ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿರುವ ಜಿಂಬಾಬ್ವೆಯ ಹೀತ್ ಸ್ಟ್ರೀಕ್ ಹುದ್ದೆ ತೊರೆಯುವುದು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲು ಮಂಡಳಿ ಮುಂದಾಗಿದೆ.
ಈ ಸಂಬಂಧ ಹಲವು ಖ್ಯಾತನಾಮ ಬೌಲರ್ ಗಳ ಪಟ್ಟಿಯೊಂದನ್ನು ಸಿದ್ದಪಡಿಸಿದೆ. ಇದರಲ್ಲಿ ಟೀಂ ಇಂಡಿಯಾದ ಮಾಜಿ ವೇಗಿ ಕರ್ನಾಟಕದ ವೆಂಕಟೇಶ್ ಪ್ರಸಾದ್ ಹೆಸರೂ ಇದೆ. ಇನ್ನೂ ಶ್ರೀಲಂಕಾದ ಚಂಪಕ ರಮನನಾಯಕೆ, ಚಮಿಂದಾ ವಾಸ್, ಪಾಕಿಸ್ತಾನದ ಆಕಿಬ್ ಜಾವೇದ್ ಸೇರಿದಂತೆ ಇನ್ನಿತರೆ ಕೆಲ ಪ್ರಮುಖ ಆಟಗಾರರು ಸೇರಿದ್ದಾರೆ.
ಸದ್ಯ ಬಾಂಗ್ಲಾದ ಬೌಲಿಂಗ್ ಕೋಚ್ ಆಗಿರುವ ಹೀತ್ ಸ್ಟ್ರೀಕ್ ಅವರು ಭಾರತದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಕೋಚ್ ಆಗಲು ಆಸಕ್ತಿ ತೋರಿದ್ದು, ಅವರನ್ನು ಆಯ್ಕೆ ಮಾಡಲು ಅಕಾಡೆಮಿಯ ಮುಖ್ಯಸ್ಥ ನಿರಂಜನ್ ಶಾ ಕೂಡಾ ಒಲವು ಹೊಂದಿದ್ದಾರೆ.