ಮುಂಬೈ: ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಲಿ ಕೋಚ್ ರವಿಶಾಸ್ತ್ರಿ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರವಿಶಾಸ್ತ್ರಿ ಅವರೇ ಭಾರತ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿ ಎಂದು ಹೇಳಿದ್ದಾರೆ.
'ಭಾರತ ತಂಡದ ಮುಂದಿನ ಕೋಚ್ ಬಗ್ಗೆ ಮಾತನಾಡಲು ಕಪಿಲ್ ದೇವ್ ನಾಯಕತ್ವದ ಕ್ರಿಕೆಟ್ ಸಲಹಾ ಸಮಿತಿಯಿಂದ ಯಾರೂ ನನ್ನನ್ನೂ ಇನ್ನೂ ಸಂಪರ್ಕಿಸಿಲ್ಲ. ರವಿಶಾಸ್ತ್ರಿ ಅವರ ತಂಡದಲ್ಲಿ ಇದ್ದರೆ ಡ್ರೆಸ್ಸಿಂಗ್ ಕೊಠಿಡಿಯಲ್ಲಿ ಉತ್ತಮ ವಾತಾವರಣವಿರುತ್ತದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿರುವ ಭಾರತ ತಂಡಕ್ಕೆ ಇದೀಗ ಮುಂದಿನ ಗುರಿ 2020ರ ಟಿ-20 ವಿಶ್ವಕಪ್ ಹಾಗೂ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಚಾಂಪಿಯನ್ ಆಗುವುದು. ವಿಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಭಾರತ ತಂಡಕ್ಕೆ ತೀವ್ರ ಕುತೂಹಲ ಕೆರಳಿಸಿದೆ. ಚುಟುಕು ಸರಣಿತ ಭಾರತ ತಂಡದಲ್ಲಿ ಹೆಚ್ಚು ಯುವ ಪ್ರತಿಭೆಗಳು ಒಳಗೊಂಡಿದ್ದಾರೆ. ಹಾಗಾಗಿ, ಟಿ-20 ಸರಣಿ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.