ಕೊಲಂಬೊ: ಭ್ರಷ್ಟಾಚಾರ ನಿಗ್ರಹ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ತಂಡದ ಮಾಜಿ ನಾಯಕ, ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸನತ್ ಜಯಸೂರ್ಯ ಅವರಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಎರಡು ವರ್ಷ ನಿಷೇಧ ಹೇರಿದೆ.
ಜಯಸೂರ್ಯ ಅವರು ಭ್ರಷ್ಟಾಚಾರ ತನಿಖೆಗೆ ಸಹಕರಿಸಿಲ್ಲ ಎಂದು ಅವರನ್ನು ಕ್ರಿಕೆಟ್ ನ ಎಲ್ಲ ಪ್ರಕಾರಗಳಿಂದಲೂ ಎರಡು ವರ್ಷ ನಿಷೇಧ ವಿಧಿಸಲಾಗಿದೆ.
ಸನತ್ ಜಯಸೂರ್ಯ ಅವರು ಎರಡು ಪ್ರಕಾರದ ಭ್ರಷ್ಟಾಚಾರ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ನಿಷೇಧ ವಿಧಿಸಲಾಗುತ್ತಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾ ಕ್ರಿಕೆಟ್ನಲ್ಲಿನ ಭ್ರಷ್ಟಾಚಾರ ಪ್ರಕರಣದ ತನಿಖೆಯಲ್ಲಿ ಜಯಸೂರ್ಯ ಸಹಕಾರ ನೀಡದೇ ಐಸಿಸಿ ಕಾನೂನಿನ ವಿಧಿ 2. 4. 6 ಅನ್ನು ಉಲ್ಲಂಘಿಸಿದ್ದಾರೆ. ಜಯಸೂರ್ಯ ಅವರು ದಾಖಲೆಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡೆತಡೆ ಉಂಟು ಮಾಡಿದ್ದಾರೆ. ಇದರಿಂದಾಗಿ ತನಿಖೆಯಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದು ಐಸಿಸಿ ಕಾನೂನಿನ ವಿಧಿ 2.4.7ರ ಉಲ್ಲಂಘನೆ ಎಂದು ಐಸಿಸಿ ತಿಳಿಸಿದೆ.