ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಬೆನ್ವಲ್ಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಂ ಇಂಡಿಯಾಗೆ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದು. ಪ್ರಧಾನ ಕೋಚ್ ಹುದ್ದೆ ಸೇರಿದಂತೆ ತಂಡದ ಎಲ್ಲ ಸಹಾಯಕ ಕೋಚ್ ಗಳ ಹುದ್ದೆಗೆ ಮರು ಸಂದರ್ಶನ ನಡೆಸಲು ನಿರ್ಧರಿಸಿದೆ.
ಅದರಂತೆ ಮುಖ್ಯ ಕೋಚ್, ಬ್ಯಾಟಿಂಗ್ ಮತ್ತು ಬೌಲಿಂಗ್ ಕೋಚ್ ಹಾಗೂ ಫೀಲ್ಡಿಂಗ್ ಕೋಚ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಮಂಗಳವಾರ ಅರ್ಜಿ ಆಹ್ವಾನಿಸಿದೆ. ಇದೇ ವೇಳೆ ತಂಡದ ಫಿಸಿಯೊ, ಮ್ಯಾನೇಜರ್ ಮತ್ತು ಸ್ಟ್ರೆಂತ್ ಅಂಡ್ ಕಂಡೀಷನಿಂಗ್ ಕೋಚ್ ಹುದ್ದೆಗಳಿಗೂ ಕೂಡ ಬಿಸಿಸಿಐ ಅರ್ಜಿ ಆಹ್ವಾನಿಸಿದೆ.
ಇನ್ನು ಕಳೆದ ಬಾರಿ ಅನಿಲ್ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರವಿ ಶಾಸ್ತ್ರಿ ಅರ್ಜಿ ಸಲ್ಲಿಸಲಿ ಎನ್ನುವ ಸಲುವಾಗಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮುಂದೂಡಲಾಗಿತ್ತು. ಟೀಮ್ ಇಂಡಿಯಾದ ಕೋಚ್ ಹುದ್ದೆಗಾಗಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಅರ್ಜಿ ಸಲ್ಲಿಸಿದ್ದರು. ಇದೀಗ ಅನಿಲ್ ಕುಂಬ್ಳೆ ಅವರ ಅರ್ಜಿ ಕೂಡ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಪರಿಗಣಿಸಲಾಗುತ್ತದೆ. ಆದರೆ ಇವರೆಲ್ಲರನ್ನು ಹೊರತು ಪಡಿಸಿ ಬೇರೆ ಯಾರೆಲ್ಲಾ ಅರ್ಜಿ ಸಲ್ಲಿಸುತ್ತಾರೆ ಎಂಬ ಕುತೂಹಲ ಕೂಡ ಹೆಚ್ಚಾಗುತ್ತಿದೆ.
ರೇಸ್ ನಲ್ಲಿದ್ದಾರೆ ಘಟಾನುಘಟಿ ಮಾಜಿ ಆಟಗಾರರು!
ಇನ್ನು ಟೀಂ ಇಂಡಿಯಾ ಪ್ರಧಾನ ಕೋಚ್ ಅಭ್ಯರ್ಥಿಗಳ ರೇಸ್ ನಲ್ಲಿ ಘಟಾನುಘಟಿ ಮಾಜಿ ಆಟಗಾರರಿದ್ದು, ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ, ಮಾಜಿ ಕೋಚ್ ಗಳಾದ ಅನಿಲ್ ಕುಂಬ್ಳೆ, ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟರ್ನ್ ಕೂಡ ಕೋಚ್ ಹುದ್ದೆ ರೇಸ್ ನಲ್ಲಿದ್ದಾರೆ. ಈಗಿರುವ ಮುಖ್ಯ ಕೋಚ್ ರವಿ ಶಾಸ್ತ್ರಿ ಮತ್ತು ತಂಡಕ್ಕೆ ನೇಮಕಾತಿ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಅನುಮತಿಸಿದೆ. ಇದಲ್ಲದೇ ರೇಸ್ ನಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ, ಶ್ರೀಲಂಕಾದ ಮಹೇಲಾ ಜಯವರ್ಧನೆ, ಕುಮಾರ ಸಂಗಕ್ಕಾರ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.
ರವಿ ಶಾಸ್ತ್ರಿ ಅಂಡ್ ಟೀಮ್ ಜೊತೆಗಿನ ಒಪ್ಪಂದ ವಿಶ್ವಕಪ್ ನೊಂದಿಗೆ ಅಂತ್ಯಗೊಂಡರೂ ಈ ಹಿಂದೆ ನಡೆದ ಬಿಸಿಸಿಐ ಆಡಳಿತ ಮಂಡಳಿ ಸಭೆಯಲ್ಲಿ ಈ ಅವಧಿಯನ್ನು ಒಂದು ತಿಂಗಳ ವರೆಗೆ ವಿಸ್ತರಿಸಲಾಗಿತ್ತು. "ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜುಲೈ 30, 2019ರ ಒಳಗಾಗಿ recruitment@bcci.tvಗೆ ಕಳುಹಿಸಿಕೊಡತಕ್ಕದ್ದು," ಎಂದು ಬಿಸಿಸಿಐ ನೂತನ ಕೋಚ್ ನೇಮಕಾತಿ ಕುರಿತಾಗಿ ಅರ್ಜಿ ಆಹ್ವಾನಿಸುತ್ತಿರುವ ಸಂಗತಿಯನ್ನು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.