ನವದೆಹಲಿ: ಪುಲ್ವಾಮ ಉಗ್ರದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡಬೇಕೋ ಬೇಡವೋ ಎಂಬ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಈ ಬಗ್ಗೆ ಬಿಸಿಸಿಐಗೆ ಸಲಹೆ ನೀಡಿರುವ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.
ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ವುವ ವಿಚಾರವಾಗಿ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಮಂಡಳಿ ಸದಸ್ಯರು ಕೇಂದ್ರ ಕ್ರೀಡಾ ಸಚಿವಾಲಯವನ್ನು ಸಂಪರ್ಕಿಸಿದ್ದು, ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಸಭೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಸಾಧಕ-ಬಾಧಕಗಳನ್ನೂ ಚರ್ಚಿಸಲಾಗಿದ್ದು, ಈ ವೇಳೆ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗದುಕೊಳ್ಳಬೇಡಿ ಎಂದು
ಕೇಂದ್ರ ಕ್ರೀಡಾ ಸಚಿವಾಲಯ ಬಿಸಿಸಿಐಗೆ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಪಾಕಿಸ್ತಾನವನ್ನು ಏಕಾಂಗಿ ಮಾಡಲು ಹೋಗಿ ನಾವೇ ಏಕಾಂಗಿಯಾಗುವ ಅಪಾಯವಿದೆ. ಪಂದ್ಯಗಳನ್ನು ಬಹಿಷ್ಕರಿಸಿದರೆ ಐಸಿಸಿ ಭಾರತದ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಪಾಕ್ ವಿರುದ್ಧದ ಪಂದ್ಯವನ್ನು ನಾವು ಬಹಿಷ್ಕರಿಸಿದರೆ, ತಂಡದ ಅಂಕಗಳು ಪಾಕ್ ಗೆ ಹೋಗುತ್ತದೆ. ಇದರಿಂದ ಟೂರ್ನಿಯಲ್ಲಿ ಭಾರತಕ್ಕೆ ಹಿನ್ನಡೆಯಾಗಲಿದೆ ಎಂದು ಸರ್ಕಾರ ಹೇಳಿದೆ ಎನ್ನಲಾಗಿದೆ.
ಇದೇ ವೇಳೆ, 'ಖಂಡಿತಾ ಪಾಕಿಸ್ತಾನಕ್ಕೆ ಪುಲ್ವಾಮ ಉಗ್ರ ದಾಳಿಯ ಬಿಸಿಯನ್ನು ಶೀಘ್ರ ಮುಟ್ಟಿಸುತ್ತೇವೆ ಎಂದು ಹೇಳಿರುವ ಕೇಂದ್ರ ಸರ್ಕಾರ, ವಿಶ್ವಕಪ್ ಟೂರ್ನಿ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಹೀಗಾಗಿ ಈಗಲೇ ಯಾವುದೇ ಆತುರದ ನಿರ್ಣಯ ಕೈಗೊಳ್ಳಬೇಡಿ ಎಂದು ಕೇಂದ್ರ ಸರ್ಕಾರ ಬಿಸಿಸಿಐಗೆ ಸಲಹೆ ನೀಡಿದೆ.