ಲಿ ಮುಚ್ಚಿದ ಬಾಗಿಲು ತೆರೆಯುವಂತಿದೆ. ಮೊದಲು, ಕೇವಲ ಸರ್ಕಾರಿ ನಿಯಂತ್ರಿತ ಅಣು ಯೋಜನೆಗಳು ಮಾತ್ರವೇ ಜಾರಿಯಲ್ಲಿದ್ದವು. ಆದರೆ ಈಗ ಖಾಸಗಿ ಕಂಪನಿಗಳು, ಜಂಟಿ ಉದ್ಯಮಗಳು, ಮತ್ತು ವಿದೇಶೀ ಸಂಸ್ಥೆಗಳೂ ಸಹ ಭಾರತದಲ್ಲಿ ಪರಮಾಣು ಘಟಕಗಳ ಮಾಲೀಕತ್ವ ಹೊಂದಬಹುದು ಅಥವಾ ಘಟಕಗಳನ್ನು ಕಾರ್ಯಾಚರಿಸಬಹುದು. ಈ ಕಾನೂನು ಏನಾದರೂ ತೊಂದರೆ ಉಂಟಾದರೆ ಪೂರೈಕೆದಾರರ ಮೇಲೆ ಬೀಳುವ ಅಪಾರ ಆರೋಪಗಳ ಹೊರೆಯನ್ನೂ ಕಡಿಮೆಗೊಳಿಸಿದ್ದು, ಸಮಸ್ಯೆ ಎದುರಾದಾಗ ನಿರ್ವಾಹಕರು ಎಷ್ಟು ಹಣ ನೀಡಬೇಕು ಎನ್ನುವುದನ್ನೂ ನಿರ್ಧರಿಸುತ್ತದೆ. ಇದು ಭಾರತದ ನಿಯಮಗಳನ್ನು ಜಾಗತಿಕ ಗುಣಮಟ್ಟಕ್ಕೆ ಹತ್ತಿರಾಗಿಸಿದ್ದು, ಖಾಸಗಿ ಕಂಪನಿಗಳಿಗೆ ಭಾರತದಲ್ಲಿ ಹೂಡಿಕೆ ನಡೆಸುವುದನ್ನು ಸುಲಭವಾಗಿಸಿದೆ.

ಇಷ್ಟಾದರೂ ಕೇವಲ ಕಾನೂನುಗಳು ಮಾತ್ರವೇ ಎಲ್ಲವನ್ನೂ ಪರಿಹರಿಸಲು ಸಾಧ್ಯವಿಲ್ಲ. ಹೆಚ್ಚಿನ ವೆಚ್ಚಗಳು, ಪೂರೈಕೆ ಸಮಸ್ಯೆಗಳು, ಮತ್ತು ನಿಧಾನಗತಿಯ ಯೋಜನಾ ಪ್ರಗತಿಗಳು ಭಾರತ ಎಷ್ಟು ವೇಗವಾಗಿ ಪ್ರಗತಿ ಹೊಂದಬಹುದು ಎನ್ನುವುದನ್ನು ನಿರ್ಧರಿಸಲಿವೆ.

ಭಾರತ ಬುದ್ಧಿವಂತಿಕೆಯ ಮೂರು ಹಂತಗಳ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದ್ದು, ಇದಕ್ಕಾಗಿ ಪಿಎಚ್‌ಡಬ್ಲ್ಯುಆರ್‌ಗಳು, ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳು (ಎಫ್‌ಬಿಆರ್), ಮತ್ತು ಅಡ್ವಾನ್ಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳನ್ನು (ಎಎಚ್‌ಡಬ್ಲ್ಯುಆರ್) ಬಳಸುತ್ತಿದೆ. ಭಾರತದ ಇಂಧನ ಭದ್ರತೆಯನ್ನು ದೀರ್ಘಾವಧಿಗೆ ಸ್ಥಿರವಾಗಿಡಲು ಮತ್ತು ಆಮದು ಇಂಧನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿದೇಶೀ ಅವಲಂಬನೆಯನ್ನು ಕಡಿಮೆಗೊಳಿಸಲು ಈ ಹಂತ ಹಂತಗಳ ಯೋಜನೆ ನೆರವಾಗುತ್ತದೆ.

ಇದರೊಡನೆ, ಇನ್ನೊಂದು ಕಳವಳದ ಅಂಶವೂ ಇದೆ. ಭಾರತದ ಪರಮಾಣು ಪೂರೈಕೆ ಸರಪಳಿ ಈಗ ಕೇವಲ ಕೆಲವೇ ಕಂಪನಿಗಳ ನಿಯಂತ್ರಣದಲ್ಲಿದೆ. ಲಾರ್ಸನ್ ಆ್ಯಂಡ್ ಟೂಬ್ರೊ ಮತ್ತು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಸಂಸ್ಥೆಗಳು ರಿಯಾಕ್ಟರ್ ಸಿಸ್ಟಮ್‌ಗಳು, ತೂಕದ ಲೋಹದ ಬಿಡಿಭಾಗಗಳು, ಮತ್ತು ಟರ್ಬೈನ್ ಉಪಕರಣಗಳಂತಹ ನಿರ್ಮಾಣ ಕ್ಷೇತ್ರದಲ್ಲಿ ತಮ್ಮ ಪಾರಮ್ಯ ಹೊಂದಿವೆ. ಇದನ್ನು 'ಒಲಿಗೊಪಲಿ' ವ್ಯವಸ್ಥೆ ಎನ್ನಲಾಗುತ್ತದೆ. ಅಂದರೆ, ಒಂದು ಮಾರುಕಟ್ಟೆಯಲ್ಲಿ ಕೇವಲ ಕೆಲವೇ ಕಂಪನಿಗಳು ಬಹುತೇಕ ಉದ್ಯಮವನ್ನು ನಿಯಂತ್ರಿಸುವುದು ಎಂದರ್ಥ. ಯುರೇನಿಯಂ ಕೇವಲ ಕೆಲವು ರಾಷ್ಟ್ರಗಳಲ್ಲಿ ಮಾತ್ರವೇ ಲಭ್ಯವಿರುವುದರಿಂದ, ರಿಯಾಕ್ಟರ್‌ಗಳ ಇಂಧನವೂ ಒಂದು ಚಿಂತೆಯ ವಿಚಾರವೇ ಹೌದು.

ಇಷ್ಟಾದರೂ, ಅಣು ವಿದ್ಯುತ್ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. ಈ ಘಟಕಗಳು 80ರಿಂದ 92% ಸಾಮರ್ಥ್ಯದಲ್ಲಿ ಕಾರ್ಯಾಚರಿಸುತ್ತವೆ. ಅಂದರೆ, ಅವು ಬಹುತೇಕ ಸಮಯದಲ್ಲಿ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುವುದರಿಂದ, ಸೂರ್ಯನ ಬೆಳಕು ಮತ್ತು ಗಾಳಿಯ ಮೇಲೆ ಅವಲಂಬಿಸಿರುವ ಸೌರಶಕ್ತಿ ಮತ್ತು ವಾಯುಶಕ್ತಿಯಿಂದ ಇವು ಉತ್ತಮವಾಗಿವೆ. ಹಣ ಮತ್ತು ಸಮಯವನ್ನು ಉಳಿತಾಯ ಮಾಡುವ ಸಲುವಾಗಿ, ಭಾರತ ಈಗ ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್‌ಗಳತ್ತ (ಎಸ್ಎಂಆರ್) ಗಮನ ಹರಿಸುತ್ತಿದ್ದು, ಇವು 200ರಿಂದ 300 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿವೆ. ಇವನ್ನು ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ನಿರ್ಮಿಸಲು ಸಾಧ್ಯವಾಗುತ್ತದೆ.

ಶುದ್ಧ ಗಾಳಿ ಮತ್ತು ಹೆಚ್ಚಿನ ಇಂಧನ ಭದ್ರತೆಗಾಗಿ ಸಂಪೂರ್ಣ ಜಗತ್ತು ಇಂದು ಅಣು ವಿದ್ಯುತ್ತಿನತ್ತ ಮುಖ ಮಾಡಿದೆ. ಭಾರತದ ಕನಸೂ ದಿಟ್ಟ ಮತ್ತು ಸ್ಪಷ್ಟವಾಗಿದೆ. ಆದರೆ, ಭಾರತದ ಕನಸುಗಳು 2047ರಲ್ಲಿ ನನಸಾಗುತ್ತವೆಯೇ ಎನ್ನುವುದು ಮಾತ್ರ ಒಂದೊಂದೇ ರಿಯಾಕ್ಟರ್‌ಗಳ ರೂಪದಲ್ಲಿ ದೊಡ್ಡ ಕನಸುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನದ ಮೇಲೆ ಅವಲಂಬಿಸಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಝೀರೋ ಟ್ರಾಫಿಕ್ ಎಫೆಕ್ಟ್: ಕಾರಿನಲ್ಲಿ ಸಿಲುಕಿದ್ದ ಗರ್ಭಿಣಿ ಮಹಿಳೆ, ರಸ್ತೆಯಲ್ಲೇ ಪತಿ ಪ್ರತಿಭಟನೆ, ತನಿಖೆಗೆ ಆದೇಶ

ಕಲಬುರಗಿ: ಎಮ್ಮೆ ಕರೆತರಲು ಹೋಗಿದ್ದ ತಂದೆ ನೀರಿನಲ್ಲಿ ಮುಳುಗಿ ಸಾವು, ಅಸಹಾಯಕನಾಗಿ ವಿಡಿಯೋ ಮಾಡುತ್ತ ನಿಂತ ಮಗ!

ಅಹಮದಾಬಾದ್‌ನಲ್ಲಿ IPL ಫೈನಲ್: RCBಗೆ ಮಾತ್ರವಲ್ಲ, ಬೆಂಗಳೂರು, ರಾಜ್ಯದ ಯುವ ಜನತೆಗೆ ಮಾಡಿದ ಅನ್ಯಾಯ; ಡಿ.ಕೆ ಶಿವಕುಮಾರ್; Video

'ಪಿಕ್ ಪಾಕೆಟ್' ಬಗ್ಗೆ ಎಚ್ಚರದಿಂದಿರಿ; CBSE ಒಳಗೆ ಕುಳಿತಿದ್ದಾರೆ: ರಾಹುಲ್ ಗಾಂಧಿ ಲೇವಡಿ

IPL 2026 Final: ನರೇಂದ್ರ ಮೋದಿ ಮೈದಾನದಲ್ಲಿ ಹೈಡ್ರಾಮಾ, Virat Kohli-Shubman Gill ಜಟಾಪಟಿ, ಆಗಿದ್ದೇನು?

SCROLL FOR NEXT