ಕ್ರಿಕೆಟ್

ಕೆಪಿಎಲ್: ಬಿಜಾಪುರ್ ಬುಲ್ಸ್ ಬಗ್ಗು ಬಡಿದ ಬೆಳಗಾವಿ ಪ್ಯಾಂಥರ್ಸ್

Srinivasamurthy VN

ಮೈಸೂರು: ಆರ್ ಸಮರ್ಥ್ (ಅಜೇಯ 50) ಹಾಗೂ ಅಭಿನವ್ ಮನೋಹರ್ (ಅಜೇಯ 42) ಅವರುಗಳ ಸಮಯೋಚಿತ ಆಟದ ಬಲದಿಂದ ಬೆಳಗಾವಿ ಪ್ಯಾಂಥರ್ಸ್ ಕರ್ನಾಟಕ ಪ್ರೀಮಿಯರ್ ಲೀಗ್‍ ಟಿ-20 ಕ್ರಿಕೆಟ್ ಟೂರ್ನಿಯ 18ನೇ ಪಂದ್ಯದಲ್ಲಿ 7 ವಿಕೆಟ್ ಗಳಿಂದ ಬಿಜಾಪುರ್ ಬುಲ್ಸ್ ತಂಡವನ್ನು ಮಣಿಸಿತು. 
  
ಮೊದಲು ಬ್ಯಾಟ್ ಮಾಡಿದ ಬಿಜಾಪುರ್ ಬುಲ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಎಂಜಿ ನವೀನ್, ರಾಜು ಭಟ್ಕಳ್ ಒಂದಕಿಯಲ್ಲಿ ಆಟ ಮುಗಿಸಿದರು. ಭರತ್ ಚಿಪ್ಲಿ 33, ಜಿಎಸ್ ಚಿರಂಜೀವಿ 12, ಎಸ್ ಎನ್ ರಾಜು 18, ಜೆಸ್ವಂತ್ ಆಚಾರ್ಯ 11 ಹಾಗೂ ಎನ್.ಪಿ ಭರೇತ್ ಅಜೇಯ 35 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಬಿಜಾಪುರ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 136 ರನ್ ಕಲೆ ಹಾಕಿತು. ಬೆಳಗಾವಿ ಪರ ಶುಭಾಂಗ್ ಹೆಗ್ಡೆ, ಡಿ.ಅವನಿಶ್, ಎಂಬಿ ದರ್ಶನ್ ತಲಾ ಎರಡು ವಿಕೆಟ್ ಕಬಳಿಸಿದರು. 
  
ಬೆಳಗಾವಿ ತಂಡದ ಆರಂಭವೂ ಕಳಪೆಯಾಗಿತ್ತು. ಮೂರನೇ ವಿಕೆಟ್ ಗೆ ಆರ್. ಸರ್ಮಥ್ ಹಾಗೂ ದಿಕ್ಷಾಂಶು ನೇಗಿ ತಂಡಕ್ಕೆ 50 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ, ಆರಂಭಿಕ ಆಘಾತದಿಂದ ಪಾರು ಮಾಡಿತು. ದಿಕ್ಷಾಂಶು 32 ರನ್ ಬಾರಿಸಿ ಔಟಾದರು. ಸಮರ್ಥ್ 45 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ಅಜೇಯರಾಗುಳಿದರು. ಅಭಿನವ್ ಮನೋಹರ್ 42 ರನ್ ಬಾರಿಸಿ ಔಟ್ ಆಗದೇ ಉಳಿದರು. ಬೆಳಗಾವಿ 17.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 137 ರನ್ ಕಲೆ ಹಾಕಿತು.

SCROLL FOR NEXT