ನವದೆಹಲಿ: ಪದಾರ್ಪಣೆ ಮಾಡಿದ ಮೈದಾನದಲ್ಲಿ ತವರಿನ ಅಭಿಮಾನಗಳ ಮುಂದೆ ವಿದಾಯ ಹೇಳುವುದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ ಎಂದು ಆಶೀಶ್ ನೆಹ್ರಾ ಹೇಳಿದ್ದಾರೆ.
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಜಯಗಳಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಆಶೀಶ್ ನೆಹ್ರಾ ವಿದಾಯ ಹೇಳಿದರು. ಈ ವೇಳೆ ಮಾತನಾಡಿದ ಅವರು, ವಿದಾಯ ಹೇಳಲು ಇದಕ್ಕಿಂತ ದೊಡ್ಡ ವೇದಿಕೆ ಮತ್ತೊಂದಿಲ್ಲ. ಈಗ ನಾನು ಮತ್ತೊಂದಷ್ಟು ದಿನ ಅಥವಾ ವರ್ಷ ಕ್ರಿಕೆಟ್ ಆಡಬಹುದು ಎಂದುಕೊಂಡರೂ ಪ್ರಸ್ತುತ ನನಗೆ ದೊರೆತಿರುವ ಈ ಮಧುರ ಕ್ಷಣ ದೊರೆಯದೇ ಹೋಗಬಹುದು. ಹೀಗಾಗಿ ಇದು ವಿದಾಯ ಹೇಳಲು ಸೂಕ್ತ ಸಂದರ್ಭ ಎಂದು ಭಾವಿಸಿದ್ದೇನೆ. ನನ್ನ ಮನಸ್ಸು ಮತ್ತು ನನ್ನ ಬುದ್ದಿ ಎರಡೂ ವಿದಾಯ ಹೇಳಲು ಇದೇ ಸರಿಯಾದ ಸಮಯ ಎಂದು ಸೂಚಿಸಿತು. ಹೀಗಾಗಿ ವಿದಾಯ ಹೇಳುತ್ತಿದ್ದೇನೆ ಎಂದು ನೆಹ್ರಾ ಹೇಳಿದರು.
ಅಂತೆಯೇ ತಮ್ಮ ವೃತ್ತಿ ಬದುಕನ್ನು ನೆನಪಿಸಿಕೊಂಡ ನೆಹ್ರಾ ಬಹುಶಃ ಭಾರತ ತಂಡದಲ್ಲಿ ಅತೀ ಹೆಚ್ಚು ಕೊನೆಯ ಓವರ್ ಗಳನ್ನು ಎಸೆದ ಆಟಗಾರ ನಾನೊಬ್ಬನೇ ಇರಬೇಕು ಎಂದು ಹೇಳಿದರು. ಈ ಪಂದ್ಯದಲ್ಲೂ ಕೂಡ ವಿರಾಟ್ ಕೊನೆ 3-4 ಓವರ್ ಗಳನ್ನು ನನಗಾಯೇ ಮೀಸಲಿಟ್ಟಿದ್ದರು. ಅದಾಗ್ಯೂ ನಾನೇ ಕೊನೆಯ ಓವರ್ ಅನ್ನು ನಾನೇ ಎಸೆಯುತ್ತೇನೆ ಎಂದು ಕೇಳಿದೆ. ಕಳೆದ 18-19 ವರ್ಷಗಳ ಕ್ರಿಕೆಟ್ ಅನುಭವದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇನೆ. 1997ರಲ್ಲಿ ಇದೇ ಮೈದಾನದಲ್ಲಿ ನಾನು ನನ್ನ ಮೊದಲ ಪಂದ್ಯವನ್ನಾಡಿದ್ದೆ. ಆ ಪಂದ್ಯದ ಬಳಿಕ ಕ್ರಿಕೆಟ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಹೊಸ ಹೊಸ ನಿಯಮಾವಳಿಗಳು ಜಾರಿಯಾಗಿವೆ. ಅಂತೆಯೇ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳನ್ನು ಗಳಿಸಲಾಗುತ್ತಿದೆ. ಪ್ರತೀ 8-10 ವರ್ಷಗಳಿಗೊಮ್ಮೆ ಕ್ರಿಕೆಟ್ ಬದಲಾಗುತ್ತಿದೆ ಎಂದು ಹೇಳಿದರು.
ಅಂತೆಯೇ ತಂಡದ ಕುರಿತು ಮಾತನಾಡಿದ ನೆಹ್ರಾ, ಪ್ರಸ್ತುತ ಇರುವ ಭಾರತ ತಂಡ ಅತ್ಯುತ್ತಮ ತಂಡವಾಗಿದ್ದು, ಮುಂದಿನ 7-8 ವರ್ಷಗಳ ಭಾರತೀಯ ಕ್ರಿಕೆಟ್ ಅತ್ಯುತ್ತಮರ ಕೈಯಲ್ಲಿರುತ್ತದೆ. ಪ್ರತೀ 8-10 ವರ್ಷಕ್ಕೆ ಜನರೇಷನ್ ಬದಲಾಗುತ್ತಿದ್ದು, ಎಲ್ಲ ಜನರೇಷನ್ ನ ಆಟಗಾರರೊಂದಿಗೆ ನಾನು ಆಡಿದ್ದೇನೆ, ಪ್ರಸ್ತುತ ನಾನು ಯಾರ ಹೆಸರನ್ನೂ ಉದ್ದೇಶಪೂರ್ವಕವಾಗಿ ಹೇಳಲಾಗುತ್ತಿಲ್ಲ. ಆದರೆ ಗಂಗೂಲಿ, ಸಚಿನ್, ಧೋನಿ ರಂತಹ ಆಟಗಾರರೊಂದಿಗೆ ಆಡಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಒಟ್ಟಾರೆ ನನ್ನ ಕ್ರಿಕೆಟ್ ಜರ್ನಿ ಅತ್ಯುತ್ತಮವಾಗಿತ್ತು. ಪ್ರದರ್ಶನಗಳಿಗಿಂತ ಅತ್ಯುತ್ತಮ ನೆನಪಿನ ಬುತ್ತಿಯನ್ನು ಹೊತ್ತೊಯ್ಯುತ್ತಿದ್ದೇನೆ. ಸೆಹ್ವಾಗ್ ಹಲವು ಅದ್ಬುತ ಆಟಗಳನ್ನು ಆಡಿರಬಹುದು. ಆದರೆ ಇಂದಿಗೂ ಅವರನ್ನು ಮುಲ್ತಾನ್ ಕಾ ಸುಲ್ತಾನ್ ಎಂದು ಕರೆಯುತ್ತಾರೆ.
2004ರಲ್ಲಿ ಕರಾಚಿಯ ಮುಲ್ತಾನ್ ಕ್ರಿಕೆಟ್ ಮೈದಾನದಲ್ಲಿ ಸೆಹ್ವಾಗ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಂತೆಯೇ ನನ್ನನ್ನು ಜನರು 2011ರ ವಿಶ್ವಕಪ್ ಪಂದ್ಯದಿಂದ ನೆನಪಿಸಿಕೊಳ್ಳುತ್ತಾರೆ. ಅಂದಿನ ಪಂದ್ಯದಲ್ಲಿ ನಾನು ಕೊನೆಯ ಓವರ್ ಎಸೆದಿದ್ದೆ. ಆ ಪಂದ್ಯವನ್ನು ನಾವು ಸೋತಿದ್ದೆವು. ಈ ಪಂದ್ಯದಿಂದಲೇ ಇನ್ನು ಜನರು ನನ್ನನ್ನು ಗುರುತಿಸುತ್ತಾರೆ. ನಾನು ಇನ್ನೊಂದಷ್ಟು ದಿನ ಕ್ರಿಕೆಟ್ ಆಡಬಹುದು. ಆದರೆ ತವರಿನಲ್ಲಿ ವಿದಾಯದ ಪಂದ್ಯವನ್ನಾಡುವ ಸದಾವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ನಿವೃತ್ತಿ ಪಡೆದರೂ ಅಥವಾ ಇಲ್ಲದಿದ್ದರೂ ನಾನು ಸಂತೋಷವಾಗಿರುತ್ತೇನೆ ಎಂದು ನೆಹ್ರಾ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos