ನವದೆಹಲಿ: ಸಂಗೀತ ನಿರ್ದೇಶಕ ರಘು ದೀಕ್ಷಿತ್ ಹಾಗೂ ಖ್ಯಾತ ತಮಿಳು ಗೀತ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಖ್ಯಾತ ತಮಿಳು ಗಾಯಕಿ ಚಿನ್ಮಯಿ ಶ್ರೀಪಾದ ಅವರು ಈಗ ಶ್ರೀಲಂಕಾ ಕ್ರಿಕೆಟಿಗ ಲಸಿತ್ ಮಾಲಿಂಗ ಅವರ ವಿರುದ್ಧವೂ ಧ್ವನಿ ಎತ್ತಿದ್ದಾರೆ.
ಅನಾಮಿಕ ಮಹಿಳೆಯೊಬ್ಬರು ಲಸಿತ್ ಮಾಲಿಂಗ ವಿರುದ್ಧ ಮಾಡಿದ ಆರೋಪದ ಪತ್ರವನ್ನು ಚಿನ್ಮಯಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಐದು ವರ್ಷಗಳ ಹಿಂದೆ ಮುಂಬೈನ ಹೋಟೆಲ್ ಒಂದಕ್ಕೆ ನನ್ನ ಗೆಳತಿಯನ್ನು ಭೇಟಿ ಮಾಡಲು ಹೋಗಿದ್ದೆ. ಇದೇ ಸಮಯ ಐಪಿಎಲ್ ಕೂಡ ನಡೆಯುತ್ತಿತ್ತು. ಹೋಟೆಲ್ ಸಿಬ್ಬಂದಿ ನಿಮ್ಮ ಗೆಳತಿ ಶ್ರೀಲಂಕಾ ಕ್ರಿಕೆಟರ್ ಲಸಿತ್ ಮಾಲಿಂಗ ಅವರ ರೂಂಗೆ ತೆರಳಿರುವುದಾಗಿ ತಿಳಿಸಿದ್ದರು. ಆದರೆ ನಾನು ಅಲ್ಲಿ ಹೋಗಿ ನೋಡಿದಾಗ ನನ್ನ ಫ್ರೆಂಡ್ ಇರಲಿಲ್ಲ. ತಕ್ಷಣವೇ ಮಾಲಿಂಗ ನನ್ನನ್ನು ಬೆಡ್ ಮೇಲೆ ತಳ್ಳಿದರು. ಈ ವೇಳೆ ನನಗೆ ಪ್ರತಿಭಟಿಸಲು ಸಾಧ್ಯವಾಗಲಿಲ್ಲ. ಸುಮ್ಮನೆ ಕಣ್ಣು ಮುಂಚಿಕೊಂಡಿದ್ದೆ. ಕೆಲ ಸಮಯದ ಬಳಿಕ ಹೊಟೇಲ್ ಸಿಬ್ಬಂದಿ ಬಾಗಿಲು ತಟ್ಟಿದ್ದು, ಮಾಲಿಂಗರವರು ಬಾಗಿಲು ತೆರೆಯಲು ತೆರಳಿದರು. ತಕ್ಷಣ ನಾನು ವಾಶ್ ರೂಂಗೆ ತೆರಳಿ ಮುಖ ತೊಳೆದುಕೊಂಡೆ ಹಾಗೂ ಸಿಬ್ಬಂದಿ ತೆರಳಿದ ಬಳಿಕ ನಾನು ಹೊರಹೋದೆ. ಅಂದು ನಾನು ಅವಮಾನವಾಗುತ್ತದೆ ಎಂದು ಎಲ್ಲೂ ಈ ವಿಷಯ ಹೇಳಿರಲಿಲ್ಲ. ಒಂದು ವೇಳೆ ನಾನು ಈ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದರೂ, ಮಾಲಿಂಗ ಬಹಳಷ್ಟು ಫೇಮಸ್ ಕ್ರಿಕೆಟರ್ ಹೀಗಾಗಿ ನೀನೇ ಬೇಕೆಂದು ಹೊಟೇಲ್ ರೂಂಗೆ ಹೋಗಿದ್ದೆ ಎಂದು ಹೇಳಿಕೊಳ್ಳುತ್ತಿದ್ದರು' ಎಂದು ಮಹಿಳೆ ಬರೆದುಕೊಂಡಿದ್ದಾರೆ.
ಚಿನ್ಮಯಿ ಶ್ರೀಪಾದ ಅವರು ನಿನ್ನೆ ಸಹ ಇದೇ ರೀತಿ ಇಬ್ಬರು ಅನಾಮಿಕ ಮಹಿಳೆಯರು ರಘು ದೀಕ್ಷಿತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ರಗಳನ್ನು #MeToo ಅಭಿಯಾನದಡಿ ಹಂಚಿಕೊಂಡಿದ್ದರು.