ನವದೆಹಲಿ: ನಿನ್ನೆಯಷ್ಟೇ ಬಿಸಿಸಿಐ ಮುಂಬರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆ ತಂಡ ಪ್ರಕಟಿಸಿದ್ದು, ಅಚ್ಚರಿ ಎಂಬಂತೆ ದಿನೇಶ್ ಕಾರ್ತಿಕ್ ಹಾಗೂ ವಿಜಯ್ ಶಂಕರ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಆದರೆ ಇದೀಗ ದಿನೇಶ್ ಕಾರ್ತಿಕ್ ವಿರುದ್ಧ ಪರೋಕ್ಷ ಅಸಮಾಧಾನ ಕೂಡ ವ್ಯಕ್ತವಾಗುತ್ತಿದೆ.
ಹೌದು.. ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಲು ತಮ್ಮದೇ ತಂಡದ ಆಟಗಾರನನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ತುಳಿದ್ರಾ? ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಶ್ವಕಪ್ ತಂಡ ಪ್ರಕಟಣೆಗೂ ಮುನ್ನಾದಿನ ಅಂದರೆ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಹೊಡಿ ಬಡಿ ದಾಂಡಿಗ ಶುಭ್ಮನ್ ಗಿಲ್ ಅವರ ಬ್ಯಾಟಿಂಗ್ ಆರ್ಡರ್ ಅನ್ನು ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಬದಲಿಸಿದ್ದರು. ಕಾರ್ತಿಕ್ ರ ಈ ನಡೆ ಸ್ವತಃ ಟೀಂ ಮ್ಯಾನೇಜ್ ಮೆಂಟ್ ಗೂ ಅಚ್ಚರಿ ಮೂಡಿಸಿತ್ತು. ಬಹುಶಃ ಇದು ಅವರ ಗೆಲುವಿನ ಲೆಕ್ಕಾಚಾರವಾಗಿರಬಹುದು ಎಂದು ಭಾವಿಸಿದ್ದರು.
ಆದರೆ ಇದೀಗ ಕಾರ್ತಿಕ್ ಇದೇ ನಡೆ ವಿವಾದಕ್ಕೆ ಕಾರಣವಾಗಿದ್ದು, ಕ್ರಿಕೆಟಿಗ ಮನೋಜ್ ತಿವಾರಿ ಕಾರ್ತಿರ ಈ ನಡೆಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಟಾಪ್ ಆರ್ಡರ್ನಲ್ಲಿ ಆಡಿದ್ದ ಗಿಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಆದರೆ ಚೆನ್ನೈ ವಿರುದ್ಧ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್ ರನ್ನು ಕೆಳ ಕ್ರಮಾಂಕದಲ್ಲಿ ಕಾರ್ತಿಕ್ ಆಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಮಾಜಿ ಕೆಕೆಆರ್ ಆಟಗಾರ ತಿವಾರಿ, ದಿನೇಶ್ ಕಾರ್ತಿಕ್ ನಾಳೆ(ಸೋಮವಾರ) ವಿಶ್ವಕಪ್ ತಂಡದ ಆಯ್ಕೆ ಇರುವುದರಿಂದ ಗಿಲ್ ರನ್ನು ಕೆಳ ಕ್ರಮಾಂಕಕ್ಕೆ ಇಳಿಸಿ, ತಾವೇ ಮೊದಲು ಬ್ಯಾಟಿಂಗ್ ಮಾಡಿದ್ದಾರೆ. ಇದನ್ನು ಯಾರಾದರೂ ತಂಡದ ಆಟ ಎಂದು ಕರೆಯುತ್ತಾರಾ? ಕೆಲವೊಮ್ಮೆ ಎಲ್ಲವೂ ಸ್ಪಷ್ಟವಾಗುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.
ತಿವಾರಿ ಅವರ ಈ ಟ್ವೀಟ್ ಇದೀಗ ಕಾರ್ತಿಕ್ ರ ನಡೆಯನ್ನು ಪ್ರಶ್ನಿಸುವಂತಾಗಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಕೆಆರ್ ನಾಯಕ ತಾನು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರನನ್ನು ತುಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮನೋಜ್ ತಿವಾರಿಯ ಆರೋಪದಲ್ಲಿ ಹುರುಳಿದೆಯೋ, ಇಲ್ಲವೊ, ಆದರೆ ದಿನೇಶ್ ಕಾರ್ತಿಕ್ ಸ್ಪೋಟಕ ಆಟಗಾರ ರಿಷಭ್ ಪಂತ್ ರನ್ನು ಹಿಂದಿಕ್ಕಿ ವಿಶ್ವಕಪ್ಗೆ ಆಯ್ಕೆಯಾದ ಟೀಂ ಇಂಡಿಯಾದಲ್ಲಿ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.