ಬಾಂಗ್ಲಾದೇಶ ವಿರುದ್ಧದ ನಿಡಾಹಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮ್ಮ ವೈಫಲ್ಯದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾದ ಆಲ್ರೌಂಡರ್ ವಿಜಯ್ ಶಂಕರ್ ಅಂದಿನ ಅಸಹನೀಯ ದಿನದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ.
ಪಂದ್ಯದ ಕೊನೆಯ ಎಸೆತವನ್ನು ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಸಿಕ್ಸರ್ ಬಾರಿಸಿದ್ದು ಸರಣಿ ಗೆಲ್ಲಲು ಸಾಧ್ಯವಾಯಿತು. ಆದರೆ ಈ ಪಂದ್ಯದಲ್ಲಿ 19 ಎಸೆತಗಳಲ್ಲಿ 17 ರನ್ ಗಳಿಸಿ ಪಂದ್ಯದ ಗೆಲುವಿನ ಗತಿ ಬದಲಿಸಿದ್ದ ವಿಜಯ್ ಶಂಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯಾಗಿತ್ತು.
ಪಂದ್ಯದ 18ನೇ ಓವರ್ ನ ಮೊದಲ ನಾಲ್ಕು ಎಸೆತಗಳಲ್ಲಿ ವಿಜಯ್ ಶಂಕರ್ ಶೂನ್ಯ ಸಂಪಾದಿಸಿದ್ದರು. ಐದನೇ ಎಸೆತ ಲೇಗ್ ಬೈಸ್ ನಿಂದಾಗಿ ಒಂದು ರನ್ ಸಿಕ್ಕಿತ್ತು. ನಂತರ ಬ್ಯಾಟ್ ಬೀಸಿದ್ದ ಮನೀಶ್ ಪಾಂಡೆ ಭರ್ಜರಿ ಹೊಡೆತ ಬಾರಿಸಲು ಹೋಗಿ ಔಟ್ ಆಗಿದ್ದರು. ಈ ಓವರ್ ನಲ್ಲಿ 1 ರನ್ ಮಾತ್ರ ಸಿಕ್ಕಿತ್ತು ಇದು ಪಂದ್ಯದ ಗತಿಯನ್ನೇ ಬದಲಿಸಿತ್ತು.
ಆದರೆ ನಂತರ ಬಂದ ದಿನೇಶ್ ಕಾರ್ತಿಕ್ 19ನೇ ಓವರ್ ನಲ್ಲಿ 22 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ಹಾದಿಗೆ ತಂದರು. ನಂತರ 6 ಎಸೆತಗಳಲ್ಲಿ 12 ರನ್ ಬೇಕಾಗಿದ್ದಾಗ ದಿನೇಶ್ ಕಾರ್ತಿಕ್ ಕೊನೆಯ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಹೀರೋ ಆದರು. ಆದರೆ ಈ ಪಂದ್ಯ ವಿಜಯ್ ಶಂಕರ್ ಖಳನಾಯಕನ ಪಟ್ಟ ತಂದುಕೊಟ್ಟಿತು.
ಈ ಬಗ್ಗೆ ಮಾತನಾಡಿರುವ ವಿಜಯ್ ಶಂಕರ್ ನನ್ನ ಪೋಷಕರು ಹಾಗೂ ಆಪ್ತರು ಇದಕ್ಕೆಲ್ಲಾ ಧೃತಿ ಕೆಡದಂತೆ ಹೇಳಿದರು. ಇದರ ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಸಹ ಟ್ವೀಟ್ ಮಾಡುವ ಮೂಲಕ ಕೆಲವರು ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ. ನಾನು ಮುಂದುವರಿಯಬೇಕಾದರೆ ಇಂತಹ ಸಹಾನುಭೂತಿ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.
ಇದು ಕೇವಲ ಅರ್ಧ ದಿನದಲ್ಲಿ ನಡೆದ ಘಟನೆ ಆದರೆ ಇದನ್ನು ಮರೆಯಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಆದರೂ ನಾನು ಮುಂದುವರಿಯಬೇಕು ಎಂದು ನನಗೆ ತಿಳಿದಿದೆ. ಸರಣಿಯ ಫೈನಲ್ ಪಂದ್ಯದವರೆಗೂ ನನಗೆ ಈ ಪಂದ್ಯಾವಳಿ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos