ಲಂಡನ್: ನಾಟಿಂಗ್ ಹ್ಯಾಮ್ ನ ಬೌನ್ಸಿ ಟ್ರ್ಯಾಕ್ ನಲ್ಲಿ ಲಯಕ್ಕೆ ಮರಳಲು 18 ಎಸೆತಗಳು ಬೇಕಾಯಿತು ಎಂದು ವೆಸ್ಟ್ ಇಂಡೀಸ್ ವೇಗಿ ಆ್ಯಂಡ್ರೆ ರಸೆಲ್ ಹೇಳಿದ್ದಾರೆ.
ಶುಕ್ರವಾರ ನಡೆದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ 7 ವಿಕೆಟ್ಗಳಿಂದ ಜಯ ಸಾಧಿಸಿತ್ತು. ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಕ್ರಮಣಕಾರಿ ಬೌಲಿಂಗ್ ಮೂಲಕ ಸರ್ಫರಾಜ್ ಅಹಮದ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದ ರೆಸಲ್ ಕೇವಲ ನಾಲ್ಕು ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಕೇವಲ 105 ರನ್ಗಳಿಗೆ ಆಲೌಟ್ ಆಗಿತ್ತು. ಆ್ಯಂಡ್ರೆ ರಸೆಲ್ ಕೇವಲ ಮೂರು ಓವರ್ ಬೌಲಿಂಗ್ ಮಾಡಿ ಒಂದು ಮೇಡಿನ್, ನಾಲ್ಕು ರನ್ ನೀಡಿ ಪ್ರಮುಖ ಎರಡು ವಿಕೆಟ್ಗಳನ್ನು ಕಬಳಿಸಿದ್ದರು. ಇದು ಈ ಪಂದ್ಯದ ದಿಕ್ಕನ್ನೇ ಬದಲಿಸಿತು. ಓಶಾನ್ ಥಾಮಸ್ ನಾಲ್ಕು ಮತ್ತು ಜೇಸನ್ ಹೋಲ್ಡರ್ ಮೂರು ವಿಕೆಟ್ ಪಡೆದಿದ್ದರು.
ಪಂದ್ಯದ ಬಳಿಕ ಮಾತನಾಡಿದ್ದ ರಸೆಲ್, " ಪಂದ್ಯದ ಆರಂಭಕ್ಕೂ ಮೊದಲೇ ನಾವು ಆಕ್ರಮಣಾಕಾರಿ ಬೌಲಿಂಗ್ ಮಾಡುವ ಬದಲು ಪಿಚ್ನ ಪರಿಣಾಮಕಾರಿ ಜಾಗದಲ್ಲಿ ಬೌಲಿಂಗ್ ಮಾಡುವಂತೆ ಯೋಜನೆ ರೂಪಿಸಿದೆವು. ಇದು ಪಂದ್ಯದಲ್ಲಿ ಕೈ ಹಿಡಿಯಿತು" ಎಂದರು.
ಅಂತೆಯೇ 'ಪಾಕಿಸ್ತಾನ ವಿರುದ್ಧದ ಮೊದಲನೇ ಪಂದ್ಯದಲ್ಲಿ ನಾವು ಆಕ್ರಮಣಕಾರಿ ಬೌಲಿಂಗ್ ಮಾಡಲಿಲ್ಲ. ಬದಲಿಗೆ ಪಿಚ್ನ ಒಳ್ಳೆಯ ಜಾಗದಲ್ಲಿ ಬೌಲಿಂಗ್ ಮಾಡಿದರ ಫಲವಾಗಿ ಯಶಸ್ಸು ಪಡೆದೆವು. ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮದ್ ಅವರ ಮೇಲೆ ಮೈಂಡ್ ಗೇಮ್ ಆಡಲು ನಿರ್ಧರಿಸಿದೆ. ಆದರೆ, ಆತ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ನಾಲ್ಕು ಎಸೆತಗಳನ್ನು ಶಾರ್ಟ್ ಹಾಕಿದ್ದೆ. ಐದನೇ ಎಸೆತ ಹಾಕುವ ಮುನ್ನ ಸರ್ಫರಾಜ್ ಗೆ ಯಾರ್ಕರ್ ಹಾಕುತ್ತೇನೆ ಎಂದು ಸೂಚನೆ ನೀಡಿದ್ದೆ. ಆಗ ಅವರು ಯೋಜನೆ ಏಕೆ ಬದಲಿಸುತ್ತಿರಾ ಎಂದು ಹೇಳಿದ್ದರು. ಎಲ್ಲ ಎಸೆತಗಳು ಒಂದೇ ರೀತಿ ಹಾಕಿದರೆ, ಬ್ಯಾಟ್ಸ್ ಮನ್ ಸುಲಭವಾಗಿ ಅದೇ ಎಸೆತಗಳಿಗಾಗಿ ನಿರೀಕ್ಷೆ ಮಾಡುತ್ತಾರೆ" ಎಂದು ಅವರಿಗೆ ಹೇಳಿದ್ದೆ.
"ಕಳೆದ ಹಲವು ತಿಂಗಳು ಕಾಲ ಮೊಣಕಾಲು ನೋವಿಗೆ ಒಳಗಾಗಿದ್ದೆ. ಪಾಕಿಸ್ತಾನ ತಂಡದ ಒಂಬತ್ತು ವಿಕೆಟ್ ಉರುಳಿದಾಗ ನಾನು ಪೆವಿಲಿಯನ್ಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆ. ಈ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಆಸ್ಟ್ರೇಲಿಯಾ ವಿರುದ್ಧ ಮುಂದಿನ ಪಂದ್ಯಕ್ಕೆ ಇನ್ನೂ ಐದು ದಿನಗಳ ಕಾಲ ಸಮಯವಿದೆ. ಈ ಪಂದ್ಯಕ್ಕಾಗಿ ಇನ್ನಷ್ಟು ಶ್ರಮಿಸುವುದಾಗಿ" ರಸೆಲ್ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos