ರಾಂಚಿ: ರಾಂಚಿಯಲ್ಲಿ ಗುರುವಾರದಿಂದ ಆರಂಭವಾಗಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಗಾಯಗೊಂಡು ಮೈದಾನದಿಂದ ಹೊರಬಿದ್ದಿದ್ದು, ಟೀಂ ಇಂಡಿಯಾ ಆಟಗಾರರಲ್ಲಿ ಆತಂಕ ಸೃಷ್ಟಿಸಿದೆ.
ಇಂದು ಮಧ್ಯಾಹ್ನ ಊಟದ ನಂತರ 40ನೇ ಓವರ್ ನಲ್ಲಿ ಬೌಡರಿ ತಡೆಯಲು ಡೈವ್ ಹೊಡೆದ ವಿರಾಟ್ ಕೊಹ್ಲಿ ಬೌಂಡರಿ ಹಗ್ಗದ ಮೇಲೆ ಉರುಳಿ ಬಿದ್ದು, ಬಲಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ಆದರೂ ಕೊಹ್ಲಿ ಬೌಡರಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭುಜದ ನೋವು ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೊಹ್ಲಿ ಮೈದಾನದಿಂದ ತೆರಳಿದ್ದಾರೆ. ಉಪನಾಯಕ ಅಜಿಂಕ್ಯ ರಹಾನೆ ಈಗ ತಂಡವನ್ನ ಮುನ್ನಡೆಸುತ್ತಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸಮಬಲ ಸಾಧಿಸರುವ ಉಭಯ ತಂಡಗಳು ಈಗ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರಿನಲ್ಲಿ ಟ್ರೋಫಿಗಾಗಿ ತೀವ್ರ ಹಣಾಹಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಗಾಯಗೊಂಡಿರುವುದು ಟೀಂ ಇಂಡಿಯಾಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 333 ರನ್ ಗಳಿಂದ ಹೀನಾಯ ಸೋಲು ಕಂಡಿತ್ತು. ಇದಕ್ಕೆ ಪ್ರತಿಯಾಗಿ ಬೆಂಗಳೂರು ಟೆಸ್ಟ್ ನಲ್ಲಿ ಕೊಹ್ಲಿ ಪಡೆ ಎರಡನೇ ಟೆಸ್ಟ್ ನಲ್ಲಿ 75 ರನ್ ಗಳ ಗೆಲುವಿನೊಂದಿಗೆ ಆಸ್ಟ್ರೇಲಿಯಾಗೆ ತಿರುಗೇಟು ನೀಡಿತ್ತು.