ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಒಡಿಐ ನಾಯಕಿ ಮಿಥಾಲಿ ರಾಜ್, ಸಿಒಎ ಹಾಗೂ ಕೋಚ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಅಧಿಕಾರದಲ್ಲಿರುವ ಕೆಲವರು ನನ್ನನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮಿಥಾಲಿ ರಾಜ್ ಆರೋಪಿಸಿದ್ದು, ಸಿಒಎ ಡಯಾನಾ ಎಡಲ್ಜಿ ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದರೆ ಕೋಚ್ ರಮೇಶ್ ಪೋವಾರ್ ನನಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಟಿ20 ಸೆಮಿಫೈನಲ್ಸ್ ಪಂದ್ಯದಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿರುವ ಮಿಥಾಲಿ ರಾಜ್, ತಮ್ಮನ್ನು ಪಂದ್ಯದಿಂದ ಹೊರಗಿಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದ ಡಯಾನಾ ಎಡಲ್ಜಿ ಪಕ್ಷಪಾತಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನನ್ನ ವಿರುದ್ಧ ಡಯಾನ ಅಧಿಕಾರ ಚಲಾವಣೆ ಮಾಡಿದ್ದಾರೆ ಎಂದೂ ಆರೋಪಿಸಿದ್ದಾರೆ.
ಈ ಕುರಿತು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ಆಪರೇಷನ್ಸ್ ಜಿಎಂ ಸಬಾ ಕರಿಮ್ ಗೆ ಪತ್ರ ಬರೆದಿರುವ ಮಿಥಾಲಿ ರಾಜ್, ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸಲು ಅಧಿಕಾರದಲ್ಲಿರುವ ಕೆಲವರು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.