ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ನೇಮಕಕ್ಕೆ ಸುಪ್ರೀಂ ಕೋರ್ಟ್ ನೇಮಿತ ಆಡಳಿತಾಧಿಕಾರಿಗಳ ಸಮಿತಿ(ಸಿಒಎ) ಶನಿವಾರ ಒಪ್ಪಿಗೆ ನೀಡಿದೆ. ಆದರೆ ಬ್ಯಾಟಿಂಗ್ ಸಲಹೆಗಾರ ರಾಹುಲ್ ದ್ರಾವಿಡ್ ಮತ್ತು ಬೌಲಿಂಗ್ ಸಲಹೆಗಾರ ಜಹೀರ್ ಖಾನ್ ಅವರ ಒಪ್ಪಂದದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ಇಂದು ನಡೆದ ಸಿಒಎ ಸಭೆಯಲ್ಲಿ ಮುಖ್ಯ ಕೋಚ್ ನೇಮಕಕ್ಕೆ ಒಪ್ಪಿಗೆ ನೀಡಲಾಗಿದ್ದು, ದ್ರಾವಿಡ್ ಮತ್ತು ಜಹೀರ್ ಖಾನ್ ಅವರ ಒಪ್ಪಂದದ ಕುರಿತು ರವಿ ಶಾಸ್ತ್ರಿ ಅವರೊಂದಿಗೆ ಚರ್ಚಿಸಿ ಜುಲೈ ಜುಲೈ 22ರೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಬಿಸಿಸಿಐ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಸಿಒಎ ಸದಸ್ಯರಾದ ವಿನೋದ್ ರೈ, ದಿಯಾನ್ ಎದುಲ್ಜಿ ಹಾಗೂ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.
ರವಿ ಶಾಸ್ತ್ರಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡುವುದಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಸಲಹಾ ಸಮಿತಿ ನೀಡಿದ ಎಲ್ಲಾ ಶಿಫಾರಸುಗಳನ್ನು ನಾವು ಪರಿಗಣಿಸಿದ್ದೇವೆ. ಮುಖ್ಯ ಕೋಚ್ ರೊಂದಿಗೆ ಚರ್ಚಿಸಿ ಮುಂದಿನ ನೇಮಕಾತಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಸಭೆಯ ನಂತರ ವಿನೋದ್ ರೈ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.