ಲಂಡನ್: ಹಾಲಿ ವಿಶ್ವಕಪ್ ಟೂರ್ನಿಯಲ್ಲಿನ ಭಾರತ ತಂಡದ ವಿರುದ್ಧದ ಸೋಲಿನ ಬಳಿಕ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ ಎಂದು ಪಾಕಿಸ್ತಾನ ತಂಡದ ಕೋಚ್ ಮಿಕ್ಕಿ ಆರ್ಥರ್ ಹೇಳಿದ್ದಾರೆ.
ಈ ಹಿಂದೆ ಭಾರತದ ವಿರುದ್ಧ ಪಾಕಿಸ್ತಾನ ಭಾರಿ ಅಂತರದ ಸೋಲು ಕಂಡು ಪಾಕ್ ಕ್ರೀಡಾಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ತಂಡದ ನಾಯಕ ಸೇರಿದಂತೆ ಇಡೀ ತಂಡದ ಆಟಗಾರರು ಟೀಕೆ ಹಾಗೂ ಟ್ರೋಲ್ಗೆ ಗುರಿಯಾಗಿದ್ದರು. ಈ ಬಗ್ಗೆ ಪಾಕ್ ಆಟಗಾರರು ಕೆಟ್ಟಪದಗಳನ್ನು ಬಳಸಬೇಡಿ ಎಂದು ಅಳಲನ್ನು ತೋಡಿಕೊಂಡಿದ್ದರು.
ಇದೀಗ ಪಾಕ್ ತಂಡದ ಕೋಚ್ ಮಿಕ್ಕಿ ಅರ್ಥರ್ ತಮ್ಮ ನೋವನ್ನು ಹೊರಹಾಕಿದ್ದು, ಸೋಲಿನ ಬಳಿಕ ಅಭಿಮಾನಿಗಳ ಟೀಕೆಗಳಿಂದ ತಾವು ಆತ್ಮಹತ್ಯೆಗೆ ಮುಂದಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಎದುರು ತಮ್ಮನೋವು ತೋಡಿಕೊಂಡಿರುವ ಆರ್ಥರ್, 'ಭಾರತದ ವಿರುದ್ಧ ಪಾಕ್ ಸೋತಿದ್ದು ತುಂಬ ನೋವಾಯಿತು. ಎಷ್ಟರಮಟ್ಟಿಗೆ ಅಂದರೆ ಕಳೆದ ಭಾನುವಾರ ಆತ್ಮಹತ್ಯೆ ಮಾಡಿಕೊಳ್ಳಲೂ ನಾನು ಬಯಸಿದ್ದೆ. ಆದರೆ, ನಿಮಗೆಲ್ಲ ತಿಳಿದಿರುವಂತೆ ಕೇವಲ ಒಂದು ಪ್ರದರ್ಶನವಾಗಿರುವುದಂರಿಂದ ನನ್ನ ನಿರ್ಧಾರವನ್ನು ಬದಾಯಿಸಿದೆ ಎಂದು ತಿಳಿಸಿದ್ದಾರೆ.
ಇನ್ನು ಭಾರತ ತಂಡದ ವಿರುದ್ಧದ ಒಂದೇ ಒಂದು ಸೋಲು ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿಯನ್ನು ಮಂಕಾಗಿಸಿದ್ದು, ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸಾಧಿಸಿದ ಗೆಲುವು ಆ ತಂಡದ ಸೆಮೀಸ್ ಹಾದಿಯನ್ನು ಜೀವಂತವಾಗಿರಿಸಿದೆ.
ಕಳೆದ ಭಾನುವಾರ ಆಫ್ರಿಕಾ ವಿರುದ್ಧ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕ್ 49 ರನ್ ಅಂತರದಿಂದ ಗೆಲುವು ಸಾಧಿಸಿತು. ಆದರೆ, ಜೂನ್ 16 ರಂದು ಮ್ಯಾಂಚೆಸ್ಟರ್ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕ್, ಟೀಂ ಇಂಡಿಯಾ ವಿರುದ್ಧ 89ರನ್ ಅಂತರದಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿತ್ತು. ಸದ್ಯ ಪಾಕ್ ಪಾಲಿಗೆ ಲೀಗ್ ಹಂತದ ಮೂರು ಪಂದ್ಯಗಳು ಉಳಿದಿದ್ದು, ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಸೆಮಿಫೈನಲ್ ಹಂತಕ್ಕೆ ಬರಲಿದೆ. ಪಾಕ್ ತನ್ನ ಮುಂದಿನ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಬುಧವಾರ ಪಂದ್ಯ ನಡೆಯಲಿದೆ.