ಬೆಂಗಳೂರು: ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್ ಸಿಬಿ ತಂಡದ ಇತ್ತೀಚಿನ ಗೆಲುವುಗಳಿಂದ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಮೇ.30 ರಂದು ನಡೆದ ಪಂದ್ಯದಲ್ಲಿ ಮಳೆ ನೀರಿನಲ್ಲಿ ಆರ್ ಸಿಬಿ ಪ್ಲೇ ಆಫ್ ಕನಸು ಕೊಚ್ಚಿಹೋಯಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ-ಆರ್ ಆರ್ ನಡುವಿನ ಪಂದ್ಯ ಮಳೆಯ ಕಾರಣದಿಂದಾಗಿ ತಲಾ 5 ಓವರ್ ಗಳಿಗೆ ಇಳಿಕೆ ಮಾಡಲಾಯಿತು. ನಿಗದಿತ 5 ಓವರ್ ಗಳಲ್ಲಿ ಆರ್ ಸಿಬಿ 7 ವಿಕೆಟ್ ಕಳೆದುಕೊಂಡು ಎದುರಾಳಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ 63 ರನ್ ಗಳ ಟಾರ್ಗೆಟ್ ನೀಡಿತ್ತು. ಆರ್ ಸಿಬಿ ಟಾರ್ಗೆಟ್ ನ್ನು ಬೆನ್ನಟ್ಟಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಒಂದು ವಿಕೆಟ್ ನಷ್ಟಕ್ಕೆ 3.2 ಓವರ್ ಗಳಲ್ಲಿ 41 ರನ್ ಗಳಿಸಿತ್ತು.
ಪಂದ್ಯ ನಿರ್ಣಾಯಕ ಹಂತದಲ್ಲಿರುವಾಗ ಮತ್ತೆ ಮಳೆ ಪ್ರಾರಂಭವಾದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಷ್ಟೇ ಅಲ್ಲದೇ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಯಿತು. ಆರ್ ಸಿಬಿ ಪ್ಲೇ ಆಫ್ ಕನಸು ನನಸಾಗಬೇಕಿದ್ದರೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. 13 ಪಂದ್ಯಗಳ ಪೈಕಿ 4 ರಲ್ಲಿ ಗೆದ್ದು ಒಂದರಲ್ಲಿ ಅಂಕಗಳನ್ನು ಹಂಚಿಕೊಂಡಿರುವ ಆರ್ ಸಿಬಿ 9 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನುರಾಜಸ್ಥಾನ ರಾಯಲ್ಸ್ 11 ಅಂಕ ಗಳಿಸಿ 5 ನೇ ಸ್ಥಾನಕ್ಕೆ ಜಿಗಿದಿದ್ದು, ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.