ಕ್ರಿಕೆಟ್

ಜಾತಿ ನಿಂದನೆ ಆರೋಪ: ವಿಷಾದ ವ್ಯಕ್ತಪಡಿಸಿದ ಯುವರಾಜ್ ಸಿಂಗ್ 

Nagaraja AB

ನವದೆಹಲಿ: ಟೀಮ್‌ ಇಂಡಿಯಾದ ಸ್ಟಾರ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್‌ ವಿರುದ್ಧ ಬಳಕೆ ಮಾಡಿರುವ ಪದದಿಂದಾಗಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ. 

ತಪ್ಪಾಗಿ ಅರ್ಥ ಮಾಡಿಕೊಂಡಿದ್ದು, ಉದ್ದೇಶಪೂರ್ವಕವಾಗಿ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. 

ಇತ್ತೀಚೆಗೆ ಟೀಮ್‌ ಇಂಡಿಯಾ ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಜೊತೆಗೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿದ್ದ ಯುವರಾಜ್‌, ತಮ್ಮ ಸಂಭಾಷಣೆ ವೇಳೆ ಆನ್‌ಲೈನ್‌ ನಲ್ಲಿ  ಇದ್ದಂತದ ಚಹಲ್‌ ಮತ್ತು ಕುಲ್ದೀಪ್‌ ಅವರನ್ನು 'ಭಂಗಿ' ಎಂದು ಕರೆದು ಅನಗತ್ಯವಾಗಿ ವಿವಾದವನ್ನು ಮೇಲೆ ಎಳೆದುಕೊಂಡಿದ್ದರು. 

ಈ ವಿವಾದ ಸಂಬಂಧ ಇಂದು ಟ್ವೀಟರ್ ನಲ್ಲಿ ಸ್ಪಷ್ಟನೆ ನೀಡಿರುವ ಯುವರಾಜ್ ಸಿಂಗ್, ಜಾತಿ, ಬಣ್ಣ, ಮತ ಅಥವಾ ಲಿಂಗದ ಆಧಾರದ ತಾರತಮ್ಯ ಮಾಡುವುದರಲ್ಲಿ ನಾನು ನಂಬಿಕೆ ಹೊಂದಿಲ್ಲ. ಜನರ ಕಲ್ಯಾಣಕ್ಕಾಗಿ ನನ್ನ ಜೀವನವನ್ನು ಮುಡುಪಾಗಿಟ್ಟಿದ್ದು, ಅದನ್ನು ಮುಂದುವರೆಸುತ್ತೇನೆ. ಗೌರವಯುತ ಜೀವನ ಹಾಗೂ ಪ್ರತಿಯೊಬ್ಬರನ್ನು ಗೌರವವದಿಂದ ಕಾಣುವುದರಲ್ಲಿ ನಂಬಿಕೆ ಹೊಂದಿದ್ದೇನೆ ಎಂದಿದ್ದಾರೆ. 

ಸ್ನೇಹಿತರೊಂದಿಗೆ ಸಂಭಾಷಣೆಯಲ್ಲಿ ತೊಡಗಿದಾಗ ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ. ಅದು ಅನಗತ್ಯವಾಗಿತ್ತು. ಆದಾಗ್ಯೂ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ತಮ್ಮಿಂದ ಉದ್ದೇಶಪೂರ್ವಕವಾಗಿ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ. ಭಾರತ ದೇಶ ಹಾಗೂ ಇಲ್ಲಿನ ಎಲ್ಲಾ ಜನರನ್ನು ಪ್ರೀತಿಸುವುದಾಗಿ ಅವರು ಹೇಳಿದ್ದಾರೆ.

'ಭಂಗಿ' ಎಂಬುದು ಉತ್ತರ ಭಾರದಲ್ಲಿನ ದಲಿತ ಜಾತಿಯ ಜನರನ್ನು ಕರೆಯಲು ಮೇಲ್ವರ್ಗದ ಜನರು ಬಳಕೆ ಮಾಡುವ ಪದವಾಗಿದೆ. ಅಂದಹಾಗೆ ಜಾತಿ ನಿಂದನೆ ನಿರ್ಮೂಲನೆ ಸಲುವಾಗಿ ಈ ಪದ ಬಳಕೆಗೆ ನಿಷೇಧವಿದೆ. ಹೀಗಿದ್ದರೂ ಯುವರಾಜ್‌ ಸಿಂಗ್‌ ಸೋಷಿಯಲ್‌ ಮೀಡಿಯಾ ವೇದಿಕೆಯಲ್ಲಿ ಈ ಪದ ಬಳಕೆ ಮಾಡಿದ್ದು, ಇದರ ವಿರುದ್ಧ ಹರಿಯಾಣದಲ್ಲಿ ದಲಿತ ಪರ ಹೋರಾಟಗಾರ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

SCROLL FOR NEXT