ನವದೆಹಲಿ: ಅಂಡರ್ 19 ಕ್ರಿಕೆಟ್ ವಿಶ್ವಕಪ್ ಪೈನಲ್ ಪಂದ್ಯದ ವೇಳೆ ಬಾಂಗ್ಲಾದೇಶ ಆಟಗಾರರು ತೋರಿದ್ದ ವರ್ತನೆ ಅಸಹ್ಯ ಮೂಡಿಸಿತ್ತು ಎಂದು ಭಾರತ ತಂಡದ ನಾಯಕ ಪ್ರಿಯಮ್ ಗರ್ಗ್ ಹೇಳಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗರ್ಗ್, ಬಾಂಗ್ಲಾ ಆಟಗಾರರು ವರ್ತನೆ ಅಸಹ್ಯ ಮೂಡಿಸಿತ್ತು. ಇಂಥ ಘಟನೆ ನಡೆಯಬಾರದಿತ್ತು ಎಂದು ಭಾವಿಸುತ್ತೇನೆ. ಆದರೂ ಪರವಾಗಿಲ್ಲ ನಾವು ಸಮಾಧಾನವಾಗಿ ವರ್ತಸಿದೆವು. ಇದೆಲ್ಲವು ಆಟದ ಒಂದು ಭಾಗ ಎಂದು ಭಾವಿಸಿದೆವು ಎಂದು ಹೇಳಿದರು. ಅಲ್ಲದೆ ನಾವು ಒಂದನ್ನು ಗೆದ್ದುಕೊಂಡರೆ , ಮತ್ತೊಂದನ್ನು ಕಳೆದುಕೊಳ್ಳುತ್ತೇವೆ ಎಂದು ಪ್ರಿಯಮ್ ಬಾಂಗ್ಲಾ ತಂಡವನ್ನು ಪರೋಕ್ಷವಾಗಿ ಟೀಕಿಸಿದರು.
ಇನ್ನು ಇದೇ ವಿಚಾರವಾಗಿ ಮಾತನಾಡಿದ ಬಾಂಗ್ಲಾ ಯುವ ಕ್ರಿಕೆಟ್ ತಂಡ ನಾಯಕ ಅಕ್ಬರ್ ಅಲಿ, ‘ಈ ರೀತಿಯ ಘಟನೆ ನಡೆಯಬಾರದಿತ್ತು. ಅಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ನಿಜಕ್ಕೂ ನನಗೆ ಸರಿಯಾದ ಮಾಹಿತಿ ಇಲ್ಲ. ಆದರೆ, ಫೈನಲ್ ಪಂದ್ಯದ ವೇಳೆ ಆಟಗಾರರು ಭಾವೋದ್ವೇಗಕ್ಕೆ ಒಳಗಾಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನಾವು ಎದುರಾಳಿ ತಂಡವನ್ನು ವಿಶ್ವಾಸದಿಂದ ಕಾಣಬೇಕು. ಕ್ರೀಡೆಯನ್ನು ಗೌರವಿಸಬೇಕು. ಕ್ರಿಕೆಟ್ ಜಂಟಲ್ ಮನ್ಗಳ ಆಟ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನನ್ನ ತಂಡದ ಪರವಾಗಿ ನಾನು ಕ್ಷಮೆ ಕೋರುತ್ತೇನೆ,’ ಎಂದು ಹೇಳಿದ್ದಾರೆ.