ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಿಂದ ಗಾಯಾಳು ಶಿಖರ್ ಧವನ್ ಹೊರಬಿದ್ದು, ಅವರ ಸ್ಥಾನಕ್ಕೆ ರಿಷಬ್ ಪಂತ್ ಆಯ್ಕೆಯಾಗಿದ್ದಾರೆ. ಆದರೆ ಈ ವಿಚಾರದಲ್ಲೂ ಮತ್ತೋರ್ವ ಟೀಂ ಇಂಡಿಯಾ ಆಟಗಾರ ಅಂಬಾಟಿ ರಾಯುಡುರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ.
ಅರೆ ರಾಯುಡು ವಿಶ್ವಕಪ್ ತಂಡಕ್ಕೆ ಆಯ್ಕೆಯೇ ಆಗಿಲ್ಲ, ಹೀಗಿದ್ದೂ ಅವರನ್ನೇಕೆ ಟ್ರೋಲ್ ಮಾಡಲಾಗುತ್ತಿದೆ ಎಂದು ನೀವು ಭಾವಿಸಿದ್ದರೆ, ಇದಕ್ಕೆ ಕಾರಣ ರಾಯುಡು ಈ ಹಿಂದೆ ಮಾಡಿದ್ದ ಟ್ವೀಟ್.. ಹೌದು.. ಈ ಹಿಂದೆ ಐಸಿಸಿಯ ಆಯ್ಕೆ ಸಮಿತಿ ವಿಶ್ವಕಪ್ ಆಟಗಾರರ ತಂಡ ಪ್ರಕಟಿಸಿತ್ತು. ಆದರೆ ಈ ವೇಳೆ ರಾಯುಡುರನ್ನು ಕೈ ಬಿಟ್ಟಿತ್ತು. ಇದಕ್ಕೆ ವ್ಯಂಗ್ಯಾತ್ಮಕವಾಗಿ ಟ್ವೀಟ್ ಮಾಡಿದ್ದ ರಾಯುಡು, 'ಈಗಷ್ಟೇ ವಿಶ್ವಕಪ್ ಟೂರ್ನಿ ನೋಡೋದಕ್ಕೆ 3D ಗ್ಲಾಸ್( ಕನ್ನಡಕ) ಆರ್ಡರ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ವ್ಯಾಪಕ ವೈರಲ್ ಆಗಿತ್ತು.
ಇದೀಗ ಶಿಖರ್ ಧವನ್ ಗಾಯಗೊಂಡು ಹೊರಗುಳಿದಿದ್ದು, ಅವರ ತಂಡಕ್ಕೆ ಅನುಭವಿ ರಾಯುಡುರನ್ನು ಆಯ್ಕೆ ಮಾಡದೇ ಅನನುಭವಿ ರಿಷಬ್ ಪಂತ್ ರನ್ನು ಆಯ್ಕೆ ಮಾಡಲಾಗಿದೆ. ಇದೇ ಕಾರಣಕ್ಕೆ ಟ್ವೀಟಿಗರು ಮತ್ತೆ ರಾಯುಡುರನ್ನು ಟ್ವಿಟರ್ ನಲ್ಲಿ ಟ್ರೋಲ್ ಗಳ ಮೂಲಕ ರೋಸ್ಟ್ ಮಾಡುತ್ತಿದ್ದಾರೆ. ಈ ಹಿಂದೆ ವಿಜಯ್ ಶಂಕರ್ ಆಯ್ಕೆಯಾದಾಗಲೂ ಕೂಡ ಇದೇ ರಾಯುಡುರನ್ನು ಟ್ರೋಲ್ ಮಾಡಲಾಗಿತ್ತು.
ಇನ್ನು ಭಾರತ ತನ್ನ ಮುಂದಿನ ಪಂದ್ಯವನ್ನು ನಾಳೆ ಅಂದರೆ ಜೂನ್ 22ರಂದು ಆಫ್ಘಾನಿಸ್ತಾನದ ವಿರುದ್ಧ ಆಡಲಿದ್ದು, ಸೌಥ್ಯಾಂಪ್ಟನ್ ಕ್ರೀಡಾಂಗಣದಲ್ಲಿ ಈ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ.