ಕ್ರಿಕೆಟ್

ಭಾರತ ವಿರುದ್ಧ ಸರಣಿ ಸೋಲು: ಮೈದಾನದಲ್ಲೇ ಲಂಕಾ ಕೋಚ್ ಮಿಕ್ಕಿ ಆರ್ಥರ್, ನಾಯಕ ದಸುನ್ ವಾಗ್ವಾದ, ವಿಡಿಯೋ ವೈರಲ್!

Vishwanath S

ಕೊಲಂಬೊ: ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ವಿರುದ್ಧ ತಂಡವು ಭರ್ಜರಿ ಸೋಲು ಅನುಭವಿಸಿದ ನಂತರ ಶ್ರೀಲಂಕಾದ ಮುಖ್ಯ ಕೋಚ್ ಮಿಕ್ಕಿ ಆರ್ಥರ್ ಮತ್ತು ನಾಯಕ ದಸುನ್ ಶನಕಾ ಮೈದಾದನಲ್ಲೇ ವಾಗ್ವಾದ ನಡೆಸಿದ್ದು ಈ ವಿಡಿಯೋ ವೈರಲ್ ಆಗಿದೆ.

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಲಂಕಾ ವಿರುದ್ಧ ಭಾರತ 3 ವಿಕೆಟ್ ಗಳ ಅಂತರದಿಂದ ಜಯಗಳಿಸಿತ್ತು. ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ ಸಂದರ್ಶಕರನ್ನು ಸ್ಮರಣೀಯ ಗೆಲುವಿನತ್ತ ಕೊಂಡೊಯ್ಯುತ್ತಿದ್ದಾಗ ಆರ್ಥರ್ ಡ್ರೆಸ್ಸಿಂಗ್ ರೂಂನಲ್ಲಿ ಚಡಪಡಿಸುತ್ತಿದ್ದರು. ನಂತರ ಮೈದಾನಕ್ಕೆ ಬಂದಿದ್ದರು.

ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸ್ಸೆಲ್ ಅರ್ನಾಲ್ಡ್ ಈ ಬಗ್ಗೆ ಟ್ವೀಟ್ ಮಾಡಿದ್ದು 'ಕೋಚ್ ಮತ್ತು ಕ್ಯಾಪ್ಟನ್ ನಡುವಿನ ಸಂಭಾಷಣೆ ಡ್ರೆಸ್ಸಿಂಗ್ ಕೋಣೆಯಲ್ಲಿ ಆಗಬೇಕೆ ಹೊರತು ಮೈದಾನದಲ್ಲಿ ಅಲ್ಲ' ಎಂದು ಟ್ವೀಟಿಸಿದ್ದಾರೆ.

ದೀಪಕ್ ಚಹಾರ್ ಅಜೇಯ 69 ರನ್ ಹಾಗೂ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಅಜೇಯ 19 ರನ್ ನೊಂದಿಗೆ 84 ರನ್ ಗಳ ಜೊತೆಯಾಟದೊಂದಿಗೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. 

ಕೊನೆಯ ಮೂರು ಓವರ್‌ಗಳಲ್ಲಿ ಗೆಲ್ಲಲು ಭಾರತಕ್ಕೆ 16 ರನ್‌ಗಳ ಅಗತ್ಯವಿತ್ತು. ಈ ವೇಳೆ ಭುವನೇಶ್ವರ ಮತ್ತು ದೀಪಕ್ ಜೋಡಿ ವಿಕೆಟ್‌ ಬೀಳದಂತೆ ನೋಡಿಕೊಂಡರು. ಇನ್ನು ಐದು ಎಸೆತಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. ಇದರೊಂದಿಗೆ ಟೀಂ ಇಂಡಿಯಾ 2-0 ಸರಣಿಯ ಮುನ್ನಡೆ ಸಾಧಿಸಿದೆ.

ಇದು ಆತಿಥೇಯ ಲಂಕಾಗೆ ಭಾರತದ ವಿರುದ್ಧ ಸತತ 10ನೇ ಏಕದಿನ ಸರಣಿಯ ಸೋಲು.

SCROLL FOR NEXT