ಲಂಡನ್: ವಿಶ್ವಕಪ್ ನಲ್ಲಿ ಸೆಮಿ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಸೋಲಿಗೆ ಈ ಅಂಶವೇ ಕಾರಣ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದ್ದಾರೆ.
ಕ್ರಿಕೆಟ್ ವೆಬ್ ಸೈಟ್ ವೊಂದರೊಂದಿಗೆ ಮಾತನಾಡಿರುವ ಸಚಿನ್, ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಮೊದಲ ಸೆಮಿ ಫೈನಲ್ ಕುರಿತು ಮಾತನಾಡಿದರು. ಈ ವೇಳೆ, 'ನ್ಯೂಜಿಲೆಂಡ್ ನೀಡಿದ 240 ರನ್ ಗಳ ಮೊತ್ತವನ್ನು ಭಾರತ ಯಶಸ್ವಿಯಾಗಿ ಬೆನ್ನತ್ತ ಬಹುದಿತ್ತು. ಆದರೆ ತಂಡದಲ್ಲಾದ ಕೆಲ ಗೊಂದಲಗಳು ನಾವು ಸೋಲುವಂತೆ ಮಾಡಿತು ಎಂದು ಹೇಳಿದ್ದಾರೆ.
'ಸೋಲಿನಿಂದ ಬಹಳ ಬೇಸರವಾಗಿದೆ. 240 ರನ್ ಬೆನ್ನಟ್ಟಬಹುದಾದ ಮೊತ್ತ ಎಂಬುದರಲ್ಲಿ ಅನುಮಾನವೇ ಇಲ್ಲ, ಇದೇನೂ ದೊಡ್ಡ ಸ್ಕೋರ್ ಆಗಿರಲಿಲ್ಲ. ಆದರೆ ಸತತ 3 ವಿಕೆಟ್ ಹಾರಿಸಿದ ನ್ಯೂಜಿಲೆಂಡ್ ಕನಸಿನ ಆರಂಭ ಪಡೆಯಿತು. ರವೀಂದ್ರ ಜಡೇಜಾ ಮತ್ತು ಧೋನಿಯ 'ಫೈಟಿಂಗ್ ಸ್ಪಿರಿಟ್' ನನಗೆ ಇಷ್ಟವಾಯಿತು ಎಂದು ಹೇಳಿದ ಸಚಿನ್ ಇದೇ ವೇಳೆ, ಆಟಗಾರರಿಗೆ ಕಿವಿಮಾತು ಕೂಡ ಹೇಳಿದ್ದಾರೆ.
'ಯಾವತ್ತೂ ರೋಹಿತ್ ಶರ್ಮಾ-ಕೊಹ್ಲಿಯನ್ನು ನಂಬಿ ಕುಳಿತುಕೊಳ್ಳಬಾರದು. ಪ್ರತೀ ಸಲವೂ ರೋಹಿತ್ ಭದ್ರವಾದ ಅಡಿಪಾಯ ನಿರ್ಮಿಸುತ್ತಾರೆ, ಕೊಹ್ಲಿ ಈ ಬುನಾದಿಯ ಮೇಲೆ ಬ್ಯಾಟಿಂಗ್ ನಡೆಸುತ್ತಾರೆ ಎಂದು ನಂಬಿ ಕುಳಿತುಕೊಳ್ಳುವುದು ತಪ್ಪು. ಹಾಗೆಯೇ ಧೋನಿಯೇ ಫಿನಿಶ್ ಮಾಡುತ್ತಾರೆ ಎಂದು ನಿರೀಕ್ಷಿಸುವುದು ಕೂಡ ತಪ್ಪೆ. ಉಳಿದ ಆಟಗಾರರೂ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಆಡಬೇಕಿದೆ. ಈ ವಿಚಾರದಲ್ಲಿ ಜಡೇಜಾ ಅವರ ಹೋರಾಟದ ಮನೋಭಾವನ್ನು ನಾನು ಮೆಚ್ಚಿಕೊಳ್ಳುತ್ತೇನೆ. ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯಾ ಮತ್ತೊಂದಿಷ್ಟು ಹೊತ್ತು ಕ್ರೀಸ್ ನಲ್ಲಿ ಇದ್ದಿದ್ದರೆ, ಬಹುಶಃ ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಎಂದು ಸಚಿನ್ ಹೇಳಿದ್ದಾರೆ.