ನವದೆಹಲಿ: ಸ್ಲೆಡ್ಜಿಂಗ್ ಮೂಲಕ ಎದುರಾಳಿ ತಂಡದ ಆಟಗಾರರ ಮನಸ್ಥೈರ್ಯವನ್ನು ಕುಗ್ಗಿಸುವ ಕುತಂತ್ರ ಮನಸ್ಥಿತಿ ಹೊಂದಿರುವ ಆಸ್ಟ್ರೇಲಿಯಾ ಇದೀಗ ಟೀಂ ಇಂಡಿಯಾ ವಿರುದ್ಧದ ಸರಣಿಗೂ ಮುನ್ನವೇ ಟಾಂಗ್ ನೀಡಲು ಶುರು ಮಾಡಿದ್ದಾರೆ.
ಆಸೀಸ್ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಅದಾಗಲೇ ಆಸ್ಟ್ರೇಲಿಯಾಗೆ ತೆರಳಿದ್ದು ಭರ್ಜರಿ ತಾಲೀಮಿನಲ್ಲಿ ತೊಡಗಿದ್ದಾರೆ. ಇನ್ನು ಮೈದಾನದಲ್ಲಿ ಸಂಯಮ ಕಳೆದುಕೊಳ್ಳದಂತೆ ಬಿಸಿಸಿಐ ತಂಡದ ನಾಯಕ ವಿರಾಟ್ ಕೊಹ್ಲಿಗೆ ಸೂಚಿಸಿದೆ.
ಇನ್ನು ತಾವು ಆಸ್ಟ್ರೇಲಿಯಾ ಪ್ರವಾಸಲ್ಲಿ ಸಂಯಮದಿಂದ ವರ್ತಿಸುವುದಾಗಿ ಹೇಳಿಕೆ ನೀಡಿದ್ದ ವಿರಾಟ್ ಕೊಹ್ಲಿ ಆಟದ ಮೇಲಷ್ಟೇ ನನ್ನ ಗಮನ ಎಂಬುದಾಗಿ ಹೇಳಿದ್ದರು. ಕೊಹ್ಲಿಯ ಈ ಹೇಳಿಕೆಯನ್ನೇ ಅಣಕಿಸಿರುವ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಒಂದು ವೇಳೆ ಕೊಹ್ಲಿ ಮೈದಾನದಲ್ಲಿ ಯಾವುದೇ ರೀತಿಯಲ್ಲೂ ಉದ್ವೇಗಕ್ಕೆ ಒಳಗಾಗದೆ ಸಂಯಮದಿಂದ ವರ್ತಿಸಿದರೆ ಅದು ಅತ್ಯಂತ ದೊಡ್ಡ ಅಚ್ಚರಿ ಎಂದು ಹೇಳಿ ಕೊಹ್ಲಿ ಕಾಲೆಳೆದಿದ್ದಾರೆ.
ನವೆಂಬರ್ 21ರಂದು ಬ್ರಿಸ್ಬೇನ್ ನಲ್ಲಿ ನಡೆಯಲಿರುವ ಟಿ20 ಪಂದ್ಯದ ಮೂಲಕ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ. ನಂತರ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಗಳು ನಡೆಯಲಿವೆ.