ಬೆಂಗಳೂರು: ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ದದ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಪಯಣ ಮುಕ್ತಾಯವಾಗಿತ್ತು ಎಂದೇ ಭಾವಿಸಲಾಗಿದೆ. ಆದರೆ ಆರ್ ಸಿಬಿ ಅಭಿಮಾನಿಯೊಬ್ಬ ತಂಡದ ಪ್ಲೇ ಆಫ್ ಕನಸು ಛಿದ್ರವಾಗಿಲ್ಲ, ಇನ್ನೂ ಕೊಹ್ಲಿ ಪಡೆಗೆ ಅವಕಾಶವಿದೆ ಎಂದು ಲೆಕ್ಕಾಚಾರದ ಸಹಿತ ವಿವರಿಸಿದ್ದಾನೆ.
ಹೌದು...ಶ್ರೀ ಹರಿ ರಮಣ್ ಎಂಬ ಟ್ವಿಟರ್ ಖಾತೆದಾರ ಆರ್ ಸಿಬಿಯ ಬಾಕಿ ಉಳಿದಿರುವ ಪಂದ್ಯಗಳ ಮತ್ತು ಇತರೆ ತಂಡಗಳ ಬಾಕಿ ಪಂದ್ಯಗಳ ಕುರಿತು ಸುಧೀರ್ಘ ಲೆಕ್ಕಾಚಾರ ಮಾಡಿದ್ದು, ಈ ಪೈಕಿ ಆರ್ ಸಿಬಿ ತಂಡ ಯಾವುದೇ ತಂಡಗಳ ಸಹಾಯ ಅಥವಾ ನೆಟ್ ರನ್ ರೇಟ್ ನೆರವಿಲ್ಲದೆ ಪ್ಲೇ ಆಫ್ ಗೆ ಹೋಗಬಹುದು. ಆದರ ಬಾಕಿ ಉಳಿದಿರುವ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕು.. ಒಂದು ವೇಳೆ ನಾಲ್ಕು ಪಂದ್ಯಗಳ ಪೈಕಿ ಒಂದನ್ನು ಸೋತರೂ ಕೂಡ ಆರ್ ಸಿಬಿಗೆ ಅವಕಾಶವಿದ್ದು, ಆಗ ತಂಡಕ್ಕೆ ಮತ್ತೆ ನೆಟ್ ರನ್ ರೇಟ್ ನ ನೆರವು ಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾನೆ.
ಜೊತೆಗೆ ಆರ್ ಸಿಬಿ ರಾಜಸ್ಥಾನ ರಾಯಲ್ಸ್ ತಂಡದೊಂದಿಗಿನ ಪಂದ್ಯವನ್ನು ಗೆಲ್ಲಲೇ ಬೇಕಿದ್ದು, ಆರ್ ಸಿಬಿ ಹೊರತು ಪಡಿಸಿ ಉಳಿದ ಎಲ್ಲ ತಂಡಗಳ ವಿರುದ್ಧ ಪಂದ್ಯಗಳನ್ನು ರಾಜಸ್ಥಾನ ಗೆದ್ದರೆ ಅದರಿಂದ ಆರ್ ಸಿಬಿ ಪ್ಲೇ ಆಫ್ ಲೆಕ್ಕಾಚಾರಕ್ಕೆ ತೊಂದರೆ ಇಲ್ಲ ಎಂದೂ ಟ್ವೀಟ್ ಮಾಡಲಾಗಿದೆ.
ಒಟ್ಟಾರೆ ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳಿಗೆ ಆರ್ ಸಿಬಿ ತಂಡ ಸತತ ನಿರಾಸೆ ಮೂಡಿಸಿದ್ದರೂ ತಂಡದ ಮೇಲಿನ ನಂಬಿಕೆ ಬಿಡದ ಕೊಹ್ಲಿ ಪಡೆಯ ಕಟ್ಟಾ ಅಭಿಮಾನಿಗಳು ಇನ್ನೂ ಭರವಸೆ ಕಳೆದುಕೊಂಡಿಲ್ಲ. ಈಗಲೂ ಅವರು ಈ ಸಲ ಕಪ್ ನಮ್ದೇ ಎಂಬ ಘೋಷಣೆಗಳನ್ನು ಮೊಳಗಿಸುತ್ತಲೇ ಇದ್ದಾರೆ.