ಕ್ರಿಕೆಟ್

ಏಕದಿನ ಸರಣಿಗೆ ಭಾರತಕ್ಕೆ ತೆರಳದಂತೆ ಆಟಗಾರರಿಗೆ ಲಂಕಾ ಕ್ರೀಡಾ ಸಚಿವರ ನಿರ್ಬಂಧ

Srinivas Rao BV
ಏಕದಿನ ಸರಣಿ ಪಂದ್ಯಕ್ಕಾಗಿ ಭಾರತಕ್ಕೆ ಆಗಮಿಸುತ್ತಿದ್ದ 9 ಕ್ರಿಕೆಟಿಗರನ್ನು ಶ್ರೀಲಂಕಾದ ಕ್ರೀಡಾ ಸಚಿವರು ತಡೆದಿದ್ದಾರೆ. 
ತಂಡದ ಆಯ್ಕೆಯ ವಿಷಯವಾಗಿ ಕ್ರೀಡಾ ಸಚಿವ ದಯಸಿರಿ ಜಯಶೇಖರ್ ಅಸಮಾಧಾನಗೊಂಡಿದ್ದು 9 ಕ್ರಿಕೆಟಿಗರನ್ನು ಭಾರತಕ್ಕೆ ತೆರಳದಂತೆ ತಡೆದಿದ್ದಾರೆ. ಡಿ.04 ರಂದು ತಡರಾತ್ರಿ ಕೊಲಂಬೋ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ 9 ಕ್ರಿಕೆಟಿಗರನ್ನು ಮಾರ್ಗಮಧ್ಯದಲ್ಲೇ ವಾಪಸ್ ಬರುವಂತೆ ಸೂಚಿಸಲಾಗಿದೆ ಎಂದು ತಂಡದ ಓರ್ವ ಸದಸ್ಯ ತಿಳಿಸಿದ್ದಾರೆ. ಉಳಿದ ಕ್ರಿಕೆಟಿಗರು ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ. 
ಶ್ರೀಲಂಕಾ ಕ್ರಿಕೆಟ್ ಅವ್ಯವಸ್ಥೆ ಎದುರಿಸುತ್ತಿದ್ದು, ರಾಷ್ಟ್ರೀಯ ತಂಡ ಈಗಾಗಲೇ 21 ಏಕದಿನ ಪಂದ್ಯಗಳನ್ನು ಸೋತಿದ್ದು ಕೇವಲ 4 ರಲ್ಲಿಗೆದ್ದಿದೆ, ತಂಡದ ಆಯ್ಕೆಗೆ ಅಧಿಕೃತವಾಗಿ ತಾವು ಒಪ್ಪಿಗೆ ಸೂಚಿಸುವ ಮುನ್ನವೇ ಕ್ರಿಕೆಟಿಗರು ಭಾರತಕ್ಕೆ ಹೊರಟಿದ್ದರಿಂದ ಆಕ್ರೋಶಗೊಂಡಿರುವ ಕ್ರೀಡಾ ಸಚಿವರು ಕ್ರಿಕೆಟಿಗರನ್ನು ವಾಪಸ್ ಕರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 
ಶ್ರೀಲಂಕಾದಲ್ಲಿ 1973 ರಲ್ಲಿ ಜಾರಿಯಾದ ಕಾನೂನಿನ ಪ್ರಕಾರ ಕ್ರೀಡಾ ಸಚಿವರಿಗೆ ರಾಷ್ಟ್ರೀಯ ತಂಡವನ್ನು ಬದಲಾವಣೆ ಮಾಡುವ ಅಧಿಕಾರವಿದೆ. ಮೂಲಗಳ ಪ್ರಕಾರ ಭಾರತಕ್ಕೆ ಆಗಮಿಸಬೇಕಿರುವ ಕ್ರಿಕೆಟ್ ತಂಡದಲ್ಲಿ ಜಯಶೇಖರ್ ಕೆಲವು ಬದಲಾವಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. 
SCROLL FOR NEXT