ಲಂಡನ್: ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡು ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿರುವ ಶಿಖರ್ ಧವನ್ ತಂಡ ತೊರೆಯುವಂತಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಚ್ಚರಿ ಹೇಳಿಕೆ ನೀಡಿದೆ.
ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಂಭೀರ ಗಾಯ ಮಾಡಿಕೊಂಡಿರುವ ತಂಡದ ಆರಂಭಿಕ ಆಟಗಾರ ಶಿಖರ್ ಸದ್ಯಕ್ಕೆ ತಂಡ ತೊರೆಯುವಂತಿಲ್ಲ ಎಂದು ಬಿಸಿಸಿಐ ಹೇಳಿದ್ದು, ಪರ್ಯಾಯ ಆಟಗಾರನ ಆಯ್ಕೆ ಸದ್ಯಕ್ಕಿಲ್ಲ ಎಂದು ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, ಗಾಯಾಳು ಧವನ್ ತಂಡದೊಂದಿಗೆ ಇರಲಿದ್ದಾರೆ. ತಂಡದ ಫಿಸಿಯೋಗಳ ಸಲಹೆ ಮೇರೆಗೆ ಶಿಖರ್ ಧವನ್ ರನ್ನು ಕೆಲ ದಿನಗಳ ಕಾಲ ವೀಕ್ಷಣೆಯಲ್ಲಿಡಲಾಗುತ್ತದೆ. ಹೀಗಾಗಿ ಸದ್ಯಕ್ಕೆ ಬದಲಿ ಆಟಗಾರನ ಆಯ್ಕೆ ಇಲ್ಲ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಇನ್ನು ಧವನ್ ಗಾಯಗೊಂಡಿರುವುದರಿಂದ ಭಾರತದ ಮುಂದಿನ ಪಂದ್ಯಗಳಲ್ಲಿ ಕೆಎಲ್ ರಾಹುಲ್, ರೋಹಿತ್ ಶರ್ಮಾರೊಂದಿಗೆ ಇನ್ನಿಂಗ್ಸ್ ಆರಂಭಿಸಲಿದ್ದು, ನಾಲ್ಕನೇ ಕ್ರಮಾಂಕಕ್ಕೆ ಈ ವರೆಗೂ ಆಯ್ಕೆ ಪಕ್ಕಾ ಆಗಿಲ್ಲ. ಆದರೆ ಪಂದ್ಯಕ್ಕೆ ಕ್ಷಣಗಣನೆ ಇರುವಂತೆ ಆಟಗಾರರ ಮತ್ತು ಪಿಚ್ ಮರ್ಮ ಅರಿತು ನಾಲ್ಕನೇ ಕ್ರಮಾಂಕವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ನಾಲ್ಕನೇ ಕ್ರಮಾಂಕಕ್ಕಾಗಿ ಶ್ರೇಯಶ್ ಅಯ್ಯರ್ ಮತ್ತು ದಿನೇಶ್ ಕಾರ್ತಿಕ್ ರನ್ನು ಸನ್ನದ್ದ ಸ್ಥಿತಿಯಲ್ಲಿರಿಸಲಾಗುತ್ತದೆ ಎಂದು ತಂಡದ ಮೂಲಗಳು ತಿಳಿಸಿವೆ.