ಕ್ರಿಕೆಟ್

ಎಲ್ಲರೂ ಒಂದೇ ಮನಸ್ಥಿತಿ ಹೊಂದಿರುವುದು ಅಗತ್ಯ: ವಿರಾಟ್ ಕೊಹ್ಲಿ

Lingaraj Badiger

ದುಬೈ: ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ನಾಳಿನ(ಶುಕ್ರವಾರ) 13ನೇ ಆವೃತ್ತಿಯ ಐಪಿಎಲ್‌ ಎಲಿಮಿನೇಟರ್‌ ಪಂದ್ಯದ ನಿಮ್ಮಿತ್ತ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ, ಟೂರ್ನಿಯನ್ನು ಗೆಲ್ಲುವ ಮನಸ್ಥಿತಿಯನ್ನು ಹೊಂದಿರಬೇಕೂ ಎಂದು ಸಹ ಆಟಗಾರರಿಗೆ ತಿಳಿಸಿದ್ದಾರೆ.

ಅಬುಧಾಬಿಯ ಶೇಖ್‌ ಝಾಯೆದ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಎದುರಿಸಲಿದೆ. ಈ ಹಣಾಹಣಿಯಲ್ಲಿ ಗೆದ್ದ ತಂಡ, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ತಂಡದ ವಿರುದ್ಧ ಎರಡನೇ ಕ್ವಾಲಿಫೈಯರ್‌ ಸೆಣಸಲಿದೆ.

"ನಾವೆಲ್ಲರೂ ಒಂದೇ ಮನಸ್ಥಿತಿಯಲ್ಲಿರಬೇಕು ಎಂದು ನಾನು ಬಯಸುತ್ತೇನೆ. ಕಳೆದ ಎರಡೂವರೆ ವಾರಗಳಲ್ಲಿ ನಾವು ಹೊಂದಿದ್ದಕ್ಕಿಂತ ಈ ಮುಂದಿನ ವಾರದಲ್ಲಿ ನಾವು ಹೆಚ್ಚು ಮೋಜು ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾವೆಲ್ಲರೂ ಸರಿಯಾದ ರೀತಿಯ ಒಂದೇ ಮನಸ್ಥಿತಿಯನ್ನು ಹೊಂದಿದ್ದೇವೆ ಎಂದಾದರೆ ಅದು ನಂಬಲಾಗದ್ದು," ಎಂದು ತಂಡದ ಸದಸ್ಯರಿಗೆ ಕೊಹ್ಲಿ ಹೇಳಿರುವ ವಿಡಿಯೋವನ್ನು ಆರ್‌ಸಿಬಿ ತನ್ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್‌ ಮಾಡಿದೆ.

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯನ್ನು ಹಲವು ಏರಿಳಿತಗಳನ್ನು ಕಂಡಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಗ್ರೂಪ್ ಹಂತದಲ್ಲಿ ಆಡಿದ 14 ಪಂದ್ಯಗಳಿಂದ 14 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಗೆಲುವು ಪಡೆದಿದ್ದರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನ ಪಡೆಯುತ್ತಿತ್ತು.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ಎರಡೂ ತಂಡಗಳ ಅಂಕಗಳು 14 ಆಗಿದ್ದರೂ, ರನ್‌ರೇಟ್‌ ಆಧಾರದ ಮೇಲೆ ಡೇವಿಡ್‌ ವಾರ್ನರ್‌ ನಾಯಕತ್ವದ ಹೈದರಾಬಾದ್‌ ಮೂರನೇ ಸ್ಥಾನಕ್ಕೇರಿತು.

ಐಪಿಎಲ್‌ ಪದಾರ್ಪಣೆ ಮಾಡಿದ ಕನ್ನಡಿಗ ದೇವದತ್‌ ಪಡಿಕ್ಕಲ್‌ ಸ್ಥಿರ ಪ್ರದರ್ಶನದ ಮೂಲಕ ಆರ್‌ಸಿಬಿ ತಂಡದಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದಾರೆ. 14 ಪಂದ್ಯಗಳಾಡಿರುವ ಅವರು ಐದು ಅರ್ಧಶತಕಗಳೊಂದಿಗೆ 472 ರನ್‌ಗಳನ್ನು ಕಲೆ ಹಾಕಿದ್ದಾರೆ. ಯುಜ್ವೇಂದ್ರ ಚಹಲ್‌ ಬೌಲಿಂಗ್‌ ವಿಭಾಗದಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

SCROLL FOR NEXT