ಮೊಹಾಲಿ: ಮಹೇಂದ್ರ ಸಿಂಗ್ ಧೋನಿ, ಈ ಹೆಸರು ಕೇಳಿದಾಕ್ಷಣ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಭಾರತ ತಂಡದ ಅದೇಷ್ಟೋ ಅವಿಸ್ಮರಣೀಯ ಜಯಗಳ ನೆನಪಾಗುತ್ತದೆ. ಸಾದಾಕಾಲ ತಂಡದ ಗೆಲುವಿಗಾಗಿ ಶ್ರಮಿಸುವ ಧೋನಿ ತಮ್ಮ ವೈಯುಕ್ತಿಕ ಸಂಗತಿಗಳನ್ನು ದೂರವಿಟ್ಟು ತಂಡಕ್ಕಾಗಿ ಆಡುತ್ತಾರೆ.
ಇದೇ ಕಾರಣಕ್ಕಾಗಿ ಧೋನಿ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರ ಸಾಲಿನಲ್ಲಿ ನಿಲ್ಲುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ನಿನ್ನೆ ಮೊಹಾಲಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತಿದೆಯಾದರೂ, ನಾಯಕ ಮಹೇಂದ್ರ ಸಿಂಗ್ ಧೋನಿ ಮಾತ್ರ ತಮ್ಮ ವೃತ್ತಿಪರ ಮನೋಭಾವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿನ್ನೆ ನಡೆದ ಪಂದ್ಯದ ವೇಳೆ ಧೋನಿ ತೀವ್ರ ಬೆನ್ನು ನೋವಿಗೆ ತುತ್ತಾಗಿದ್ದರು. ಪಂದ್ಯದ ನಡುವೆಯೇ ಆಗಾಗ ತಂಡ ಫಿಸಿಯೋ ಬಂದು ಮೈದಾನದಲ್ಲೇ ಧೋನಿಗೆ ಚಿಕಿತ್ಸೆ ನೀಡಿ ತೆರಳುತ್ತಿದ್ದರು. ತೀವ್ರ ತರವಾದ ಬೆನ್ನನೋವಿನ ನಡುವೆಯೂ ಧೋನಿ ಚೆನ್ನೈ ತಂಡದ ಪರ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಸೋಲಿನಿಂದ ಪಾರು ಮಾಡಲು ಪ್ರಯತ್ನಿಸಿದರು. ಅಂತಿಮ ಎಸೆತದವರೆಗೂ ಧೋನಿ ಕ್ರೀಸ್ ನಲ್ಲಿದ್ದರಾದರೂ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಧೋನಿ ಕೇವಲ 44 ಎಸೆತಗಳಲ್ಲಿ ಅಜೇಯ 79 ರನ್ ಸಿಡಿಸಿದ್ದರು. ಆದರೆ ಆ ಪಂದ್ಯವನ್ನು ಚೆನ್ನೈ ತಂಡ ಕೇವಲ 4 ರನ್ ಗಳ ಅಂತರದಲ್ಲಿ ವಿರೋಚಿತವಾಗಿ ಸೋತಿತು.
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಧೋನಿ, ಬೆನ್ನು ನೋವು ತೀವ್ರತರವಾಗಿತ್ತು ನಿಜ. ಆದರೆ ಆ ದೇವರು ನನಗೆ ಅದನ್ನು ತಡೆದುಕೊಳ್ಳುವ ಶಕ್ತಿ ನೀಡಿದ್ದ. ಬೆನ್ನು ನೋವಿದ್ದರೆ ಏನು ಕೈಯಲ್ಲಿ ಶಕ್ತಿ ಇತ್ತಲ್ಲ ಎಂದು ತಮ್ಮ ಅದ್ಬುತ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಧೋನಿ ಸಂತಸದ ಮಾತನಾಡಿದ್ದಾರೆ. ಅಂತೆಯೇ ಬೆನ್ನು ನೋವಿನ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಅದೇನು ಅಂತಹ ಗಂಭೀರ ನೋವೇನೂ ಅಲ್ಲ. ನೀವು ನಿಮ್ಮ ನೋವನ್ನು ಗಂಭೀರವಾಗಿ ಪರಿಗಣಿಸಿದರೆ ಅದು ಇನ್ನೂ ದೊಡ್ಡದಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos