ನವದೆಹಲಿ: ವಿಶ್ವಕಪ್ ಟೂರ್ನಿಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಮಹತ್ವಾಕಾಂಕ್ಷಿ ಟೂರ್ನಿಗೂ ಮೊದಲೇ ಟೀಂ ಇಂಡಿಯಾಗೆ ಆಘಾತವೊಂದು ಎದುರಾಗಿದೆ.
ಹೌದು.. ಭಾರತ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ಕೇದಾರ್ ಜಾಧವ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಡುವಿನ ಪಂದ್ಯದಲ್ಲಿ ಕೇದಾರ್ ಜಾದವ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಮುಂದಿನ ಐಪಿಎಲ್ ಪಂದ್ಯಗಳಿಗೆ ಕೇದಾರ್ ಜಾಧವ್ ಅಲಭ್ಯರಾಗಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಎಸ್ ಕೆ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು, ಕೇದಾರ್ ಜಾದವ್ ಅವರನ್ನು ಎಕ್ಸ್ ರೇ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರ ವರದಿ ಬಂದ ಬಳಿಕ ಅವರನ್ನು ಹಾಲಿ ಐಪಿಎಲ್ ಟೂರ್ನಿಯಲ್ಲಿ ಮುಂದುವೆರಿಸುವ ಅಥವ ಕೈ ಬಿಡುವ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಮತ್ತೆ ಜಾದವ್ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಸಂಶಯ ಎಂದು ಹೇಳಿದ್ದಾರೆ.
ಪಂಜಾಬ್ ಬ್ಯಾಟಿಂಗ್ ವೇಳೆ ಓವರ್ ಥ್ರೋ ತಡೆಯುವಾಗ ಜಾದವ್ ಗಾಯಗೊಂಡಿದ್ದರು ಎನ್ನಲಾಗಿದೆ. ಆ ಮೂಲಕ 14 ಪಂದ್ಯಗಳ ಬಳಿಕ ಜಾದವ್ ಟೂರ್ನಿಯನ್ನು ತೊರೆಯುತ್ತಿದ್ದಾರೆ. ಈ ಹಿಂದೆ ಹ್ಯಾಮ್ ಸ್ಟ್ರಿಂಗ್ ಸೆಳೆತಕ್ಕೆ ಒಳಗಾಗಿದ್ದ ಕೇದಾರ್ ಜಾದವ್ ಬಳಿಕ ಚೇತರಿಸಿಕೊಂಜಡಿದ್ದರು.
ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾದ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ಜಾದವ್ ಪ್ರಮುಖ ಆಲ್ ರೌಂಡರ್ ಆಗಿ ಆಯ್ಕೆಯಾಗಿದ್ದರು.
ಇದೇ ಮೇ 25ರಿಂದ ಭಾರತದ ವಿಶ್ವಕಪ್ ಪಯಣ ಆರಂಭವಾಗಲಿದ್ದು, ಮೇ 25 ಮತ್ತು ಮೇ 28ರಂದು ನಡೆಯುವ ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯಗಳನ್ನಾಡಲಿದೆ. ಬಳಿಕ ಮೇ 30ರಿಂದ ಜುಲೈ 4ರವರೆಗೂ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು, ಜೂನ್ 5ರಿಂದ ಭಾರತದ ಪಂದ್ಯಗಳು ಆರಂಭವಾಗಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಕೊಹ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos