ಮುಂಬೈ: ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ತಮ್ಮ ಸಹೃದಯತೆಯನ್ನು ಪ್ರದರ್ಶಿಸಿದ್ದಾರೆ. ರಸ್ತೆ ಅಪಘಾತಕ್ಕೀಡಾದ ತನ್ನ ಸ್ನೇಹಿತೆಯನ್ನು ರಕ್ಷಿಸಿದ ಸಂಚಾರಿ ಪೊಲೀಸರನ್ನು ಖುದ್ದಾಗಿ ಭೇಟಿ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ.
ಇತ್ತೀಚೆಗೆ ಸಚಿನ್ ಅವರ ಸ್ನೇಹಿತೆಯೊಬ್ಬರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಮಯದಲ್ಲಿ ಅಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ತಕ್ಷಣವೇ ಸ್ಪಂದಿಸಿ ಆಕೆಯನ್ನು ಆಟೋದಲ್ಲಿ ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಘಟನೆಯನ್ನು ಟ್ವಿಟರ್ನಲ್ಲಿ ಬರೆದುಕೊಂಡಿರುವ ಸಚಿನ್, “ಇಂತಹ ಜನರಿಂದ ಜಗತ್ತು ಸುಂದರವಾಗಿದೆ” ಎಂದು ಹೇಳಿದ್ದಾರೆ. ಜನರ ಜೀವ ಉಳಿಸಲು ದೇಶಾದ್ಯಂತ ಟ್ರಾಫಿಕ್ ಪೊಲೀಸರು ಶ್ರಮಿಸುತ್ತಿದ್ದಾರೆ . ಅವರಿಗೆ ಅಭಿನಂದನೆಗಳು. ನಾವೆಲ್ಲರೂ ಸಂಚಾರ ನಿಯಮಗಳನ್ನು ಪಾಲಿಸೋಣ ಎಂದು ಸಚಿನ್ ಪೋಸ್ಟ್ ಮಾಡಿದ್ದಾರೆ.