ಮತದಾನಕ್ಕಾಗಿ ಜನತೆಗೆ ಸ್ಪೂರ್ತಿ ನೀಡಿ: ಪ್ರಧಾನಿ ಮೋದಿ ಕರೆಗೆ 'ಒಕೆ' ಎಂದ ಸಚಿನ್
ನವದೆಹಲಿ: ಲೋಕ ಸಮರಕ್ಕೆ ದೇಶಕ್ಕೆ ದೇಶವೇ ಸಿದ್ದವಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಗರಿಷ್ಠ ಮತದಾರರು ಮತ ಚಲಾಯಿಸಲು ಪ್ರೇರಣೆಯಾಗಬೇಕೆಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ದೇಶದ ಪ್ರಮುಖ ಕ್ರೀಡಾಪಟುಗಳನ್ನು ಹೆಸರಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಸಚಿನ್ ತಾವು ಮೋದಿಯವರ ಕರೆಗೆ ಓಗೊಡುವುದಾಗಿ ಹೇಳಿದ್ದಾರೆ.
"ಸಚಿನ್ ತೆಂಡುಲ್ಕರ್ ಅಂತಹವರು ಏನಾದರೂ ಹೇಳಿದಾಗ ರಾಷ್ಟ್ರವು ಅದನ್ನು ಗಂಭೀರವಾಗಿ ತೆಗೆದುಕ್ಕೊಳ್ಳುತ್ತದೆ. ಹಾಗಾಗಿ ನಾನು 2019 ರ ಚುನಾವಣೆಯಲ್ಲಿ ಬಹು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ನಿಮ್ಮಂತಹಾ ಗಮನಾರ್ಹ ವ್ಯಕ್ತಿಗಳು ಪ್ರೇರಣೆಯಾಗಬೇಕು ಎಂದು ವಿನಮ್ರವಾಗಿ ಕೇಳುತ್ತೇನೆ. ಒಂದು ಮತವು ಜನರ ದನಿಯನ್ನು ಆಲಿಸುವ ಉತ್ತಮ ಮಾರ್ಗವಾಗಲಿದೆ" ಪ್ರಧಾನಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಯಿಸಿರುವ ಸಚಿನ್ ತೆಂಡುಲ್ಕರ್ "ನಿಮ್ಮ ವಿನಂತಿಗೆ ನನ್ನ ಸಹಮತವಿದೆ.ಗೆಲುವು ಕಾಣಬಯಸುವ ತಂಡದ ನಿರ್ಮಾಣಕ್ಕಾಗಿ ನೈಜ ಪ್ರತಿಭೆಯನ್ನು ಗುರುತಿಸುವ ಉತ್ತಮ ಆಯ್ಕೆದಾರರ ಅಗತ್ಯವಿದೆ, ಹಾಗೆಯೇ ಶ್ರೇಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಉತ್ತಮ ಜನಪ್ರತಿನಿಧಿಗಳನ್ನು ಗುರುತಿಸುವುದು ಬಹು ಅಗತ್ಯ. ಅದಕ್ಕಾಗಿ ನಮಗೆ ಬದ್ದ ಮತದಾರರು ಬೇಕು.ಹಾಗಾಗಿ ಯಶಸ್ವಿ ಭಾರತ ನಿರ್ಮಾಣಕ್ಕಾಗಿ ನಿಮ್ಮ ಕೈಜೋಡಿಸಿ" ಎಂದು ಮತದಾರರಿಗೆ ಕರೆ ನಿಡಿದ್ದಾರೆ.
ಇನ್ನು ಪ್ರಧಾನಿ ಮೋದಿ ಪ್ರಜಾಪ್ರಭುತ್ವದ ನಜ ಗೆಲುವಿಗಾಗಿ ಪ್ರತಿಯೊಬ್ಬ ಅರ್ಹ ಮತದಾರರೂ ಮತ ನೀಡಬೇಕೆಂದು ಕೇಳಿಕೊಂಡಿದ್ದಾರೆ. ಇದಕ್ಕಾಗಿ ನರೇಂದ್ರ ಮೋದಿ ಸರಣಿ ಟ್ವೀಟ್ ಗಳನ್ನು ಮಾಡಿದ್ದು ಸಚಿನ್ ತೆಂಡೂಲ್ಕರ್ ಮಾತ್ರವಲ್ಲದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅನಿಲ್ ಕುಂಬ್ಳೆ, ವಿವಿಎಸ್ ಲಲಕ್ಷ್ಮಣ್, ವೀರೇಂದ್ರ ಸೆಹ್ವಾಗ್ ಎಲ್ಲರಿಗೆ ಸಹ ತಮ್ಮವಿಶೇಷ ವಿನಂತಿಯನ್ನು ಸಲ್ಲಿಸಿದ್ದಾರೆ.