ಲಂಡನ್: ಫೀಲ್ಡಿಂಗ್ ಗುಣಮಟ್ಟ ಸುಧಾರಿಸದ ಹೊರತು ಭಾರತದ ವಿರುದ್ಧ ಗೆಲುವು ಕಠಿಣವಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಹೇಳಿದ್ದಾರೆ.
ಇದೇ ಭಾನುವಾರ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗುತ್ತಿದ್ದು, ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಈ ಮಹತ್ವದ ಪಂದ್ಯದ ಹಿನ್ನಲೆಯಲ್ಲಿ ತಂಡದ ನಾಯಕ ಸರ್ಫರಾಜ್ ಅಹ್ಮದ್ ತಮ್ಮ ತಂಡದ ಆಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿನ ಹತ್ತಿರಕ್ಕೆ ಬಂದು ಸೋತಿತ್ತು. ಕಳಪೆ ಫೀಲ್ಡಿಂಗ್ ಮತ್ತು ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ ತಂಡದ ಸೋಲಿಗೆ ಕಾರಣವಾಗಿತ್ತು. ಡೇವಿಡ್ ವಾರ್ನರ್ 104 ರನ್ ಗಳಿಸಿದ್ದಾಗ ಅವರ ಕ್ಯಾಚ್ ಅನ್ನು ಮತ್ತೆ ವಹಾಬ್ ರಿಯಾಜ್ ಬಿಟ್ಟಿದ್ದರು. ಆಸಿಫ್ ಅಲಿ ಎರಡು ಕ್ಯಾಚ್ಗಳನ್ನು ಬಿಟ್ಟಿದ್ದರು. 33 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಫಿಂಚ್ ಅವರ ಕ್ಯಾಚ್ ಅನ್ನು ವಹಾಬ್ ರಿಯಾಜ್ ಕೈ ಚೆಲ್ಲಿದ್ದರು. ಬಳಿಕ ಅವರು 49 ಹೆಚ್ಚುವರಿ ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಪಾಕ್ 41 ರನ್ಗಳಿಂದ ಸೋಲು ಅನುಭವಿಸಿತ್ತು.
'ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನಾವು ಹಲವು ತಪ್ಪುಗಳನ್ನು ಮಾಡಿದ್ದೇವೆ. ವಿಶೇಷವಾಗಿ ಫೀಲ್ಡಿಂಗ್ನಲ್ಲಿ ನಾವು ಹಲವು ತಪ್ಪುಗಳನ್ನು ಮಾಡಿದ್ದೇವೆ. ಹಾಗಾಗಿ, ಭಾರತ ವಿರುದ್ಧದ ಪಂದ್ಯಕ್ಕೆ ಕ್ಷೇತ್ರ ರಕ್ಷಣೆ ಸುಧಾರಿಸಿಕೊಳ್ಳುವುದು ಅಗತ್ಯವಿದೆ. ಹಾಗಾಗಿ, ಕಠಿಣ ಪರಿಶ್ರಮದೊಂದಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಅಗತ್ಯವಿದೆ ಎಂದು ಆತ್ಮಾವಲೋಕನ ಮಾಡಿಕೊಂಡರು.
ಇನ್ನು ಪ್ರಸಕ್ತ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದ್ದು, ಆಡಿರುವ ಮೂರು ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದ್ದು, ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯ ಮಳೆ ಕಾರಣದಿಂದಾಗಿ ರದ್ದಾಗಿತ್ತು. ಆ ಮೂಲಕ ಭಾರತ ತಂಡ ಅಂಕ ಪಟ್ಟಿಯಲ್ಲಿ 5 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ.
ಪಾಕಿಸ್ತಾನ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಜಯಗಳಿಸಿದ್ದು, ಎರಡರಲ್ಲಿ ಸೋಲು ಮತ್ತೊಂದು ಪಂದ್ಯ ಮಳೆಯಿಂದ ರದ್ದಾಗಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಪಾಕಿಸ್ತಾನ 8ನೇ ಸ್ಥಾನದಲ್ಲಿದೆ. ಇದೀಗ ಭಾನುವಾರ ಬಲಿಷ್ಠ ಭಾರತ ತಂಡ ಎದುರಾಳಿಯಾಗಿದ್ದು, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಪಾಕಿಸ್ತಾನ ಸಿಲುಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos