ಕ್ರಿಕೆಟ್

ಸಮರ್ಥ್, ಪಡಿಕ್ಕಲ್ ಅರ್ಧಶತಕ, ಸೌರಾಷ್ಟ್ರ-ಕರ್ನಾಟಕ ಪಂದ್ಯ ಡ್ರಾದಲ್ಲಿ ಅಂತ್ಯ

Raghavendra Adiga

ರಾಜ್ ಕೊಟ್‌, ರವಿಕುಮಾರ್ ಸಮರ್ಥ್ (74 ರನ್) ಹಾಗೂ ದೇವದತ್ ಪಡಿಕ್ಕಲ್ (ಔಟಾಗದೆ 53 ರನ್) ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಪಂದ್ಯವನ್ನು ಸೌರಾಷ್ಟ್ರ ವಿರುದ್ಧ  ಡ್ರಾ ಸಾಧಿಸಿತು. ಪ್ರಥಮ ಇನಿಂಗ್ಸ್‌ ಮುನ್ನಡೆಯೊಂದಿಗೆ ಉನದ್ಕತ್ ಬಳಗ ಮೂರು ಅಂಕಗಳನ್ನು ತನ್ನ ಕಿಸೆಗೆ ಹಾಕಿಕೊಂಡಿತು. ಕನ್ನಡಿಗರಿಗೆ ಕೇವಲ ಒಂದು ಅಂಕ ಒಲಿಯಿತು.

ಇಲ್ಲಿನ ಮಾಧವ್‌ರಾವ್ ಕ್ರಿಕೆಟ್ ಕ್ರೀಡಾಂಗಣದಲ್ಲಿ  ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಂದ ಮಂಗಳವಾರ ಬೆಳಗ್ಗೆೆ ನಾಲ್ಕನೇ ದಿನ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕ ತಂಡ 89 ಓವರ್ ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆೆ 220 ರನ್ ಕಲೆಹಾಕಿತು. ಇನ್ನೂ 190 ರನ್ ಹ್ನಿನಡೆ ಅನುಭವಿಸಿತು. ಇಬ್ಬರೂ ನಾಯಕರ ಒಪ್ಪಿಗೆಯ ಮೇರೆಗೆ ಪಂದ್ಯವನ್ನು ಡ್ರಾ ಘೋಷಿಸಲಾಯಿತು.

ಕಳೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆೆ ಆಸರೆಯಾಗಿದ್ದ ಆರ್. ಸಮರ್ಥ್, ಈ ಪಂದ್ಯದಲ್ಲೂ ರಾಜ್ಯವನ್ನು ಸೋಲಿನಿಂದ ಪಾರು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೌರಾಷ್ಟ್ರ ಪ್ರಥಮ ಇನಿಂಗ್ಸ್‌ ನಲ್ಲಿ ಗಳಿಸಿದ್ದ 581 ರನ್ ಬೃಹತ್ ಮೊತ್ತಕ್ಕೆೆ ಪ್ರತ್ಯುತ್ತರವಾಗಿ ಪ್ರಥಮ ಇನಿಂಗ್ಸ್‌ ಮಾಡಿದ್ದ ಕರ್ನಾಟಕ ತಂಡ ಕೇವಲ 171 ರನ್ ಗಳಿಗೆ ಆಲೌಟ್ ಆಗಿತ್ತು. 

ಏಕಾಂಗಿ ಹೋರಾಟ ನಡೆಸಿದ್ದ ಆರ್. ಸಮರ್ಥ್ 63 ರನ್ ಗಳಿಸಿದ್ದರು. ನಂತರ, ಫಾಲೋ ಆನ್ ಪಡೆದು ದ್ವಿತೀಯ ಇನಿಂಗ್ಸ್‌ ಮಾಡಿದ ರಾಜ್ಯ ತಂಡದ ಪರ ಮತ್ತೊಂದು ಅರ್ಧಶತನ ಕೊಡುಗೆಯಾಗಿ ನೀಡಿದರು. ಇವರು ಎರಡೂ ಇನಿಂಗ್ಸ್‌ ಗಳಲ್ಲಿ ತೋರಿದ ಬ್ಯಾಟಿಂಗ್‌ನಿಂದಾಗಿ ತಂಡ ಸೋಲಿನಿಂದ ಪಾರಾಯಿತು. 159 ಎಸೆತಗಳನ್ನು ಎದುರಿಸಿದ್ದ ಅವರು 10 ಬೌಂಡರಿಯೊಂದಿಗೆ 74 ರನ್ ಗಳಿಸಿದರು. 

ದೇವದತ್ತ ಪಡಿಕ್ಕಲ್ ಕೂಡ ನಿರಾಸೆ ಮಾಡಲಿಲ್ಲ. 133 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. ಪಡಿಕ್ಕಲ್ ಇನಿಂಗ್ಸ್‌ ನಲ್ಲಿ ಒಂಬತ್ತು ಬೌಂಡರಿಗಳು ಸೇರಿವೆ. ಮತ್ತೊಬ್ಬ ಆರಂಭಿಕ ರೋಹನ್ ಕದಮ್ ಕೂಡ 42 ರನ್ ಗಳಿಸಿ ತಂಡಕ್ಕೆೆ ಆಸರೆಯಾಗಿದ್ದರು. ಕೆ.ಕೃಷ್ಣಮೂರ್ತಿ (19) ಹಾಗೂ ಪವನ್ ದೇಶ್ ಪಾಂಡೆ (12) ಈ ಇನಿಂಗ್ಸ್‌ ನಲ್ಲೂ ಬ್ಯಾಟಿಂಗ್ ವೈಫಲ್ಯತೆ ಅನುಭವಿಸಿದರು. ಒಟ್ಟು 17 ಅಂಕಗಳೊಂದಿಗೆ ಕರ್ನಾಟಕ ತಂಡ ಎ ಮತ್ತು ಬಿ ಎಲೈಟ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. 16 ಅಂಕಗಳೊಂದಿಗೆ ಸೌರಾಷ್ಟ್ರ ಐದನೇ ಸ್ಥಾನದಲ್ಲಿದೆ. 

ಸಂಕ್ಷಿಪ್ತ ಸ್ಕೋರ್
ಸೌರಾಷ್ಟ್ರ 
ಪ್ರಥಮ ಇನಿಂಗ್ಸ್‌: 581/7

ಕರ್ನಾಟಕ
ಪ್ರಥಮ ಇನಿಂಗ್ಸ್‌: 171
ದ್ವಿತೀಯ ಇನಿಂಗ್ಸ್‌: 89 ಓವರ್ ಗಳಿಗೆ 220/4 (ರವಿಕುಮಾರ್ ಸಮರ್ಥ್ 74, ದೇವದತ್ತ ಪಡಿಕ್ಕಲ್ ಔಟಾಗದೆ 53, ರೋಹನ್ ಕದಮ್ 42; ಧರ್ಮೇಂದ್ರ ಸಿನ್‌ಹ್‌ ಜಡೇಜಾ 97  ಕ್ಕೆೆ 2, ಕಮಲೇಶ್ ಮಕ್ವಾಾನ 32 ಕ್ಕೆೆ 1, ಜಯದೇವ್ ಉನದ್ಕತ್ 53 ಕ್ಕೆೆ 1)

SCROLL FOR NEXT