ಕ್ರಿಕೆಟ್

ನಾಯಕನ ಸಾಮರ್ಥ್ಯವನ್ನೇ ಪ್ರಶ್ನಿಸುತ್ತಿದ್ದೀರಿ ಎಷ್ಟು ಸರಿ: ಆರ್‌ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಪಾರ್ಥಿವ್‌

Vishwanath S

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಕ್ತಾಯವಾದ ಬೆನ್ನಲ್ಲೆ ವಿರಾಟ್‌ ಕೊಹ್ಲಿಗಿಂತ ಐದು ಬಾರಿ ಐಪಿಎಲ್‌ ವಿಜೇತ ರೋಹಿತ್‌ ಶರ್ಮಾ ನಾಯಕತ್ವ ಉತ್ತಮ ಎಂದು ಹಲವು ದಿಗ್ಗಜರು ಅಭಿಪ್ರಾಯವನ್ನು ಹೊರಹಾಕಿದ್ದರು. ಇದೀಗ ಆರ್‌ಸಿಬಿ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಪಾರ್ಥಿವ್‌ ಪಟೇಲ್‌ ಕೂಡ ಇದೇ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಕ್ರಮವಾಗಿ ತಮ್ಮ ತಂಡಗಳನ್ನು ಕ್ರಮವಾಗಿ 2013 ರಿಂದ ಮುನ್ನಡೆಸುತ್ತಿದ್ದಾರೆ. ಆದರೆ, ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಆದರೆ, ವಿರಾಟ್‌ ಕೊಹ್ಲಿ ಆರ್‌ಸಿಬಿಗೆ ಇನ್ನೂ ಒಂದೇ ಒಂದು ಬಾರಿ ಕೂಡ ಪ್ರಶಸ್ತಿ ತಂದುಕೊಡುವಲ್ಲಿ ವಿಫಲರಾಗಿದ್ದಾರೆ.

ಇತ್ತೀಚೆಗೆ ಮುಕ್ತಾಯವಾಗಿದ್ದ 2020ರ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್‌ ಹಣಾಹಣಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧ ಸೋಲು ಅನುಭವಿಸಿತ್ತು. ಆದರೆ, ಮುಂಬೈ ಇಂಡಿಯನ್ಸ್ ಐದನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

2020ರ ಐಪಿಎಲ್‌ ಮುಕ್ತಾಯದ ಬೆನ್ನಲ್ಲೆ ಹಲವು ದಿಗ್ಗಜರು ಟೀಂ ಇಂಡಿಯಾದ ಸೀಮಿತ ಓವರ್‌ಗಳ ನಾಯಕತ್ವ ಬದಲಾವಣೆ ಮಾಡಬೇಕೆಂದು ಅಭಿಪ್ರಾಯವನ್ನು ಹೊರಹಾಕಿದ್ದರು. ಮೈಕಲ್‌ ವಾನ್‌, ಗೌತಮ್‌ ಗಂಭೀರ್‌ ಸೇರಿದಂತೆ ಹಲವು ಮಾಜಿ ಆಟಗಾರರು ಭಾರತ ಟಿ20 ತಂಡದ ನಾಯಕತ್ವವನ್ನು ರೋಹಿತ್‌ ಶರ್ಮಾಗೆ ನೀಡಬೇಕೆಂದು ಹೇಳಿದ್ದರು.

ಇದೀಗ ಈ ಸಾಲಿನಲ್ಲಿ ಪಾರ್ಥಿವ್‌ ಪಟೇಲ್‌ ಕೂಡ ಸೇರ್ಪಡೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ತೋರಿದ್ದ ಉತ್ತಮ ಪ್ರದರ್ಶನದ ಹೊರತಾಗಿಯೂ ಹದಿಮೂರನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಪಟೇಲ್‌ ಒಂದೇ ಒಂದು ಪಂದ್ಯದಲ್ಲಿ ಆಡಲಾಗಲಿಲ್ಲ. ಇದಕ್ಕೂ ಮೊದಲು ಪಟೇಲ್‌ ರೋಹಿತ್‌ ಶರ್ಮಾ ನಾಯಕತ್ವದಲ್ಲಿಯೂ ಆಡಿದ್ದರು. ಕೊಹ್ಲಿಗಿಂತ ರೋಹಿತ್‌ ಶರ್ಮಾ ನಾಯಕತ್ವ ಸ್ವಲ್ಪ ಉತ್ತಮವಾದದ್ದು ಎಂದು ಎಡಗೈ ಬ್ಯಾಟ್ಸ್‌ಮನ್‌ ಅಭಿಪ್ರಾಯ ಹೊರಹಾಕಿದ್ದಾರೆ.

ಪಂದ್ಯ ಅರ್ಥಮಾಡಿಕೊಳ್ಳುವಲ್ಲಿ ಹಾಗೂ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿರಾಟ್‌ ಕೊಹ್ಲಿಗಿಂತ ರೋಹಿತ್‌ ಶರ್ಮಾ ಉತ್ತಮ ಎಂಬ ಅಭಿಪ್ರಾಯವನ್ನು ಪಾರ್ಥಿವ್‌ ಪಟೇಲ್‌ ವ್ಯಕ್ತಪಡಿಸಿದ್ದಾರೆ.

"ಯಾರು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ, ಪಂದ್ಯವನ್ನು ಯಾರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಹಾಗೂ ಒತ್ತಡದಲ್ಲಿ ಸನ್ನಿವೇಶದಲ್ಲಿ ಯಾರು ಉತ್ತಮ ನಿರ್ಧಾರ ತೆಗೆದುಕೊಂಡು ತಂಡವನ್ನು ಗೆಲ್ಲಿಸಿಕೊಡುತ್ತಾರೆ ಎಂಬ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಈ ವಿಷಯದಲ್ಲಿ ಕೊಹ್ಲಿಗಿಂತ ರೋಹಿತ್‌ ಶರ್ಮಾ ಸ್ವಲ್ಪ ಉತ್ತಮರಾಗಿದ್ದಾರೆ ಎಂದು ಪಾರ್ಥಿವ್‌ ಪಟೇಲ್‌ ಹೇಳಿದರು.

ತಂಡದಲ್ಲೇ ಇದ್ದುಕೊಂಡು ನಾಯಕನ ಸಾಮರ್ಥ್ಯವನ್ನೇ ಪ್ರಶ್ನಿಸುತ್ತೀದ್ದೀರಿ. ಇದು ಎಷ್ಟು ಸರಿ ಎಂದು ಆರ್ ಸಿಬಿ ಅಭಿಮಾನಿಗಳು ಪಾರ್ಥಿವ್ ಪಟೇಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

SCROLL FOR NEXT