ನವದೆಹಲಿ: ಕೊರೋನಾ ವೈರಸ್ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆ ಅಸಾಧ್ಯ ಎಂಬುದನ್ನು ಕೊನೆಗೂ ಮನಗಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇದೇ ವಾರದ ಆರಂಭದಲ್ಲಿ ತನ್ನ ಜಾಗತಿಕ ಮಟ್ಟದ ಟಿ20 ಟೂರ್ನಿಯನ್ನು 2022ಕ್ಕೆ ಮುಂದೂಡಿತ್ತು.
ಅಂದಹಾಗೆ ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಯೋಜನೆ ಆಗಬೇಕಿತ್ತು.
ಆದರೆ, ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಟೂರ್ನಿಗೆ ಆತಿಥ್ಯ ಈ ವರ್ಷ ಕಷ್ಟವೆಂದು ಖುದ್ದಾಗಿ ಆಸ್ಟ್ರೇಲಿಯಾ ಸರಕಾರವೇ ಹೇಳಿದ್ದರೂ, ಐಸಿಸಿ ಮಾತ್ರ ಟೂರ್ನಿ ಮುಂದೂಡಲು ಮೀನಮೇಶ ಎಣಿಸುತ್ತಿತ್ತು.
ಇದಕ್ಕೆ ಮುಖ್ಯ ಕಾರಣ ಐಸಿಸಿಯ ಮಾಜಿ ಮುಖ್ಯಸ್ಥ ಶಶಾಂಕ್ ಮನೋಹರ್ ಎಂಬ ಎಚ್ಚರಿಯ ಸಂಗತಿಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಬಸಿತ್ ಅಲಿ ಇದೀಗ ಬಹಿರಂಗ ಪಡಿಸಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮಾಜಿ ಅಧ್ಯಕ್ಷ ಕೂಡ ಆಗಿದ್ದ ಶಶಾಂಕ್ ಮನೋಹರ್ಗೆ ಈ ವರ್ಷ ಐಪಿಎಲ್ ಆಯೋಜನೆ ಆಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಟಿ20 ವಿಶ್ವಕಪ್ ಟೂರ್ನಿ ಮುಂದೂಡುವುದನ್ನು ತಡ ಮಾಡುತ್ತಿದ್ದರು ಎಂದಿದ್ದಾರೆ.
ಮಾರ್ಚ್ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಿಸಿಸಿಐ ತನ್ನ ಮುಂದಿನ ಆದೇಶದವರೆಗೆ ರದ್ದು ಪಡಿಸಿತ್ತು. ಬಳಿಕ ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಟಿ20 ವಿಶ್ವಕಪ್ ರದ್ದಾದರೆ ಆ ಸಮಯದಲ್ಲಿ ಐಪಿಎಲ್ 2020 ಆಯೋಜನೆಗೆ ಯೋಜನೆ ರೂಪಿಸಿಕೊಂಡಿತ್ತು.
ಅಂದಹಾಗೆ ಬಿಸಿಸಿಐ ತನ್ನ ಹಿತದೃಷ್ಟಿಯಿಂದ ವಿಶ್ವಕಪ್ ಮುಂದೂಡುವಂತೆ ಐಸಿಸಿ ಮೇಲೆ ಒತ್ತಡ ಹೇರಿದೆ ಎಂದು ಹಲವುರು ಆರೋಪಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಶಶಾಂಕ್ ಮನೋಹರ್ ಅವರಿಗೂ ಕೂಡ ವಿಶ್ವಕಪ್ ಅವಧಿಯಲ್ಲಿ ಐಪಿಎಲ್ ಆಯೋಜನೆ ಆಗುವುದು ಇಷ್ಟವಿರಲಿಲ್ಲ. ಹೀಗಾಗಿ ಟೂರ್ನಿ ಮುಂದೂಡುವುದನ್ನು ಬೇಕೆಂದೇ ತಡ ಮಾಡಿದ್ದರು ಎಂದು ಹೇಳಿದ್ದಾರೆ.