ನವದೆಹಲಿ: ಮಹೇಂದ್ರ ಸಿಂಗ್ ಧೋನಿಯನ್ನು ಎಲ್ಲಿಂದ ಹಿಡಿದುಕೊಂಡು ಬಂದಿರಿ ಎಂಬ ಪಾಕ್ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರ ಪ್ರಶ್ನೆಗೆ ಮಾಜಿ ನಾಯಕ ಸೌರವ್ ಗಂಗೂಲಿ ನೀಡಿದ್ದ ಉತ್ತರ ಇದೀಗ ವೈರಲ್ ಆಗುತ್ತಿದೆ.
ಹೌದು.. ಸಂದರ್ಶನವೊಂದರಲ್ಲಿ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು, ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ರೊಂದಿಗೆ ತಾವು ಮಾಡಿದ್ದ ಹಾಸ್ಯ ಚಟಾಕಿಯನ್ನು ನೆನಪಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಮುಶರಫ್ ಧೋನಿ ಬಗ್ಗೆ ಕೇಳಿದ್ದ ಪ್ರಶ್ನೆಗೆ ತಾವು ನೀಡಿದ ಉತ್ತರವನ್ನ ಮೆಲುಕು ಹಾಕಿದ್ದಾರೆ. ಧೋನಿ ಬಿರುಸಿನ ಬ್ಯಾಟಿಂಗ್ ಗೆ ಮಾರು ಹೋಗಿದ್ದ ಮುಷರಫ್ ದಾದಾ ಬಳಿ ಬಂದು 'ನೀವು ಇವರನ್ನು ಎಲ್ಲಿಂದ ಹಿಡಿದುಕೊಂಡು ಬಂದಿರಿ? ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಯಾಗಿ ದಾದಾ, 'ವಾಘಾ ಗಡಿಯ ಸಮೀಪ ನಡೆದುಕೊಂಡು ಹೋಗುತ್ತಿದ್ದರು. ಅಲ್ಲಿಂದ ಎಳೆದು ತಂದೆ' ಎಂದು ನಗುಮುಖದಿಂದಲೇ ಉತ್ತರಿಸಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಅಲ್ಲದೆ ಆ ಸರಣಿ ಬಳಿಕ ಧೋನಿ ಕ್ರಿಕೆಟ್ ಇತಿಹಾಸದ ಪುಟ ಸೇರಿದ್ದು, 2007ರಲ್ಲಿ ಚೊಚ್ಚಲ ಟ್ವೆಂಟಿ-20 ಹಾಗೂ 2011 ಏಕದಿನ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು ಎಂದು ದಾದಾ ಹೇಳಿದ್ದಾರೆ. ಅಲ್ಲದೆ 2019ರ ಏಕದಿನ ವಿಶ್ವಕಪ್ನಲ್ಲಿ ಧೋನಿ ಆಡಬೇಕು. ಈ ನಿಟ್ಟಿನಲ್ಲಿ ಅವರು ಉತ್ತಮ ನಿರ್ವಹಣೆ ನೀಡಬೇಕಿದೆ. ಧೋನಿ ಚಾಂಪಿಯನ್ ಆಗಿದ್ದು, ಚಾಂಪಿಯನ್ ಗಳು ಚಾಂಪಿಯನ್ ರೀತಿಯಲ್ಲೇ ಮೈದಾನ ಬಿಟ್ಟು ತೆರಳಬೇಕಿದೆ ಎಂದು ಹೇಳಿದ್ದಾರೆ.
2006 ರಲ್ಲಿ ಪಾಕಿಸ್ತಾನಲ್ಲಿ ನಡೆದ ಭಾರತ- ಪಾಕಿಸ್ತಾನ ಏಕದಿನ ಸರಣಿ ಧೋನಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಇನ್ನು 2004 ರಲ್ಲಿ ಪಾಕಿಸ್ತಾನ ವಿರುದ್ಧವೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಗಂಗೂಲಿ ಬದಲು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಧೋನಿ ಶತಕ ಸಿಡಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos