ಮೊಹಾಲಿ: ಮೊಹಾಲಿಯಲ್ಲಿ ಗುರುವಾರ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಟಿ20 ಪಂದ್ಯದಲ್ಲಿ ಪಂಜಾಬ್ ತಂಡ 15 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಆರಂಭಿಕ ಆಟಗಾರ ಕ್ರಿಸ್ ಗೇಯ್ಲ್ ಸಿಡಿಸಿದ ಅಬ್ಬರದ ಶತಕದ ನೆರವಿನಿಂದ ಪಂಜಾಬ್ ತಂಡ ಹೈದರಾಬಾದ್ ಗೆ ಗೆಲ್ಲಲು 194 ರನ್ ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಹತ್ತಿದೆ ಹೈದರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಪಂಜಾಬ್ ಎದುರು 15 ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಕಳೆದ ಮೂರು ಪಂದ್ಯಗಳನ್ನು ಗೆದ್ದು ಹ್ಯಾಟ್ರಿಕ್ ಜಯ ಕಂಡಿದ್ದ ಹೈದರಾಬಾದ್ ಗೆ ಇದು ಮೊದಲ ಸೋಲಾಗಿದೆ.
ಮೊದಲ ಓವರ್ ನಲ್ಲಿಯೇ ಗಾಯಗೊಂಡ ಶಿಖರ್ ಧವನ್ ಕ್ರೀಸ್ ತೊರೆದಿದ್ದು, ಸನ್ ರೈಸರ್ಸ್ ಗೆ ಹಿನ್ನಡೆಯುಂಟು ಮಾಡಿತು. ಸಾಹ (06) ಬೇಗನೆ ಔಟಾದರು, ಪವರ್ ಪ್ಲೇ ಮುಗಿಯುವ ಮೊದಲೇ ಯೂಸುಫ್ ಪಠಾಣ್ (19) ಸಹ ಔಟಾದರು. 3 ಪ್ರಮುಖ ಬ್ಯಾಟ್ಸ್ ಮನ್ ಗಳನ್ನು ಕಳೆದುಕೊಂಡ ಸನ್ ರೈಸರ್ಸ್ ಭಾರೀ ಒತ್ತಡಕ್ಕೆ ಸಿಲುಕಿತು.
4ನೇ ವಿಕೆಟ್ ಗೆ ಕ್ರೀಸ್ ಹಂಚಿಕೊಂಡ ಕೇನ್ ವಿಲಿಯಮ್ಸನ್ ಹಾಗೂ ಮನೀಶ್ ನಡುವೆ ಉತ್ತಮ ಜೊತೆಯಾಟ ಮೂಡಿಬಂದರೂ, ತಂಡ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದ್ದು ಮುಳುವಾಯಿತು. 17ನೇ ಓವರ್ ವರೆಗೂ ತಂಡ ಕೇವಲ 2 ಸಿಕ್ಸರ್ ಅಷ್ಟೇ ಬಾರಿಸಿತು. ವಿಲಿಯಮ್ಸನ್ (54) ರನ್ ಗಳಿಗೆ ಓಟಾದರೆ, ಪಾಂಡೆ (54) ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡಕ್ಕೆ ಸ್ಫೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ ಬೆನ್ನೆಲುಬಾಗಿ ನಿಂತರು. ತಂಡ ಗಳಿಸಿದ 193 ರನ್ ಗಳ ಪೈಕಿ ಗೇಯ್ಲ್ ಒಬ್ಬರೇ 104 ರನ್ ಪೇರಿಸಿದ್ದರು. ಉಳಿದಂತೆ ಕರುಣ್ ನಾಯರ್ 31 ರನ್ ಸೇರಿಸಿ ತಂಡದ ಮೊತ್ತ 190ರ ಗಡಿ ದಾಟುವಂತೆ ನೋಡಿಕೊಂಡರು.