ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲೂ ಕೆಲ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕನ್ನಡಿಗರ ಮನ ಗೆದ್ದಿದ್ದ ಕೆಎಲ್ ರಾಹುಲ್ 'ಕಾಫಿ ವಿಥ್ ಕರಣ್' ಟಿವಿ ಕಾರ್ಯಕ್ರಮದ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಆ ವಿವಾದಕ್ಕೆ ಸಂಬಂಧಿಸಿ ಮತ್ತೆ ರಾಹುಲ್ ತುಟಿ ಬಿಚ್ಚಿದ್ದಾರೆ.
ನಿಜ ಹೇಳಬೇಕೆಂದರೆ, ಈ ವಿವಾದದಿಂದ ಕೊಂಚ ಕಹಿ ಅನುಭವ ಆಗಿತ್ತು. ಅದು ನನ್ನ ಮೇಲೆ ಗಂಭೀರ ಪರಿಣಾಮ ಬೀರಿತ್ತು. ನನ್ನನ್ನು ದೂರುವಂತೆ ಮಾಡಿತ್ತು. ಆ ವೇಳೆ ನಾನು ಸಿಟ್ಟುಗೊಂಡಿದ್ದೆ ಕೂಡ. ಆದರೆ ನಾನು ಈಗ ಅದರಿಂದ ಹೊರ ಬಂದಿದ್ದೇನೆ. ಎಲ್ಲವನ್ನೂ ಸ್ವೀಕರಿಸುವ ವ್ಯಕ್ತಿಯಾಗಿದ್ದೇನೆ. ಎಂದು ಅವರೇ ಸ್ವತಃ ಹೇಳಿಕೊಂಡಿದ್ದಾರೆ.
ಬಾಲಿವುಡ್ ನಟ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಟಿವಿ ಶೋ 'ಕಾಫಿ ವಿಥ್ ಕರಣ್ ನಲ್ಲಿ ರಾಹುಲ್ ಮತ್ತು ಸಹ ಆಟಗಾರ, ಟೀಮ್ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಲ್ಗೊಂಡಿದ್ದರು. ಆ ಶೋನಲ್ಲಿ ಮಹಿಳೆಯರ ಕುರಿತು ಮತ್ತು ಲೈಂಗಿಕತೆ ಬಗ್ಗೆ ಕೀಳು ಅಭಿರುಚಿಯ, ಸ್ವೇಚ್ಛೆಯ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.