ಹೈದರಾಬಾದ್: ಶಾಲೆ ಬಿಟ್ಟ ನಂತರ ಸಾಮಾನ್ಯವಾಗಿ ಮಕ್ಕಳು ಕ್ರಿಕೆಟ್ ಆಡಲು ಹೋಗುವಂತೆ ಆತನೂ ಸಹ ಶಾಲೆಯಿಂದ ಬಂತ ತಕ್ಷಣವೇ ಕ್ರಿಕೆಟ್ ಆಡಲು ಹೋಗುತ್ತಿದ್ದ. ತನ್ನ ಹಿರಿಯ ಮಗನಂತೆ ಇವನೂ ಸಹ ಓದಿನಲ್ಲಿ ಮುಂದಿರಬೇಕು ಎಂದು ಇಚ್ಛಿಸುತ್ತಿದ್ದ ತಾಯಿಯ ಕೋಪಕ್ಕೆ ಗುರಿಯಾದ ಘಟನೆಗಳು ಹಲವು. ಹೀಗೆ ತಾಯಿಯ ಕೋಪಕ್ಕೆ ಗುರಿಯಾದ ಹುಡುಗ ಈಗ ಪೋಷಕರ ಕನಸನ್ನು ನನಸು ಮಾಡಿ, ತನ್ನ ಅಣ್ಣ ಐಟಿ ಕ್ಷೇತ್ರದಲ್ಲಿ ಹಲವು ವರ್ಷ ದುಡಿದರೂ ಪಡೆಯಲಾಗದ ಹಣವನ್ನು ಒಮ್ಮೆಲೆ ಪಡೆದಿದ್ದಾನೆ.
ಆತನ ಹೆಸರು ಸಿರಾಜ್. ಫೆ21 ರಂದು ನಡೆದ ಐಪಿಎಲ್-ಚಾಂಪಿಯನ್ಸ್ ನ ಹರಾಜು ಪ್ರಕ್ರಿಯೆಯಲ್ಲಿ ತನ್ನ ತವರು ರಾಜ್ಯ ಆಂಧ್ರಪ್ರದೇಶದ ಸನ್ ರೈಸರ್ಸ್ ಹೈದರಾಬಾದ್ ತಂಡೆಕ್ಕೆ 2.6 ರೂ ಗೆ ಮಾರಾಟವಾದ ಯುವ ಕ್ರಿಕೆಟಿಗ. 3 ವರ್ಷದ ಹಿಂದೆ ಟೆನ್ನಿಸ್ ಬಾಲ್ ನಲ್ಲಿಯೇ ಕ್ರಿಕೆಟ್ ಆಡುತ್ತಿದ್ದ ಸಿರಾಜ್ ಇನ್ನಷ್ಟೇ ಸರಿಯಾದ ಕ್ರಿಕೆಟ್ ಚೆಂಡಿಗೆ ಹೊಂದಿಕೊಳ್ಳಬೇಕಿತ್ತು. ಅಷ್ಟರಲ್ಲೇ ಆತನಿಗೆ 2 ದಿನಗಳ ಕಾಲ ನಡೆಯುವ ಪಂದ್ಯದಲ್ಲಿ ಚಾರ್ಮಿನಾರ್ ಕ್ರಿಕೆಟ್ ಕ್ಲಬ್ ಗೆ ಆಡುವ ಅವಕಾಶ ಒದಗಿ ಬಂದಿತ್ತು. ಆದರೆ ಟೂರ್ನಮೆಂಟ್ ನಲ್ಲಿ ಆಡಲು ಸಿರಾಜ್ ಬಳಿ ಸರಿಯಾದ ಶೂ ಸಹ ಇರಲಿಲ್ಲ. ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಚಾರ್ಮಿನಾರ್ ಕ್ರಿಕೆಟ್ ಕ್ಲಬ್ ನಲ್ಲಿ ಆಡಿದ ನಂತರ ಸಿರಾಜ್ ಹಿಂತಿರುಗಿ ನೋಡಲಿಲ್ಲ.
ರಣಜಿಯಲ್ಲಿ ಆಡಲು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸಿರಾಜ್, 41 ವಿಕೆಟ್ ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 3 ನೇ ಆತಗಾರನಾಗಿ ಗುರುತಿಸಿಕೊಂಡರು. ನಂತರ ಇರಾನಿ ಟ್ರೋಫಿಯಲ್ಲೂ ಆಯ್ಕೆಯಾದ ಸಿರಾಜ್ ಈಗ ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ಪರ ಆಡಲು ಅವಕಾಶ ಪಡೆದಿದ್ದು, ಅಂತಾರಾಷ್ಟ್ರೀಯ ಮಟ್ಟದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
"ಐಪಿಎಲ್ ಹರಾಜಿನಿಂದ ಪಡೆದ ಹಣದಿಂದ ಒಂದಷ್ಟು ಸಾಲ ತೀರಿಸಬೇಕಿದೆ ನಂತರ ಪೋಷಕರಿಗೆ ಮನೆ ಖರೀದಿಸಲು ಹಣ ನೀಡುತ್ತೇನೆ, ಬಹುಶಃ ಇನ್ನು ಮುಂದೆ ನನ್ನ ತಂದೆ ಆಟೋ ರಿಕ್ಷಾ ಚಾಲಕರಾಗಿರುವ ಅಗತ್ಯವಿಲ್ಲ ಎಂದು ಹೇಳುತ್ತಾರೆ ಸಿರಾಜ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos