ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನೆಹ್ರಾ
ನವದೆಹಲಿ: ಹಿರಿಯ ಆಟಗಾರ ಆಶೀಶ್ ನೆಹ್ರಾ ಅವರ ವಿದಾಯದ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತ ತಂಡ ಭರ್ಜರಿ ಜಯ ದಾಖಲಿಸುವ ಮೂಲಕ ಗೆಲುವಿನ ಉಡುಗೊರೆ ನೀಡಿದೆ.
ದೆಹಲಿ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ 53 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಭಾರತ ನೀಡಿದ್ದ 203 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಕಿವೀಸ್ ಪಡೆ, 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಭಾರತದ ಎದುರು 53 ರನ್ ಗಳ ಪರಾಭವಗೊಂಡಿತು.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪಾರಮ್ಯ ಸಾಧಿಸಿದ ಭಾರತ ತಂಡ ಇಂದು ಅರ್ಹವಾಗಿಯೇ ಜಯ ಸಾಧಿಸಿತು. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಂಕಾದಂತೆ ಕಂಡುಬಂದ ನ್ಯೂಜಿಲೆಂಡ್ ತಂಡ ಯಾವುದೇ ಹಂತದಲ್ಲೂ ಟೀಂ ಇಂಡಿಯಾಗೆ ತಿರುಗಿ ಬೀಳುವ ಪ್ರಯತ್ನ ಮಾಡಲಿಲ್ಲ. ಕಿವೀಸ್ ಪರ ಲಾಥಮ್ ಗಳಿಸಿದ 39 ರನ್ ಗಳೇ ವೈಯುಕ್ತಿಕ ಗರಿಷ್ಠ ರನ್ ಆಗಿತ್ತು ಎಂದರೆ ಅವರ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಎನ್ನುವುದನ್ನು ಊಹಿಸಬೇಹುದು. ಆರಂಭಿಕ ಆಟಗಾರರೂ ಸೇರಿದಂತೆ ತಂಡದ ಬರೊಬ್ಬರಿ 6 ಮಂದಿ ಆಟಗಾರರು ಒಂದಂಕಿಗೆ ಔಟ್ ಆಗಿದ್ದು ತಂಡಕ್ಕೆ ಮುಳುವಾಯಿತು.ನಾಯಕ ಕೇನ್ ವಿಲಿಯಮ್ಸನ್ ಹಾಗೂ ಲಾಥಮ್ ಕೊಂಚ ಪ್ರತಿರೋಧ ಒಡ್ಡಿದರಾದರೂ ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ.
ಬಳಿಕ ಇನ್ನಿಂಗ್ಸ್ ನ ಕೊನೆಯಲ್ಲಿ ಸ್ಯಾಂಥನರ್ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಡುವ ಪ್ರಯತ್ನ ಮಾಡಿದರು. ಆದರೆ ಅವರ ಪ್ರಯತ್ನ ತಂಡಕ್ಕೆ ಗೆಲುವು ತಂದು ಕೊಡಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಭಾರತ ತಂಡ 3 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಸಾಧಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos