ಬೆಂಗಳೂರು: ಹೊಸವರ್ಷದ ಮೊದಲಲ್ಲೇ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಗೆಲುವಿನ ಸಿಹಿ ಸಿಂಚನವಾಗಿದೆ. ರಣಜಿ ಕ್ರಿಕೆಟ್ ಸರಣಿಯಲ್ಲಿ ಛತ್ತೀಸ್ಘಡ ವಿರುದ್ಧ ಸೆಣೆಸಿದ್ದ ಕರ್ನಾಟಕ 198 ರನ್ ಅಮೋಘ ಜಯ ದಾಖಲಿಸಿದೆ. ಈ ಮೂಲಕ ರಾಜ್ಯ ತಂಡ ಸರಣಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪುವುದು ಖಚಿತವಾಗಿದೆ.
ಮನೀಷ್ಪಾಂಡೆ ನಾಯಕತ್ವದ ರಾಜ್ಯ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 418ಕ್ಕೆ ಆಲ್ ಔಟ್ ಆಗಿದ್ದ ಕರ್ನಾಟಕ ದ್ವಿತೀಯ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 219ರನ್ ಗಳಿಸಿತ್ತು. ಮನೀಶ್ ಪಾಂಡೆ 102*, ಪಂಕಜ್ ಕುಮಾರ್ ರಾವೂ 67 ರನ್ ಗಳಿಸಿ ಮಿಂಚಿದ್ದಾರೆ.
ಅತ್ತ ಛತ್ತೀಸ್ಘಡ ಮೊದಲ ಇನ್ನಿಂಗ್ಸ್ 283ರನ್ ಗಳಿಸಿ ಸರ್ವಪತನವಾಗಿದ್ದರೆ ದ್ವಿತೀಯ ಇನ್ನಿಂಗ್ಸ್ ನಲ್ಲಿ 156ಕ್ಕೆ ಆಲೌಟ್ ಆಗಿತ್ತು.
ರಣಜಿ ಸರಣಿಯಲ್ಲಿ ಇದುವರೆಗೆ ಕರ್ನಾಟಕಏಳು ಪಂದ್ಯಗಳಲ್ಲಿ ಆಡಿದ್ದು ಇದರಲ್ಲಿ ಮೂರು ಗೆಲುವು, ಮೂರು ಡ್ರಾ ಹಾಗೂ ಒಂದು ಪಂದ್ಯದಲ್ಲಿ ಸೋಲು ಕಂಡಿದೆ.ಒಟ್ಟು 27 ಅಂಕಗಳಿಸಿರುವ ರಾಜ್ಯ ಎ ಗುಂಪಿನಲ್ಲಿ ಎರಡನೇ ಸ್ಥಾನಿಯಾಗಿದೆ.